ಕಾರವಾರ: ಹೆಂಡತಿ ಶವದ ಜೊತೆ ಐದು ದಿನ ಕಳೆದ ಅಸಹಾಯಕ ಪತಿ
ಕಾರವಾರ, ಜುಲೈ.16: ಅದು ಪತಿ, ಪತ್ನಿ ಇಬ್ಬರೇ ಇದ್ದ ಬಡ ಕುಟುಂಬ. ಪಾರ್ಶ್ವವಾಯುವಿಗೆ ತುತ್ತಾದ ಪತಿಯನ್ನ ಪತ್ನಿಯೇ ಆರೈಕೆ ಮಾಡುತ್ತಿದ್ದರು. ಆದರೆ, ವಿಧಿಯಾಟ ಎಂಬಂತೆ ಪತಿಯ ಮಂಚದ ಪಕ್ಕದಲ್ಲೇ ಪತ್ನಿ ಕುರ್ಚಿಯ ಮೇಲೆ ಕುಳಿತಲ್ಲೇ ಕೊನೆಯುಸಿರೆಳೆದಿದ್ದಾರೆ.
ಆದರೆ, ಇದನ್ನು ಯಾರಿಗೂ ಹೇಳಲಾಗದೆ ಪತಿ ಅಸಹಾಯಕನಾಗಿ ಮಂಚದ ಮೇಲೆಯೇ ಐದು ದಿನಗಳನ್ನು ಕಳೆದಿದ್ದಾರೆ..!
ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೆಎಚ್ ಬಿ ಕಾಲೊನಿಯ ಓಂ ವೃತ್ತದ ಬಳಿಯ ಮನೆಯೊಂದರಲ್ಲಿ ಈ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಪತಿಯ ಹಾಸಿಗೆ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ಪತ್ನಿ ಗಿರಿಜಾ ಮಡಿವಾಳ (45) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಪತಿ ಆನಂದು ಮಡಿವಾಳ (60) ಪಾರ್ಶ್ವವಾಯು ಪೀಡಿತರಾಗಿದ್ದು, ಮಾತನಾಡಲು ಅಥವಾ ನಡೆದಾಡಲು ಅವರಿಂದ ಸಾಧ್ಯವಾಗುವುದಿಲ್ಲ.
ಗ್ಯಾಸ್ ಗೀಸರ್ನಿಂದ ವಿಷಾನಿಲ ಸೋರಿಕೆ? ದಂಪತಿ ಸಾವು, ಮಕ್ಕಳು ಅನಾಥ
ಹೀಗಾಗಿ, ಪತ್ನಿಯ ಶವ ಪಕ್ಕದಲ್ಲೇ ಐದು ದಿನಗಳ ಹಿಂದೆ ಹೇಗೆ ಮಲಗಿಕೊಂಡಿದ್ದರೋ ಹಾಗೆ ಅನ್ನ- ನೀರು ಇಲ್ಲದೇ ನಿತ್ರಾಣಗೊಂಡ ಸ್ಥಿತಿಯಲ್ಲೇ ಇದ್ದಾರೆ.
ದಂಪತಿಯದ್ದು ಬಡ ಕುಟುಂಬ
ಗಿರಿಜಾ ಹಾಗೂ ಆನಂದು ದಂಪತಿಯದ್ದು ಬಡ ಕುಟುಂಬ. ಮೂಲತಃ ಕಾರವಾರ ತಾಲ್ಲೂಕಿನ ಕಣಸಗಿರಿಯವರಾಗಿದ್ದ ಆನಂದು, ಹೊನ್ನಾವರ ಮೂಲದ ಗಿರಿಜಾ ಅವರನ್ನು ಮದುವೆಯಾಗಿದ್ದರು. ಮದುವೆಯ ನಂತರ ನಗರದ ಕೆಎಚ್ ಬಿ ಕಾಲೊನಿಯ ಹರಿ ಓಂ ವೃತ್ತದ ಬಳಿಯ ಗುಡಿಸಲಿನಂಥ ಮನೆಯೊಂದರಲ್ಲಿ ವಾಸಿಸುತ್ತಿದ್ದರು.
