'ಆರ್ಎಸ್ಎಸ್ ಬಗ್ಗೆ ಕೀಳಾಗಿ ಮಾತಾಡಿ ಅಲ್ಪಸಂಖ್ಯಾತರ ವೋಟುಗಳಿಕೆ ಭ್ರಮೆಯಲ್ಲಿ ಸಿದ್ದರಾಮಯ್ಯ'
ಕುಮಟಾ, ಅಕ್ಟೋಬರ್, 26: ಸಿದ್ಧರಾಮಯ್ಯನವರು ಅಲ್ಪಸಂಖ್ಯಾತರ ಓಟಿಗಾಗಿ ಜೊಲ್ಲು ಸುರಿಸುತ್ತಿರೋದು ಬಿಟ್ರೆ ಬೇರೇನಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಚಾಟಿ ಬೀಸಿದ್ದಾರೆ. ತಾಲ್ಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದ ಸಚಿವ ಜ್ಞಾನೇಂದ್ರ ದೇವರಿಗೆ ಪೂಜೆ ಸಲ್ಲಿಸಿ ಆಗಮಿಸಿದ ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದರು.
ಆರ್ಎಸ್ಎಸ್ ಬಗ್ಗೆ ಎಷ್ಟು ಕೆಳಮಟ್ಟದಲ್ಲಿ ಮಾತನಾಡುತ್ತಾರೋ, ಅಷ್ಟು ಅಲ್ಪಸಂಖ್ಯಾತರ ಓಟು ಬೀಳುತ್ತವೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಭಾವಿಸಿದ್ದಾರೆ. ಆದರೆ ಅದ್ಯಾವುದೂ ಸಿಗೋದಿಲ್ಲ. ಇದೆಲ್ಲಾ ಅವರ ಭ್ರಮೆ ಅಷ್ಟೇ, ಆರ್ಎಸ್ಎಸ್ನ್ನು ದೂರಿದಷ್ಟು ಅವರೇ ಕಳೆದು ಹೋಗುತ್ತಿದ್ದಾರೆ ಎಂದು ಸಿದ್ಧರಾಮಯ್ಯ ವಿರುದ್ಧ ಆರಗ ಜ್ಞಾನೇಂದ್ರ ಹರಿಹಾಯ್ದಿದ್ದಾರೆ.
ಆರ್ಎಸ್ಎಸ್ ಕಂಡರೆ ನನಗ್ಯಾಕೆ ಭಯ?; ಸಿದ್ದರಾಮಯ್ಯ
ಸ್ವಯಂ ಯೋಗ್ಯತೆ ಇಲ್ದಿದ್ರೂ ಕಾಂಗ್ರೆಸ್ ಅಧ್ಯಕ್ಷರಾಗಿ ಬಂದವರಿದ್ದಾರೆ. ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಅವರ ಪುತ್ರನಿಗೆ ಏನೂ ಅರ್ಹತೆ ಇಲ್ಲದಿದ್ದರೂ ಬಂದು ಬಿಡ್ತಾರೆ. ಆದರಂತೆ ಮಗ ಎನ್ನುವ ಕಾರಣಕ್ಕೆ ಅರ್ಹತೆ, ಯೋಗ್ಯತೆ ಇದ್ದವರು ಮೂಲೆಗುಂಪು ಸಹ ಆಗಬಾರದು. ಸೇವಾ ಮನೋಭಾವ, ರಾಜಕೀಯ ಆಸಕ್ತಿ ಹಾಗೂ ಜ್ಞಾನ ಇರೋರಿಗೆ ಉತ್ತಮ ಸ್ಥಾನ ನೀಡಲಿ ಎಂದರು. ಇನ್ನು ಯಾರಿಗೆ ಸೈದ್ಧಾಂತಿಕವಾಗಿ ಪಕ್ಷ ಕಟ್ಟಲು ಯೋಗ್ಯತೆಯಿಲ್ಲವೋ ಅವರು ಜಾತಿಯನ್ನು ಬಂಡವಾಳ ಮಾಡಿಕೊಳ್ಳುತ್ತಾರೆ. ಆದರೆ ನಮ್ಮ ಬಗ್ಗೆ ಮಾತನಾಡುತ್ತಾರೆ. ಜಾತಿವಾದ ಮಾಡುವುದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು. ಹೀಗಾಗಿ ಜನರು ಇವರನ್ನು ತಿರಸ್ಕಾರ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ನಮ್ಮ ಬಗ್ಗೆ ಮಾತನಾಡುವವರು ಸೈದ್ಧಾಂತಿಕವಾಗಿ ಪಕ್ಷ ಕಟ್ಟಲಿ, ಹೋರಾಟ ಮಾಡಲಿ. ಅದನ್ನು ಬಿಟ್ಟು ಜಾತಿ ಹೆಸರಲ್ಲಿ ಕೇವಲ ಮೇಲೆಬ್ಬಿಸಿ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಜಾತಿಯಲ್ಲಿ ಎಲ್ಲರ ಉದ್ಧಾರನೂ ಮಾಡಲ್ಲ, ಇವರ ಉದ್ಧಾರಕ್ಕೋಸ್ಕರ ಜಾತಿಯನ್ನು ಎಬ್ಬಿಸ್ತಾರೆ ಎಂದರು.
