ಹೊನ್ನಾವರದ ಹಿರಿಯ ಯಕ್ಷಗಾನ ಕಲಾವಿದ ಬಣ್ಣದ ಕೃಷ್ಣ ಗಾಣಿಗ ನಿಧನ
ಕಾರವಾರ, ಡಿಸೆಂಬರ್ 7: ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಗಾಣಿಗ (88) ಅನಾರೋಗ್ಯದಿಂದ ಭಾನುವಾರ ಡಿ.6ರಂದು ನಿಧನರಾದರು.
ಹೊನ್ನಾವರದ ಜಲವಳ್ಳಕರ್ಕಿಯಲ್ಲಿ 1932ರಲ್ಲಿ ಜನಿಸಿದ ಕೃಷ್ಣ ಗಾಣಿಗ ಅವರು 4ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಯಕ್ಷರಂಗದತ್ತ ಒಲವು ಮೂಡಿಸಿಕೊಂಡಿದ್ದರು. ಕಲಾಸೇವೆಗಾಗಿ ತನ್ನನ್ನು ಅರ್ಪಿಸಿಕೊಂಡು, ಮಣ್ಣಿಗೆ ತಿಮ್ಮಣ್ಣ ಯಾಜಿ ಮೇಳ, ಕರ್ಕಿ ಪಿ.ವಿ.ಹಾಸ್ಯಗಾರ ಮೇಳ, ಅಮೃತಶ್ವರಿ ಮೇಳ ಹಾಗೂ ಇಡಗುಂಜಿ ಮೇಳ ಸೇರಿದಂತೆ ವಿವಿಧ ಮೇಳದಲ್ಲಿ ಸೇವೆ ಸಲ್ಲಿಸಿದ್ದರು.
ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ನಿಧನ
ಗುಂಡಬಾಳ ಮೇಳದಲ್ಲಿ ಒಂಬತ್ತು ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಚಿಕ್ಕಪ್ಪ ಗಣಪತಿ ಶೆಟ್ಟಿ ಹಾಗೂ ಹನುಮಂತ ಶೆಟ್ಟಿ ಪ್ರೋತ್ಸಾಹದಿಂದ ಬಣ್ಣದ ವೇಷ ಆಯ್ಕೆ ಮಾಡಿಕೊಂಡು ಸಾಧನೆ ಮಾಡಿ "ಬಣ್ಣದ ಕೃಷ್ಣ" ಎಂದೇ ಚಿರಪರಿಚಿತರಾಗಿದ್ದರು.
ರಕ್ತಾಸುರ, ಘಟೊತ್ಕಜ, ಧರ್ಮರಾಯ, ಅರ್ಜುನ ಮುಂತಾದ ಪೌರಾಣಿಕ ಪ್ರಾತದಲ್ಲಿ ಅಭಿನಯಿಸುವ ಮೂಲಕ 40 ವರ್ಷಗಳ ಸುದೀರ್ಘ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಇವರ ಸೇವೆ ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. 2013ರಲ್ಲಿ ಸೋಮಕ್ಷತ್ರಿಯ ಸಮಾಜ ಹಾರಾಡಿ ರಾಮ ಗಾಣಿಗ ಪ್ರಶಸ್ತ್ರಿ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸನ್ಮಾನ, ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ಸನ್ಮಾನಿಸಿ ಗೌರವಿಸಿದ್ದರು.
Recommended Video
ಜೀವಿತದ ಕೊನೆಯ ದಿನದವರೆಗೆ ಕಲೆಗೆ, ಕಲಾವಿದರಿಗೆ ಪೋತ್ಸಾಹ ನೀಡುತ್ತಾ ಬಂದಿರುವ ಇವರು ಡಿಸೆಂಬರ 3ರಂದು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮುಂಜಾನೆ 3:55ಕ್ಕೆ ಇಹಲೋಕ ತ್ಯಜಿಸಿದರು. ಇವರಿಗೆ ಪತ್ನಿ, ಐವರು ಪುತ್ರಿಯರಿದ್ದಾರೆ. ಇವರ ನಿಧನಕ್ಕೆ ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಶಾರದಾ ಶೆಟ್ಟಿ, ಬಿಜೆಪಿ ತಾಲೂಕು ಅಧ್ಯಕ್ಷ ರಾಜು ಭಂಡಾರಿ, ಯಕ್ಷಗಾನ ಜನಪದ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಶ್ರೀಪಾದ ಶೆಟ್ಟಿ ಸೇರಿದಂತೆ ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.