ಗಿರಿಜಾಳ ತಮ್ಮ ಹೊನ್ನಾವರದ ಸುಬ್ರಹ್ಮಣ್ಯ ಮಡಿವಾಳ ಅಕ್ಕನಿಗೆ ಪ್ರತಿದಿನ ಕರೆಮಾಡಿ ಇಬ್ಬರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಆದರೆ, ಮೂರು ದಿನಗಳಿಂದ ಕರೆ ಮಾಡಿದರೂ ಅಕ್ಕ ಕರೆ ಸ್ವೀಕರಿಸಿರಲಿಲ್ಲ. ಅದರ ನಂತರ ಮೊಬೈಲ್ ಸ್ವಿಚ್ಡ್ ಆಫ್ ಬಂದಿದೆ. ಇದರಿಂದ ಅನುಮಾನಗೊಂಡ ಅವರು ಅಕ್ಕನ ಮನೆಗೆ ಭಾನುವಾರ ಧಾವಿಸಿದ್ದಾರೆ.
ಈ ವೇಳೆ ಮನೆಯ ಬಾಗಿಲು ಮುಚ್ಚಿತ್ತು. ಅಕ್ಕಪಕ್ಕದವರನ್ನು ವಿಚಾರಿಸಿದರೂ ಅಕ್ಕನ ಬಗ್ಗೆ ಸುಳಿವು ಸಿಕ್ಕಿಲ್ಲ. ಹೀಗಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ನಂತರ ಸ್ಥಳಕ್ಕೆ ಬಂದ ಪೊಲೀಸರು, ಮನೆಯ ಹೆಂಚುಗಳನ್ನು ತೆಗೆದು ಒಳಹೊಕ್ಕಿದ್ದಾರೆ. ಆದರೆ, ಅಲ್ಲಿ ಗಿರಿಜಾ ಕುರ್ಚಿಯಲ್ಲೇ ಕುಳಿತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶವ ಸಂಪೂರ್ಣ ಕೊಳೆತು ಹುಳುಗಳಾಗಿ ದುರ್ವಾಸನೆ ಬರುತ್ತಿದ್ದರೂ ಏನೂ ಮಾಡಲಾಗದೇ ಪಕ್ಕದ ಮಂಚದಲ್ಲಿ ಆನಂದು ಮಡಿವಾಳ ಅಸಹಾಯಕರಾಗಿ ಮಲಗಿಕೊಂಡಿದ್ದರು.
ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಪೊಲೀಸರಿಗೆ ಎತ್ತಲಾಗಿಲ್ಲ. ಹೀಗಾಗಿ ನಗರಸಭೆಯ ಪೌರಕಾರ್ಮಿಕರನ್ನು ಸ್ಥಳಕ್ಕೆ ಕರೆಯಿಸಿ, ಪ್ಲಾಸ್ಟಿಕ್ ಚೀಲದಲ್ಲಿ ಶವವನ್ನು ಸುತ್ತಿ ಎತ್ತಲಾಯಿತು. ಆಂಬುಲೆನ್ಸ್ ನಲ್ಲಿ ಇಡಲಾಗದ ಪರಿಸ್ಥಿತಿಯಲ್ಲಿದ್ದ ಶವವನ್ನು ನಗರಸಭೆಯ ವಾಹನದಲ್ಲಿ ಶವಾಗಾರಕ್ಕೆ ಸಾಗಿಸಲಾಯಿತು.
ಪತ್ನಿಯ ಸಾವಿನಿಂದ ಆಘಾತಕ್ಕೀಡಾಗಿರುವ ಪತಿಯನ್ನೂ ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಚಿಕಿತ್ಸೆ ಮುಂದುವರಿದಿದೆ.