ಭಟ್ಕಳದಲ್ಲಿ ಮೀನಿಗಾಗಿ ಹಾಕಿದ್ದ ಬಲೆಯಲ್ಲಿ ಸಿಕ್ಕಿದ್ದೇನು ಗೊತ್ತಾ?
ಕಾರವಾರ, ಆಗಸ್ಟ್ 19: ಭಟ್ಕಳದ ಅಳ್ವೆಕೋಡಿ ಕಡಲತೀರದಲ್ಲಿ ಮೀನಿಗಾಗಿ ಹಾಕಿದ್ದ ಬಲೆಯಲ್ಲಿ ಬೃಹತ್ ಮೊಸಳೆಯೊಂದು ಸಿಕ್ಕಿಬಿದ್ದಿದೆ.
Recommended Video
ಮೀನುಗಾರರು ಮೀನು ಹಿಡಿಯಲೆಂದು ಅಳ್ವೆಕೋಡಿಯ ಸಮುದ್ರದ ಭಾಗದಲ್ಲಿ ಕೈ ರಂಪಣಿ ಬಲೆ ಹಾಕಿ ಬಿಟ್ಟಿದ್ದರು. ಇಂದು ಬಲೆಯನ್ನು ಎಳೆದು ಮೀನುಗಳನ್ನು ತೆಗೆಯಲೆಂದು ಮೀನುಗಾರರು ಮುಂದಾದಾಗ ಅದರಲ್ಲಿ ಮೊಸಳೆ ಸಿಕ್ಕಿಬಿದ್ದಿದೆ. ಮೊಸಳೆಯನ್ನು ಕಂಡು ಅಚ್ಚರಿಗೊಂಡಿದ್ದಾರೆ.
ಬೆಳಗಾವಿ: ಮನೆ ಏರಿ ಕುಳಿತ ಭಾರಿ ಗಾತ್ರದ ಮೊಸಳೆ!
ಸಮುದ್ರದ ಅಬ್ಬರ ಹೆಚ್ಚಿರುವ ಕಾರಣ ವೆಂಕಟಾಪುರ ಹೊಳೆಯ ಹಿನ್ನೀರಿನಿಂದ ಈ ಮೊಸಳೆ ಸಮುದ್ರಕ್ಕೆ ಬಂದಿತ್ತು ಎನ್ನಲಾಗಿದೆ. ಮೀನುಗಳ ರಾಶಿಯೊಂದಿಗೆ ಸಿಕ್ಕಿದ ಭಾರೀ ಗಾತ್ರದ ಮೊಸಳೆಯನ್ನು ಬಲೆಯಿಂದ ಬಿಡಿಸಿದ ಮೀನುಗಾರರು, ಅರಣ್ಯ ಇಲಾಖೆಯ ಅಧಿಕಾರಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಮೊಸಳೆಗಳು ಉಪ್ಪು ನೀರಿನಲ್ಲಿ, ಅದರಲ್ಲೂ ಸಮುದ್ರದಲ್ಲಿ ಕಾಣ ಸಿಗುವುದು ಅತಿ ವಿರಳ. ಆದರೆ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹೆಚ್ಚಿದ ನೀರಿನ ಹರಿವಿನಿಂದಾಗಿ ಸಮೀಪದ ವೆಂಕಟಾಪುರ ಹೊಳೆಯ ಹಿನ್ನೀರಿನಿಂದ ಸಮುದ್ರಕ್ಕೆ ಮೊಸಳೆ ಕೊಚ್ಚಿಕೊಂಡು ಬಂದಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.