ಇನ್ನು ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ಕೇಸರಿ ಧರಿಸಿದ್ದಕ್ಕೆ ಸಿದ್ಧರಾಮಯ್ಯ ಟೀಕೆ ಮಾಡಿದ್ದರು. ಏನು ಕೇಸರಿ ಬ್ಯಾನ್ ಆಗಿದ್ಯಾ? ಅಥವಾ ಯಾವುದೋ ಪಕ್ಷಕ್ಕೆ ಸೀಮಿತವಾಗಿದ್ಯಾ? ಎಂದು ಪ್ರಶ್ನಿಸಿದ ಸಚಿವರು, ಇವರು ನಾಳೆ ರಾಷ್ಟ್ರಧ್ವಜದ ಕೇಸರಿ ತೆಗೆದು ಬರೀ ಹಸಿರು ಇದ್ದರೆ ಸಾಕು ಅನ್ನಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಶ್ವವಿದ್ಯಾಲಯಗಳ ಸಿಂಡಿಕೇಟ್ನಲ್ಲಿ ಆರ್ಎಸ್ಎಸ್ ಕಾರ್ಯಕರ್ತರಿದ್ದಾರೆ; ಎಚ್ಡಿಕೆ ಆರೋಪ
ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಿನ್ನೆಯೇ ಕುಟುಂಬ ಸಮೇತರಾಗಿ ಗೋಕರ್ಣಕ್ಕೆ ಬಂದು ತಂಗಿದ್ದರು. ಇಂದು ಬೆಳಿಗ್ಗೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಮಹಾಬಲೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಮಹಾಬಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು, ದೇವಸ್ಥಾನದ ಆವರಣದಲ್ಲಿ ಗೋಪೂಜೆ ನೆರವೇರಿಸಿದರು. ತದನಂತರ, ದೇವಸ್ಥಾನದಲ್ಲಿ ನೂತನವಾಗಿ ತೆರೆಯಲಾದ ಲಡ್ಡು ಪ್ರಸಾದ ವಿತರಣೆ ಕೌಂಟರ್ ಅನ್ನು ಇದೇ ವೇಳೆ ಉದ್ಘಾಟಿಸಿದರು. ಸ್ವತಃ ತಾವೇ ಭಕ್ತರಿಗೆ ಕೌಂಟರ್ನಿಂದ ಲಡ್ಡು ಪ್ರಸಾದ ವಿತರಣೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಗೃಹ ಸಚಿವರಿಗೆ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಈ ವೇಳೆ ಸಾಥ್ ನೀಡಿದರು.
ಅಪಪ್ರಚಾರ ನಡೆಸುತ್ತಿದ್ದಾರೆ; "ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಜನರ ಒಳಿತಿಗಾಗಿ ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಸಹಿಸದ ಕಾಂಗ್ರೆಸ್ ಪಕ್ಷದ ಮುಖಂಡರು ಅಪಪ್ರಚಾರ ನಡೆಸಿದ್ದಾರೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕುಮಟಾ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. "ನಮ್ಮ ಸರ್ಕಾರಗಳು ಜಾರಿಗೊಳಿಸಿದರುವ ಯೋಜನೆಗಳನ್ನು ಜನರಿಗೆ ನಮ್ಮ ಪಕ್ಷದ ಕಾರ್ಯಕರ್ತರು ತಲುಪಿಸುವ ಜೊತೆಗೆ ಪ್ರಚಾರ ಮಾಡದಿದ್ದರೆ ಕಾಂಗ್ರೆಸ್ ಪಕ್ಷದವರು ಹೇಳುವ ಸುಳ್ಳನ್ನು ಜನರು ಸತ್ಯ ಎಂದು ನಂಬವರು. ಈ ರೀತಿ ಆಗದಂತೆ ನೋಡಿಕೊಳ್ಳಬೇಕು" ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
Recommended Video
"ನಾವು ಸಿದ್ದಾಂತವನ್ನು ನಂಬಿ ಬಿಜೆಪಿಯಲ್ಲಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷದವರಿಗೆ ಯಾವುದೇ ಸಿದ್ದಾಂತವಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಕೇಸರಿ ಕಂಡರೆ ಭಯ. ಅದಕ್ಕಾಗಿ ಠಾಣೆಯೊಂದರಲ್ಲಿ ಪೋಲಿಸರು ಕೇಸರಿ ಶಾಲು ಹಾಕಿದ್ದನ್ನು ಮುಂದಿಟ್ಟುಕೊಂಡು ಗದ್ದಲ ಎಬ್ಬಿಸಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಜಾತಿ ಮುಖ್ಯವೇ ಹೊರತು ಸಿದ್ದಾಂತವಲ್ಲ. ಹಾಗಾಗಿ ಅವರಿಗೆ ಚುನಾವಣೆ ಬಂದಾಗ ಜಾತಿ, ಕಂಬಳಿ ನೆನಪಾಗುತ್ತದೆ. ಓಟಿಗಾಗಿ ಏನು ಬೇಕಾದರು ಮಾಡುತ್ತಾರೆ. ಕಾಂಗ್ರೆಸಿಗರ ಇಂಥಹ ವರ್ತನೆಯಿಂದಲೇ ಮುಂದೊಂದು ದಿನ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಟಾರ್ಚ್ ಹಿಡಿದು ಹುಡುಕಬೇಕಾಗಬಹುದು" ಎಂದು ವ್ಯಂಗ್ಯ ಮಾಡಿದರು.