ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ!: ಶಾಸಕನ ಹೇಳಿಕೆಗೆ ತೀವ್ರ ಆಕ್ರೋಶ
ಕಾರವಾರ, ನವೆಂಬರ್ 30: ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇದೀಗ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ ಎನ್ಸಿಪಿ ಶಾಸಕ ರಾಜೇಶ ನರಸಿಂಗರಾವ್ ಪಾಟೀಲ ಅವರು ಕಾರವಾರ, ಬೆಳಗಾವಿ, ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ವಿವಾದ ಹುಟ್ಟುಹಾಕಿದ್ದಾರೆ. ಪ್ರಮಾಣವಚನದ ಭಾಷಣದಲ್ಲಿ ಮರಾಠಿಯಲ್ಲಿ 'ಝಾಲಾತ್ ಫಾಯ್ದೆ' ಎಂದಿದ್ದಾರೆ. ಇವರ ಹೇಳಿಕೆಗೆ ಇದೀಗ ಉತ್ತರ ಕನ್ನಡ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿದೆ.
ಮಹಾದಾಯಿ ವಿಚಾರದಲ್ಲಿ ಕನ್ನಡಿಗರ ಕೆರಳಿಸಿದ ಮಹಾರಾಷ್ಟ್ರದ ಸಚಿವ
ಈ ಭಾಷಣದ ವಿಡಿಯೋ ತುಣುಕು ವೈರಲ್ ಆಗಿದ್ದು, ಉತ್ತರ ಕನ್ನಡಿಗರನ್ನು ಕೆಣಕುವಂತೆ ಮಾಡಿದೆ. ಈ ಹಿಂದೆಯೂ ಗೋವಾಕ್ಕೆ ಕಾರವಾರವನ್ನು ಸೇರಿಸಬೇಕು ಎಂದು ಗೋವಾದ ಕೆಲವು ಜನಪ್ರತಿನಿಧಿಗಳು ಹಾಗೂ ಸಂಘಟನೆಯ ಮುಖಂಡರು ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆಗೂ ವಿರೋಧ ವ್ಯಕ್ತವಾದ ಬಳಿಕ ಗೋವನ್ನರು ಸುಮ್ಮನಾಗಿದ್ದರು. ಇದೀಗ ಮತ್ತೆ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹೊಸ ವಿವಾದವನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಜನಪ್ರತಿನಿಧಿಯೊಬ್ಬರು ಹೇಳಿಕೆ ನೀಡಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಹೇಳಿಕೆ ಖಂಡಿಸಿರುವ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, 'ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಉದ್ಧವ್ ಠಾಕ್ರೆ ಇಂತಹ ಉದ್ಧಟತನದ ಹೇಳಿಕೆಗೆ ಏನೆನ್ನುತ್ತಾರೆ? ಪ್ರಧಾನಿ ನರೇಂದ್ರ ಮೋದಿಯವರು ಕೂಡ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಒತ್ತಾಯಿಸಿದರು.
ಚುನಾವಣೆ ವೇಳೆ ಬೆಳಗಾವಿಯಲ್ಲಿ ಬೆಂಕಿ ಹಚ್ಚಲು ಬರ್ತಾರೆ ಶರದ್ ಪವಾರ್
'ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಗೋವಾ ಹಾಗೂ ಮಹಾರಾಷ್ಟ್ರ ಕನ್ನಡಿಗರನ್ನು ಪದೇಪದೇ ಕೆಣಕುತ್ತಿದೆ. ನೆಲ- ಜಲ- ಭಾಷೆಯ ವಿಚಾರಕ್ಕೆ ಬಂದರೆ ಕನ್ನಡಿಗರು ಸುಮ್ನನಿರುವುದಿಲ್ಲ' ಎಂದು ಎಚ್ಚರಿಕೆ ನೀಡಿದ್ದಾರೆ.