"ನಾನು ಡಿಸಿಎಂ ಆಗಲು ಶಿವರಾಮ್ ಹೆಬ್ಬಾರ್ ಬಳಗದ ಸಹಕಾರವೇ ಕಾರಣ''
ಕಾರವಾರ, ಫೆಬ್ರವರಿ 12: ಸಾರಿಗೆ ಇಲಾಖೆಗೆ ನಾನು ಸಚಿವನಾಗುವವರೆಗೂ 4 ಸಾವಿರ ಕೋಟಿ ರೂ.ಗಳ ಹಾನಿಯಲ್ಲಿತ್ತು. ನಂತರ ಕೊರೊನಾ ನಮ್ಮನ್ನೆಲ್ಲ ಆವರಿಸಿದ ಪರಿಣಾಮ 4 ತಿಂಗಳ ಕಾಲ ಇಡೀ ಬಸ್ ಸಂಚಾರವೇ ಸ್ಥಗಿತಗೊಂಡಿತ್ತು. ಆದರೆ ಮುಖ್ಯಮಂತ್ರಿಗಳ ಸಹಕಾರದಿಂದ ಎಲ್ಲ ಸಿಬ್ಬಂದಿಗಳಿಗೆ ಸರ್ಕಾರದಿಂದಲೇ ಸಂಬಳ ನೀಡುವಂತಹ ವ್ಯವಸ್ಥೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೂ ಆದ ಲಕ್ಷ್ಮಣ್ ಸವದಿ ಹೇಳಿದರು.
ಅವರು ಫೆ.12ರ ಶುಕ್ರವಾರ ಲೋಕೋಪಯೋಗಿ ಇಲಾಖೆಯ 24 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಬೇಡ್ತಿ ಸೇತುವೆ ಮತ್ತು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಯಲ್ಲಾಪುರದ ನೂತನ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶಿವರಾಮ್ ಹೆಬ್ಬಾರರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ನಾನು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವನಾಗಲು ಅವರ ಬಳಗದ ಸಹಕಾರವೇ ಕಾರಣ. ಇಂತಹ ಶಿವರಾಮ್ ಹೆಬ್ಬಾರರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ದಕ್ಷತೆಯಿಂದ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿಯ ಸದಸ್ಯರ ಅಪಹರಣ: ಪತ್ತೆಯಾದವರು ಹೇಳಿದ್ದೇನು?
ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿಲ್ಲ
ಕೊರೊನಾ ಪರಿಣಾಮದಿಂದಾಗಿ ಅತಿ ಹೆಚ್ಚು ತೊಂದರೆಗೊಳಗಾದ ಇಲಾಖೆಯೆಂದರೆ ಸಾರಿಗೆ ಇಲಾಖೆ. 4 ತಿಂಗಳ ಕಾಲ ಬಸ್ ಸಂಚಾರ ಸ್ಥಗಿತಗೊಂಡು, ತನ್ಮೂಲಕ ಸಿಬ್ಬಂದಿಗಳಿಗೆ ಸಂಬಳವಿಲ್ಲದೇ ತೀವೃ ತೊಂದರೆ ಅನುಭವಿಸುವಂತಾಯಿತು. ಮುಖ್ಯಮಂತ್ರಿಗಳಲ್ಲಿ ವಿನಂತಿಸಿದಂತೆ 650 ಕೋಟಿ ರೂ.ಗಳನ್ನು ಸಂಬಳಕ್ಕೆ ನೀಡಿದರು ಎಂದ ಅವರು, 1 ಕೋಟಿಗಿಂತ ಅಧಿಕ ಜನ ಪ್ರಯಾಣಿಸುತ್ತಾರೆ ಎಂದರು. ಇಂದು ಇಂಧನದ ದರ ಹೆಚ್ಚುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿಲ್ಲ. ನಮ್ಮ ಸಿಬ್ಬಂದಿಗಳ ಬೇಡಿಕೆಯ 10 ರಲ್ಲಿ 9ಕ್ಕೆ ಸಮ್ಮತಿ ನೀಡಿದ್ದೇವೆ. ಆದರೆ ಚಳುವಳಿ ಸಂದರ್ಭದಲ್ಲಿ ಯಾವ ಹೋರಾಟ-ಬೇಡಿಕೆಯ ಕುರಿತು ನೋವಿಲ್ಲ. ನಮ್ಮ ಸಿಬ್ಬಂದಿಗಳೇ ಬೇರೆಯವರ ಮಾತು ಕೇಳಿ, ಬಸ್ಗಳಿಗೆ ಕಲ್ಲು ಹೊಡೆದಿದ್ದು ನೋವಾಗಿದೆ. ಬಸ್ ಜನಸಾಮಾನ್ಯರದ್ದು. ಜನರು ಕೂಡ ಖಾಸಗಿ ಬಸ್ಗಳಿಗಿಂತಲೂ ಸರ್ಕಾರಿ ಬಸ್ಗಳಲ್ಲೇ ಪ್ರಯಾಣಿಸಬೇಕು. ತನ್ಮೂಲಕ ಇಲಾಖೆಗಾಗುವ ನಷ್ಟವನ್ನು ತಪ್ಪಿಸಬೇಕೆಂದರು.
