ಬ್ಯಾರಿಕೇಡ್ ಮುರಿದು ಕಾಮಗಾರಿಗೆ ತಡೆವೊಡ್ಡಲು ಯತ್ನ; ನೂರಾರು ಮೀನುಗಾರರು ಪೊಲೀಸರ ವಶಕ್ಕೆ
ಕಾರವಾರ, ಜನವರಿ 13: ಮೀನುಗಾರರ ವಿರೋಧದ ನಡುವೆಯೂ ಸಾಗರಮಾಲ ಯೋಜನೆಯಡಿ ಪೊಲೀಸ್ ಬಂದೋಬಸ್ತ್ ನಲ್ಲಿ ಇಲ್ಲಿನ ಬೈತಖೋಲ್ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ನಡೆಸಲು ಮುಂದಾಗಿದ್ದು, ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನೂ ಮುರಿದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರವಾರ ಕಡಲತೀರ ಉಳಿಸಲು ಮಾನವ ಸರಪಳಿ
ವಿಸ್ತರಣೆ ಕಾಮಗಾರಿ ಗುತ್ತಿಗೆ ಪಡೆದಿರುವ ಮುಂಬೈನ ಡಿವಿಪಿ ಇನ್ಫ್ರಾ ಪ್ರಾಜೆಕ್ಟ್ ಲಿಮಿಟೆಡ್ ಜೆಸಿಬಿಗಳ ಮೂಲಕ ಟ್ಯಾಗೋರ್ ಕಡಲತೀರದ ಬಳಿ ಜಾಗ ಸಮತಟ್ಟು ಮಾಡಲು ಮುಂದಾಗಿತ್ತು. ಈ ವೇಳೆ 500ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ಬ್ಯಾರಿಕೇಡ್ ಗಳನ್ನು ಅಳವಡಿಸಿ, ಕಾಮಗಾರಿ ನಡೆಯುವ ಸ್ಥಳಕ್ಕೆ ಯಾರೂ ಬರದಂತೆ ತಡೆ ಒಡ್ಡಿದ್ದರು. ಇದೇ ಸಂದರ್ಭದಲ್ಲಿ ಕಾಮಗಾರಿ ಸ್ಥಳಕ್ಕೆ ತೆರಳಿದ ಮೀನುಗಾರ ಮುಖಂಡರಾದ ಗಣಪತಿ ಮಾಂಗ್ರೆ, ರಾಜು ತಾಂಡೇಲ, ಮೀನು ಮಾರಾಟ ಮಹಿಳೆಯರ ಮುಖಂಡೆ ಸುಶೀಲಾ ಹರಿಕಂತ್ರ ಹಾಗೂ ವಕೀಲ ಬಿ.ಎಸ್.ಪೈ ಸೇರಿದಂತೆ ಕೆಲವರು ಪೊಲೀಸರೊಂದಿಗೆ ಚರ್ಚೆ ನಡೆಸಿದರು.
ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರು. ಆದರೆ, ಪೊಲೀಸರು ಇದಕ್ಕೆ ಒಪ್ಪದಿದ್ದಾಗ ಜೆಸಿಬಿ ಕಾಮಗಾರಿಗೆ ತಡೆವೊಡ್ಡಲು ಮುಂದಾದರು. ಹೀಗಾಗಿ ಪೊಲೀಸರು ಕೆಲವು ಮುಖಂಡರನ್ನು ವಶಕ್ಕೆ ಪಡೆದರು. ಇದನ್ನು ಗಮನಿಸಿದ ಬ್ಯಾರಿಕೇಡ್ ನ ಆಚೆಗೆ ಇದ್ದ ನೂರಾರು ಸಂಖ್ಯೆಯ ಮೀನುಗಾರರು, ಬ್ಯಾರಿಕೇಡ್ ಗಳನ್ನು ಮುರಿದು ಒಳನುಗ್ಗಲು ಯತ್ನಿಸಿದರು. ಹೀಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದು, ಎರಡು ಬಸ್ ಗಳಲ್ಲಿ ಪ್ರತಿಭಟನಾಕಾರರನ್ನು ಕರೆದೊಯ್ದರು.
'ಸುವರ್ಣತ್ರಿಭುಜ' ದೋಣಿ ಅವಶೇಷ ಮೇಲೆತ್ತಲು ಕೇಂದ್ರಕ್ಕೆ ಪತ್ರ: ಸಚಿವ ಪೂಜಾರಿ
ಅಂಗಡಿಗಳನ್ನು ಮುಚ್ಚಿಸಲು ಯತ್ನ: ಮೀನುಗಾರರ ಬಂಧನದ ಹಿನ್ನಲೆಯಲ್ಲಿ ಕೆಲವು ಉದ್ರಿಕ್ತ ಯುವ ಮೀನುಗಾರರ ಗುಂಪು ಕಾರವಾರ ಬಂದ್ ಮಾಡಲು ಮುಂದಾದರು. ಒತ್ತಾಯ ಪೂರ್ವಕವಾಗಿ ಅಂಗಡಿಗಳನ್ನು ಮುಚ್ಚಿಸಲು ಹೊರಟರು. ರಿಕ್ಷಾವೊಂದಕ್ಕೆ ಕಲ್ಲು ಹೊಡೆಯಲು ಮುಂದಾದಾಗ ಪೊಲೀಸರು ಇಲ್ಲಿಯೂ ಕೆಲವರನ್ನು ವಶಕ್ಕೆ ಪಡೆದರು.