ಶ್ರೀಪಾದ್ ನಾಯಕ ಕಾರು ಪಲ್ಟಿ: ದೇವರ ದರ್ಶನಕ್ಕೆ ಹೋದಾಗ ಆಗಿದ್ದೇನು?
ಅಂಕೋಲಾ, ಜನವರಿ 12: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಕೇಂದ್ರ ಆಯುಷ್ ಇಲಾಖೆ ಸಚಿವ ಶ್ರೀಪಾದ್ ನಾಯಕ ಅವರನ್ನು ಗೋವಾ ವೈದ್ಯಕೀಯ ಕಾಲೇಜಿಗೆ (ಜಿಎಂಸಿ) ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಸೋಮವಾರ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಾಲಯದಲ್ಲಿ ಪತ್ನಿ ಸಮೇತ ಪೂಜೆ ಸಲ್ಲಿಸಿದ್ದ ಸಚಿವರು, ತಮ್ಮ ಇನೋವಾ ಕಾರಿನಲ್ಲಿ ಗೋಕರ್ಣದಲ್ಲಿ ತಂಗಲೆಂದು ಯಲ್ಲಾಪುರ- ಹೊಸಕಂಬಿ- ಮಾದನಗೇರಿ ಒಳರಸ್ತೆಯಲ್ಲಿ ಹೊರಟಿದ್ದರು.
ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಪಲ್ಟಿ: ಪತ್ನಿ ಸಾವು
ಈ ವೇಳೆ ಕಾರಿನಲ್ಲಿ ಪತ್ನಿ ವಿಜಯಾ ನಾಯಕ, ಆಪ್ತ ಕಾರ್ಯದರ್ಶಿ ದೀಪಕ್ ದುಬೆ, ಆಪ್ತ ಸಾಯಿಕಿರಣ್ ಶೆಟಿಯಾ, ಗನ್ ಮ್ಯಾನ್ ತುಕಾರಾಮ್ ಪಾಟೀಲ್ ಇದ್ದರು. ಕಾರನ್ನು ಚಂದನ್ ಓಡಿಸುತ್ತಿದ್ದರು. ಬೆಂಗಾಲವಲು ಪಡೆ ವಾಹನಗಳು ಜೊತೆಗಿದ್ದವು.
ಚಿತ್ರದುರ್ಗ; ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಐವರ ಸಾವು
ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಂಡಕ್ಕೆ ಪಲ್ಟಿಯಾಗಿ ಬಿದ್ದಿದೆ. ಈ ವೇಳೆ ಬೆಂಗಾವಲು ವಾಹನ ಹಿಂದಿತ್ತು ಎನ್ನಲಾಗಿದ್ದು, ಅದು ಬರುವುದರೊಳಗೆ ಸ್ಥಳದಲ್ಲಿದ್ದ ಕೆಲವು ಯುವಕರು ಅಪಘಾತದಲ್ಲಿ ಗಾಯಗೊಂಡವರನ್ನು ಕಾರಿನಿಂದ ಹೊರ ತೆಗೆದಿದ್ದಾರೆ.
ದಟ್ಟ ಮಂಜಿನಿಂದ ಎಂಟು ವಾಹನಗಳ ಸರಣಿ ಅಪಘಾತ: ಮೂವರು ಸಾವು
ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಯಿತು
ಬೆಂಗಾವಲು ವಾಹನದ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಿದ್ದಾರೆ. ಅಂಕೋಲಾ ತಾಲೂಕಿನ ಆರ್ಯಾ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಶ್ರೀಪಾದ್ ನಾಯಕರ ಪತ್ನಿ ವಿಜಯಾ ನಾಯಕ ಅವರ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು. ಇದರಿಂದಾಗಿ ಹೆಚ್ಚಿನ ರಕ್ತಸ್ರಾವವಾಗಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಶ್ರೀಪಾದ್ ನಾಯಕ ಅವರನ್ನು ಕೂಡಲೇ ಅಂಬ್ಯುಲೆನ್ಸ್ ನಲ್ಲಿ ಗೋವಾಕ್ಕೆ ರವಾನೆ ಮಾಡಲಾಯಿತು.
ಆಸ್ಪತ್ರೆಯಲ್ಲಿಯೇ ಸಾವು
ಇನ್ನುಳಿದ ನಾಲ್ವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಸಚಿವರ ಆಪ್ತ ಕಾರ್ಯದರ್ಶಿ ದೀಪಕ್ ದುಬೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಆಪ್ತ ಸಾಯಿಕಿರಣ್ ಶೆಟಿಯಾ, ಗನ್ ಮ್ಯಾನ್ ತುಕಾರಾಮ್ ಪಾಟೀಲ್ ಹಾಗೂ ಚಾಲಕ ಚಂದನ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸಚಿವರ ಆರೋಗ್ಯ ಸ್ಥಿರ
ಸಚಿವ ಶ್ರೀಪಾದ್ ನಾಯಕ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಗೋವಾ ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಅವರನ್ನು ವೈದ್ಯಕೀಯ ಸಿಬ್ಬಂದಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. "ಅವರ ಕಾಲಿನ ಮೂಳೆ ಮುರಿದಿದ್ದು, ಸೋಮವಾರ ರಾತ್ರಿ ಶಸ್ತ್ರಚಿಕಿತ್ಸೆ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ, ಅವರಿಗೆ ಬೇರೆಡೆ ಕರೆದೊಯ್ಯುವ ಅಗತ್ಯವಿಲ್ಲ. ಹಾಗೇನಾದರೂ ಅಗತ್ಯಬಿದ್ದಲ್ಲಿ ಏರ್ ಅಂಬ್ಯುಲೆನ್ಸ್ ಸಿದ್ಧವಿದೆ" ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ ಹೇಳಿದ್ದಾರೆ.