ಚಾಲಕರಿಗೆ ಧೈರ್ಯ ತುಂಬಿದ್ದೇವೆ
24 ಕೋಟಿ ರೂ. ವೆಚ್ಚದಲ್ಲಿ ಶಿರಸಿ-ಯಲ್ಲಾಪುರಗಳ ಸಂಪರ್ಕ ಸೇತುವೆ ಬೇಡ್ತಿ ಸೇತುವೆ ಸುಂದರವಾಗಿ ನಿರ್ಮಾಣಗೊಂಡಿದೆ. ಅದನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಸಾರ್ವಜನಿಕರು ಸರ್ಕಾರದ ಯೋಜನೆ-ಕಾರ್ಯಗಳನ್ನು ತಮ್ಮದೆಂಬ ಭಾವನೆಯಿಂದ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ ಮಾತನಾಡಿ, ಉತ್ತರ ಕನ್ನಡ ಮಲೆನಾಡು ಜಿಲ್ಲೆ. ಬಹು ವಿಸ್ತೀರ್ಣ ಹೊಂದಿದ್ದರೂ, ಇಲ್ಲಿ ಜನಸಂಖ್ಯೆ ಕಡಿಮೆ. ಹಾಗಾಗಿ ಅಭಿವೃದ್ಧಿ ಎಷ್ಟೇ ಮಾಡಿದರೂ ಜನರಿಗೆ ತಲುಪುತ್ತಿಲ್ಲ. ಕಳೆದ ವರ್ಷದ ಮಳೆಗಾಲದ ಅನಾಹುತದಿಂದ ಶಿರಸಿ-ಯಲ್ಲಾಪುರ ಸೇತುವೆ ಬಗ್ಗೆ ಆತಂಕವಾಗಿತ್ತು. ಧೈರ್ಯದಿಂದ ಸೇತುವೆ ಮೇಲೆ ನಾವೇ ಸ್ವತಃ ಪ್ರಯಾಣಿಸಿ ಚಾಲಕರಿಗೆ ಧೈರ್ಯ ತುಂಬಿದ್ದೇವೆ. ಕೇವಲ ತಾಂತ್ರಿಕತೆ ಹೇಳುತ್ತ ಸಾಗಿದರೆ ಯಾವುದೇ ಅಭಿವೃದ್ಧಿ ಕಷ್ಟ ಎಂದು ತಿಳಿಸಿದರು.
