40 ನಿಮಿಷ ಹೆದ್ದಾರಿ ತಡೆದು ಗ್ರಾಮ ರಕ್ಷಣೆಯ ಪಣತೊಟ್ಟ ಗ್ರಾಮಸ್ಥರು
ಕಾರವಾರ, ಡಿ 24: ಹೊನ್ನಾವರ ತಾಲೂಕಿನ ಕರ್ಕಿಯಲ್ಲಿ ಡಿಸೆಂಬರ್ 23 ರಂದು ಜಾತಿ, ಪಕ್ಷ ಬೇಧ ಮರೆತು ಊರಿನ ಸಕಲ ಜನಪ್ರತಿನಿಧಿಗಳ ಜೊತೆ ಸೇರಿ 2000ಕ್ಕೂ ಹೆಚ್ಚು ಗ್ರಾಮಸ್ಥರು ಕರ್ಕಿ ಗ್ರಾಮವನ್ನು ನೆರೆಯ ನೀರು, ಉಪ್ಪುನೀರು, ಸಮುದ್ರ ಕೊರತೆಗಳಿಂದ ರಕ್ಷಿಸುವ ಪಣತೊಟ್ಟರು. 40 ನಿಮಿಷ ಶಾಂತಿಯುತವಾಗಿ ರಸ್ತೆ ತಡೆದು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.
ಕರ್ಕಿ ಗ್ರಾಮ ಉಳಿಸಿ ಹೋರಾಟದ ಸಮಿತಿ ಅಧ್ಯಕ್ಷ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿ, 'ಕರ್ಕಿ ಗ್ರಾಮ ಮಳೆಗಾಲದಲ್ಲಿ ಶರಾವತಿ ನದಿ ನೀರಿನ ಕಾಟ ಉಳಿದ ಕಾಲದಲ್ಲಿ ಸಮುದ್ರದ ಕೊರೆತ, ಉಪ್ಪು ನೀರು ಇವುಗಳ ಕಾಟದಿಂದ ಗ್ರಾಮವು ನಿಧಾನವಾಗಿ ಸಮುದ್ರದ ಒಡಲು ಸೇರುತ್ತಿದೆ" ಎಂದರು.
ದಕ್ಷಿಣ ಭಾರತದಲ್ಲಿಯೇ ಕರ್ನಾಟಕದ ರಸ್ತೆ ಅಪಾಯಕಾರಿ!
"ಬಡ ಕೂಲಿಕಾರರೇ ಹೆಚ್ಚಾಗಿರುವ ಈ ಊರಿನಲ್ಲಿ ಊರು ತುಂಬಾ ಹೊಳೆ ಕೋಡಿಗಳಲ್ಲಿ ನೀರಿದ್ದರೂ ಕುಡಿಯಲು ನೀರಿಲ್ಲ. ಮರಕಲ್ ಪೈಪಿನ ತೂತಿಗೆ ಗೋಣಿ ಪಾರ್ಟ್ ಹೊದೆಸಿ ಹರಿವ ನೀರನ್ನು ಜನ ಹಿಡಿದು ಪ್ರಾಣಿಗಳಂತೆ ಬಾಳುತ್ತಿದ್ದಾರೆ".
"ಕಾರಣ ಸರ್ಕಾರ ಕೂಡಲೇ ತೊಪ್ಪಲ ಕೇರಿಯಿಂದ ಶೇಡಿಕುಳಿವರೆಗೆ ಭದ್ರವಾದ ಶಾಶ್ವತ ತಡೆಗೋಡೆ ಹಾಗೂ ತೊಪ್ಪಲ ಕೇರಿಯ ಅಳವೆ ಅಂಚಿನಲ್ಲಿ ಚೆಕ್ ಡ್ಯಾಮ್ ನಿರ್ಮಿಸಿ ಊರಲ್ಲಿ ಸಿಹಿ ನೀರು ಉಳಿಸಲು ಮುಂದಾಗಬೇಕು. ಇಲ್ಲದಿದ್ದರೆ ಜನರ ಜೊತೆ ಇನ್ನೂ ಹೆಚ್ಚು ಉಗ್ರ ಹೋರಾಟ ಮಾಡಬೇಕಾಗುತ್ತದೆ" ಎಂದು ಹೆಬ್ಬಾರ್ ಎಚ್ಚರಿಸಿದರು.
ಕರ್ಕಿ ಗ್ರಾಮ ಉಳಿಸಲು ಕಂಕಣಬದ್ಧರಾದ ಸಾವಿರಾರು ಜನರ ಪರವಾಗಿ ಕರ್ಕಿ ಗ್ರಾಪಂ ಅಧ್ಯಕ್ಷ ಶ್ರೀಕಾಂತ ಮೊಗೇರ, ಜಿಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ, ತಾಪಂ ಸದಸ್ಯ ತುಕಾರಾಮ ನಾಯ್ಕ, ಮಾಜಿ ಅಧ್ಯಕ್ಷ ವಿನೋದ ನಾಯ್ಕ, ಸಮಿತಿಯ ಕಾರ್ಯದರ್ಶಿ ಹರಿಶ್ಚಂದ್ರ ನಾಯ್ಕ, ಮಾಜಿ ತಾಪಂ ಸದಸ್ಯರಾದ ಜಿ.ಕೆ. ಶೇಟ್, ಅಶೋಕ್ ನಾಯ್ಕ, ಗಣ್ಯರಾದ ಕರ್ಕಿ ಗ್ರಾಪಂನ ಸಕಲ ಸದಸ್ಯರ ಸಮ್ಮುಖದಲ್ಲಿ ತಮ್ಮ ಬೇಡಿಕೆ ಮನವಿಯನ್ನು ತಹಶೀಲ್ದಾರರಿಗೆ ಸಲ್ಲಿಸಿದರು.
ಮಂಗಳೂರು ಹಿಂಸಾಚಾರ: ಸಿಸಿಟಿವಿ ದೃಶ್ಯಗಳು ಹೇಳುತ್ತೆ ಹೊಸ ಕಥೆಯೊಂದನ್ನಾ!
ಬರುವ ದಿನಗಳಲ್ಲಿ ಸರ್ಕಾರದ ಗಮನವನ್ನು ಸೆಳೆಯಲು ದಕ್ಷಿಣಕನ್ನಡದ ಮಾದರಿಯಲ್ಲಿ ಕರ್ಕಿ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಹೋರಾಟ ನಡೆಸಲಾಗುವುದೆಂದು ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಹೆಬ್ಬಾರ್ ತಿಳಿಸಿದರು.