ಬಿಜೆಪಿಯವರ ಟೀಕೆಯಿಂದ ನನಗೆ ಖುಷಿಯಾಗುತ್ತಿದೆ:ಆನಂದ್ ಅಸ್ನೋಟಿಕರ್
ಕಾರವಾರ, ಏಪ್ರಿಲ್ 14: ಬಿಜೆಪಿಯ ಮರಿ ಪುಡಾರಿ, ನಾಯಿಗಳು ಬೊಗಳುತ್ತಿರಲಿ. ನಾನು ಆನೆಯಂತೆ ಮುಂದೆ ಸಾಗುತ್ತಲೇ ಇರುತ್ತೇನೆ ಎಂದು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಟೀಕೆಯಿಂದ ನನಗೆ ಖುಷಿಯಾಗುತ್ತಿದೆ. ಅನಂತಕುಮಾರ ಹೆಗಡೆ ಹಾಗೂ ಬಿಜೆಪಿಗರಿಗೆ ಈಗ ನನ್ನ ಮೇಲೆ ಭಯ ಉಂಟಾಗಿದೆ. ಹೀಗಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾರವಾರದಲ್ಲಿ ಹಿಂದೂ ಮುಖಂಡ ಸೂರಜ್ ನಾಯ್ಕ ಸೋನಿ ಜೆಡಿಎಸ್ ಸೇರ್ಪಡೆ
ಬಿಜೆಪಿಯ ಮರಿ ಪುಡಾರಿಗಳು ಇತ್ತೀಚೆಗೆ ಹಣಕೋಣ ಸ್ಥಾವರ ವಿಷಯದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಅಂದು ಅನಂತಕುಮಾರ ಹೆಗಡೆ ಸಂಸದರಿದ್ದರು.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದರು. ಅಂದು ನನ್ನ ಬಾಯಿ ಮುಚ್ಚಿಸಿದವರೇ ಸಂಸದರು. ನೇರವಾಗಿ ಇದರಲ್ಲಿ ಅನಂತಕುಮಾರ ಹಾಗೂ ಯಡಿಯೂರಪ್ಪ ಹೊಣೆಗಾರರು. ಅವರ ಕಾಲದಲ್ಲೇ ಸ್ಥಾವರ ನಿರ್ಮಾಣಕ್ಕೆ ಮುಂದಾಗಿದ್ದು. ಸ್ಥಾವರದಿಂದ ಜನರಿಗೆ ತೊಂದರೆ ಉಂಟಾಗುತ್ತದೆಯೆಂದು ಮೊದಲೇ ಗೊತ್ತಿದ್ದರೂ ಕೇಂದ್ರದಿಂದ ಹಣಕೋಣ ಸ್ಥಾವರನ್ನು ಯಾಕೆ ತರಬೇಕಿತ್ತು. ಅಲ್ಲಿಂದ ಪರವಾನಗಿ ಪಡೆದುಕೊಂಡಿದ್ದೇ ಅನಂತಕುಮಾರ. ಇದರಲ್ಲಿ ಅಸ್ನೋಟಿಕರ್ ಪಾತ್ರ ಏನೂ ಇಲ್ಲ. ನನ್ನ ಪಾತ್ರ ಇರುವ ಬಗ್ಗೆ ಯಾವ ದಾಖಲೆಗಳನ್ನು ಬೇಕಾದರೂ ನೀಡಲಿ ಎಂದು ಸವಾಲೆಸೆದರು.
ಕೆಲವು ದಿನಗಳವರೆಗೆ ಬಾಡಿಗೆ ಮನೆಯಲ್ಲಿದ್ದೆವು
ಅಸ್ನೋಟಿಕರ್ ಕುಟುಂಬ ರಾಜಕಾರಣದಲ್ಲಿ ಹಣ ಮಾಡಿಲ್ಲ. ಕಟ್ಟಿಗೆ ವ್ಯಾಪಾರ, ಸಾರಿಗೆ ಉದ್ಯಮ ನಮ್ಮ ಅಜ್ಜನ ಕಾಲದಿಂದ ಇತ್ತು. ಕಾರವಾರದಲ್ಲಿ ಅಂಬಾಸಿಡರ್ ಕಾರು ಮೊದಲು ಇದ್ದದ್ದು ಅಸ್ನೋಟಿಕರ್ ಕುಟುಂಬದಲ್ಲಿ. ತಂದೆಯವರ ಕಾಲದಲ್ಲಿ ಆಸ್ತಿಯ ಸಹೋದರರಲ್ಲಿ ಪಾಲಾದಾಗ ಕೆಲವು ದಿನಗಳವರೆಗೆ ನಾವು ಬಾಡಿಗೆ ಮನೆಯಲ್ಲಿದ್ದೆವು ಎಂದು ಆನಂದ್ ಅಸ್ನೋಟಿಕರ್ ತಿಳಿಸಿದರು.
ಬಿಜೆಪಿ ಪ್ರೇರಿತ ಐಟಿ ದಾಳಿಗಳು ನಡೆಯುತ್ತಿವೆ
ಹಿಂದುಳಿದ ವರ್ಗಗಳ ಸಾವಿರಾರು ಯುವಕರ ಮೇಲೆ ಸಂಸದರಿಂದಾಗಿ ಕೇಸು ಬಿದ್ದಿವೆ. ಅವರಿಗಾಗಿಯೇ ಹೋರಾಟ, ಅವರಿಗಾಗಿಯೇ ಚುನಾವಣೆಗೆ ನಿಂತಿರುವುದು ಎಂದ ಅಸ್ನೋಟಿಕರ್, ನನ್ನ ಪರಿಚಿತರ ಮನೆಯ ಮೇಲೆ ಬಿಜೆಪಿ ಪ್ರೇರಿತ ಐಟಿ ದಾಳಿಗಳು ನಡೆಯುತ್ತಿವೆ. ಇದರಿಂದ ನಾನು ಹೆದರುವುದಿಲ್ಲ. ನನ್ನ ಕಾರ್ಯವನ್ನು ನಾನು ಮುಂದುವರಿಸುತ್ತೇನೆ ಎಂದು ಹೇಳಿದರು.
ಅನಂತಕುಮಾರ ಹೆಗಡೆಗೆ ಸ್ವಪಕ್ಷದಲ್ಲೇ ವಿರೋಧವಿದೆ: ಆನಂದ್ ಅಸ್ನೋಟಿಕರ್
ಮುಖ್ಯಮಂತ್ರಿಗಳು ಮತ್ತೆ ಜಿಲ್ಲೆಗೆ
ಏಪ್ರಿಲ್ 18, 19ಕ್ಕೆ ಕುಮಟಾ, ಮುಂಡಗೋಡ, ದಾಂಡೇಲಿ ಹಾಗೂ ಕಿತ್ತೂರು, ಖಾನಾಪುರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪ್ರಚಾರ ನಡೆಸಲಿದ್ದಾರೆ ಎಂದು ಈ ವೇಳೆ ಅಸ್ನೋಟಿಕರ್ ಅವರು ಮಾಹಿತಿ ನೀಡಿದರು.
ಈ ಬಾರಿ ಗೆಲ್ಲುತ್ತೇವೆ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ. ನೂರಕ್ಕೆ ನೂರು ಪ್ರತಿಶತ ಗೆಲ್ಲುತ್ತೇನೆಂಬ ವಿಶ್ವಾಸ ನನಗಿದೆ ಎಂದ ಅಸ್ನೋಟಿಕರ್, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಈ ಬಾರಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.