ಬಹುದಿನದ ಬೇಡಿಕೆ ಯಲ್ಲಾಪುರ ಜನರಿಗೆ
ಅನೇಕ ಗುತ್ತಿಗೆದಾರರು ಒಂದು ವರ್ಷಕ್ಕೆ ಮಾಡಬೇಕಾದ ಕೆಲಸವನ್ನು 10 ವರ್ಷಕ್ಕೆ ಮಾಡುತ್ತಾರೆ. ಇದು ಸಾಧುವಲ್ಲ. ಆ ದೃಷ್ಟಿಯಿಂದ ಬಸ್ ನಿಲ್ದಾಣ ನಿರ್ಮಿಸಿದ ರವಿ ನಾಯ್ಕ ನಿಗದಿಪೂರ್ವದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ. ಸಾರ್ವಜನಿಕರು ತಮ್ಮ ಮಕ್ಕಳನ್ನು ಮಾತ್ರ ಬಸ್ ಕಳುಹಿಸುತ್ತಾರೆ. ತಾವು ಟೆಂಪೋ ಸೇರಿದಂತೆ ಮತ್ತಿತರ ಖಾಸಗಿ ವಾಹನಗಳಲ್ಲಿ ಓಡಾಡುತ್ತಾರೆ. 15 ಖಾಸಗಿ ಬಸ್ಗಳು ಯಲ್ಲಾಪುರದಿಂದ ಬೆಂಗಳೂರಿಗೆ ತೆರಳುತ್ತಿವೆ. ಆದರೆ ಒಂದೇ ಒಂದು ಸರ್ಕಾರಿ ಹೈಟೆಕ್ ಬಸ್ನ್ನು ಬೆಂಗಳೂರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿಲ್ಲ. ಆದ್ದರಿಂದ ಸಾರ್ವಜನಿಕರು ಸಾರಿಗೆ ಇಲಾಖೆ ನಮ್ಮದೆಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ಸಾರಿಗೆ ಇಲಾಖೆ ಬದುಕಲು ಸಾಧ್ಯ ಎಂದರು. ವಾ.ಕ.ರಾ.ಸ.ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಮಾತನಾಡಿ, ಬಹುದಿನದ ಬೇಡಿಕೆ ಯಲ್ಲಾಪುರ ಜನರಿಗೆ ದೊರೆತಿದೆ. ಹೆಬ್ಬಾರರು ಶಾಸಕರಾದ ಮೇಲೆ ಮುಂಡಗೋಡ-ಯಲ್ಲಾಪುರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಹೀಗೆಯೇ ನಾವೆಲ್ಲರೂ ಸೇರಿ ಕ್ಷೇತ್ರದ, ಜಿಲ್ಲೆಯ ಅಭಿವೃದ್ಧಿ ಮಾಡುತ್ತೇವೆ ಎಂದರು.
Recommended Video
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಉಪಸ್ಥಿತಿ
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಾ.ಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಜಿ.ಪಂ ಸದಸ್ಯೆ ರೂಪಾ ಬೂರ್ಮನೆ, ತಾ.ಪಂ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ವಾ.ಕ.ರಾ.ಸ.ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಶಿರಸಿ ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೇಡ್ತಿ ಸೇತುವೆಯ ನಿರ್ಮಿಸಿದ ಗುತ್ತಿಗೆದಾರ ಬಿ.ಎಸ್.ಗಾಂವ್ಕರ್ ಧಾರವಾಡ ಮತ್ತು ಬಸ್ ನಿಲ್ದಾಣ ನಿರ್ಮಿಸಿದ ಗುತ್ತಿಗೆದಾರರಾದ ರವಿಶಂಕರ, ರೋಹಿದಾಸ ನಾಯ್ಕ, ಗಣಪತಿ ಪಟಗಾರ ಇವರನ್ನು ಸಚಿವರುಗಳು ಸನ್ಮಾನಿಸಿದರು. ವಿ.ಆರ್.ಭಾಗ್ವತ್ ಮತ್ತು ಸುವರ್ಣಾ ಹೆಗಡೆ ನಾಡಗೀತೆ ಹಾಡಿ, ಪ್ರಾರ್ಥಿಸಿದರು. ಸಾರಿಗೆ ವಿಭಾಗ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ಸ್ವಾಗತಿಸಿದರು. ಲೋಕೋಪಯೋಗಿ ಇಲಾಖೆಯ ಸಕಾನಿ ಅಭಿಯಂತರ ವಿ.ಎಂ.ಭಟ್ಟ ನಿರ್ವಹಿಸಿದರು. ಪ್ರಕಾಶ ನಾಯ್ಕ ವಂದಿಸಿದರು.