ಬೆಂಗಾವಲು ವಾಹನ ಓವರ್ ಟೇಕ್?
ಮೂಲಗಳ ಪ್ರಕಾರ, ಬೆಂಗಾವಲು ವಾಹನದ ಚಾಲಕ ಸಚಿವರ ವಾಹನವನ್ನೇ ಓವರ್ ಟೇಕ್ ಮಾಡಿಕೊಂಡು ಮುಂದೆ ತೆರಳಿದ್ದ ಎನ್ನಲಾಗಿದೆ. ಹೀಗಾಗಿ ಹೊಸಕಂಬಿ ಬಳಿ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕಕ್ಕೆ ಇಳಿದಿದೆ. ಕತ್ತಲಾಗಿದ್ದರಿಂದ, ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಹಾಗೂ ಬೀದಿ ದೀಪಗಳು ಇಲ್ಲದಿರುವುದರಿಂದ ಚಾಲಕನಿಗೂ ಗೊಂದಲವುಂಟಾಗಿ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಅಸಮರ್ಪಕ ರಸ್ತೆ ಕಾಮಗಾರಿ
ಹೊಸಕಂಬಿ- ಮಾದನಗೇರಿ ನಡುವೆ ಅರೆಬರೆ ರಸ್ತೆ ಕಾಮಗಾರಿ ನಡೆದಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಸಮತಟ್ಟು ಮಾಡದೆ ಹಾಗೇ ಬಿಟ್ಟಿಡಲಾಗಿದೆ. ಇದರಿಂದಾಗಿ ಸಚಿವರ ಕಾರಿನ ಒಂದು ಚಕ್ರ ರಸ್ತೆಯ ಪಕ್ಕಕ್ಕೆ ಇಳಿದಿದೆ. ಮೊದಲೇ ವೇಗದಲ್ಲಿದ್ದ ಕಾರನ್ನು ನಿಯಂತ್ರಿಸಲಾಗದ ಕಾರಣ ಕಾರು ಇನ್ನಷ್ಟು ಪಕ್ಕಕ್ಕೆ ಸರಿದು ಪಲ್ಟಿಯಾಗಿ ಹೊಂಡಕ್ಕೆ ಬಿದ್ದಿದೆ.
ಉತ್ತರ ಕನ್ನಡದಲ್ಲಿ ಆಸ್ಪತ್ರೆ ಇಲ್ಲ!?
ಸಚಿವರನ್ನು ಅಂಕೋಲಾದ ಆಸ್ಪತ್ರೆಗೆ ತಂದ ಕೂಡಲೇ ಅಲ್ಲಿಂದ ಗೋವಾಕ್ಕೆ ರವಾನೆ ಮಾಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿದ್ದಂತೆಯೇ ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಗಳ ಸೌಲಭ್ಯ ಯಾವಾಗ ಎಂಬ ಪ್ರಶ್ನೆ ನೆಟ್ಟಿಗರು ಶುರು ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಜನತೆ ಬೇಡಿಕೆ ಇಡುತ್ತಿದ್ದರೂ ಜನಪ್ರತಿನಿಧಿಗಳು ಕಿವಿಗೇ ಹಾಕಿಕೊಳ್ಳುತ್ತಿಲ್ಲ. ಎರಡು ವರ್ಷಗಳ ಹಿಂದೆ ಟ್ವಿಟರ್ ಅಭಿಯಾನ ನಡೆಸಿ ಆಸ್ಪತ್ರೆಗಾಗಿ ಬೇಡಿಕೆಯನ್ನೂ ಸಹ ಇಡಲಾಗಿತ್ತು.
ಸಂಸದರೇ ಉತ್ತರ ಕೊಡಬೇಕು
ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಇಲ್ಲದ ಕಾರಣ ದೂರದ ದಕ್ಷಿಣ ಕನ್ನಡ ಹಾಗೂ ಗೋವಾವನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇನ್ನೊಂದೆಡೆ, ಹಲವೆಡೆ ರಸ್ತೆಗಳು ಸಮರ್ಪಕವಾಗಿಲ್ಲ. ಸಂಸದ ಅನಂತಕುಮಾರ ಹೆಗಡೆ ಅವರ ತವರು ಶಿರಸಿಗೆ ಕುಮಟಾ ಮಾರ್ಗವಾಗಿ ತೆರಳಬೇಕೆಂದರೆ ಹರಸಾಹಸ ಪಡಬೇಕು. ತುಂಬಾ ಗಂಭೀರ ಪರಿಸ್ಥಿತಿಯಲ್ಲಂತೂ ಇಂಥ ರಸ್ತೆಗಳಲ್ಲಿ ಅಂಬ್ಯುಲೆನ್ಸ್ ಗಳ ಸಂಚಾರ ಕೂಡ ಕಷ್ಟದಾಯಕವಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.