ಹಿಂಡಲಕಾಯಿಯಲ್ಲಿ ಹೊಡೆದಾಡಿಕೊಳ್ಳುವ ‘ಹೊಂಡೆಯಾಟ’
ಕಾರವಾರ, ಅಕ್ಟೋಬರ್ 29: ವೀರತ್ವದ ಪ್ರತೀಕ ಹಾಗೂ ಸೌಹಾರ್ದತೆಯ ಸಂಕೇತವಾದ ಐತಿಹಾಸಿಕ ಹೊಂಡೆ ಹಬ್ಬವು ಅಂಕೋಲಾ ಪಟ್ಟಣದಲ್ಲಿ ಸೋಮವಾರ ಯಶಸ್ವಿಯಾಗಿ ಜರಗಿತು.
ದೀಪಾವಳಿಯ ಬಲಿ ಪಾಡ್ಯಮಿ ದಿನದಂದು ಇಲ್ಲಿನ ಕ್ಷತ್ರಿಯ ಕೋಮಾರಪಂಥ ಸಮಾಜದವರಿಂದ ಐತಿಹಾಸಿಕವಾಗಿ ನಡೆದುಕೊಂಡು ಬಂದಿರುವ ಈ ರೋಮಾಂಚನಕಾರಿ ಹೊಂಡೆ ಹಬ್ಬವನ್ನು ಸಹಸ್ರಾರು ಜನ ವೀಕ್ಷಿಸಿ ಸಂಭ್ರಮಿಸಿದರು.
ದೀಪಾವಳಿ ಸಂಭ್ರಮ; ಕಣ್ಣಿನ ಸುರಕ್ಷತೆ ಬಗ್ಗೆ ಗಮನ ಹರಿಸಿ
ಏನಿದು ಹೊಂಡೆ ಹಬ್ಬ?: ಕೋಮಾರಪಂಥ ಸಮಾಜದವರು ಮೂಲತಃ ಕ್ಷತ್ರಿಯ ವರ್ಗಕ್ಕೆ ಸೇರಿದವರಾಗಿದ್ದು, ಯುದ್ಧದ ಸಂದರ್ಭದಲ್ಲಿ ಕೋಮಾರಪಂಥ ಸಮಾಜ ತನ್ನದೇ ಆದ ಕೊಡುಗೆ ನೀಡಿದ ಐತಿಹಾಸಿಕ ಹಿನ್ನಲೆಗಳಿವೆ.
ಕೋಮಾರಪಂಥ ಸಮಾಜ ಅಂದು ನಾಡಿನ ರಕ್ಷಣೆಗೆ ಯುದ್ಧದಲ್ಲಿ ತೋರಿದ ಸಾಹಸದ ಸಂಕೇತವಾಗಿ ಇಂದು ಪ್ರಸ್ತುತವಾಗಿ ಹಿಂಡ್ಲಿಕಾಯಿಂದ ಪರಸ್ಪರ ಹೊಡೆದಾಡುವುದರ ಮೂಲಕ ತಮ್ಮ ಸಂಪ್ರದಾಯವನ್ನು ಅನಾವರಣಗೊಳಿಸುತ್ತಾರೆ.
ಈ ಆಟದಲ್ಲಿ ಕೆಚ್ಚಿನ ಭೀಕರತೆ ಇದ್ದರೂ ಅದು ಸಮಾಜದ ಸೌಹಾರ್ದತೆ ಸಂಕೇತವಾಗಿರುತ್ತದೆ. ತನ್ಮೂಲಕ ಎಲ್ಲ ಸಮುದಾಯದವರ ಸಾಮರಸ್ಯಕ್ಕೆ ಸಾಕ್ಷಿಯಾಗಿ ಹೊಂಡೆಯಾಟವು ಶತಶತಮಾನಗಳಿಂದ ನಡೆಯುತ್ತ ಬಂದಿದೆ.
ಉಡುಪಿ ಕೃಷ್ಣ ಮಠದಲ್ಲಿ ದೀಪಾವಳಿ ಸಡಗರ; ಗಂಗಾಪೂಜೆ, ತೈಲಾಭ್ಯಂಜನ
ಹೊಂಡೆ ಹಬ್ಬದಲ್ಲಿ ಕೋಮಾರಪಂಥ ಸಮಾಜದ ಲಕ್ಷ್ಮೇಶ್ವರ ಹಾಗೂ ಹೊನ್ನೇಕೇರಿಯ ಊರಿನ ಎರಡು ತಂಡಗಳು ಪಾಲ್ಗೊಂಡವು. ಕುಂಬಾರಕೇರಿಯ ಕಳಸದೇವಸ್ಥಾನದಿಂದ ಹೊರಟ ಲಕ್ಷ್ಮೇಶ್ವರ ತಂಡವು ವೀರಾವೇಶದಿಂದ 'ಹೊಂಡೆ ಹೊಂಡೆ' ಎನ್ನುತ್ತ ಎದುರಾಳಿಯನ್ನು ಎದುರಿಸಲು ನಗರದ ಶ್ರೀಶಾಂತಾದುರ್ಗ ದೇವಸ್ಥಾನದ ಎದುರಿನಲ್ಲಿ ಹೊನ್ನೇಕೇರಿ ತಂಡದ ನಡುವೆ ಮುಖಾಮುಖಿಗೊಂಡು, ಎರಡು ಗ್ರಾಮದ ಹಿರಿಯರಿಂದ ಹೊಂಡೆ ಆಟಕ್ಕೆ ಚಾಲನೆ ದೊರೆಯಿತು.
ಹೊಂಡೆ ಹಬ್ಬದಲ್ಲಿ ಮಂಡಿಯ ಕೆಳಭಾಗಕ್ಕೆ ಹೊಡೆಯಬೇಕೆನ್ನುವ ನಿಯಮ ಪಾಲಿಸಬೇಕಾಗುತ್ತದೆ. ಆದರೂ ಕೆಲವು ಸಲ ಗುರಿಕಾರನ ಗುರಿತಪ್ಪಿ ಎದುರಾಳಿಯು ತೀವ್ರ ತರಹದ ಹೊಡೆತಕ್ಕೆ ಗುರಿಯಾದ ಘಟನೆಯೂ ನಡೆಯಿತು. ಇವುಗಳನ್ನು ನಿಯಂತ್ರಿಸಲು ಸಮಾಜದ ಮುಖಂಡರು ನಿರ್ಣಾಯಕರಾಗಿ ಮಧ್ಯಪ್ರವೇಶಿಸಿದರು.
ನಗರದ ಮದ್ಯವರ್ತಿ ಸ್ಥಳಗಳಲ್ಲಿ ನಾಲ್ಕು ಕಡೆಗಳಲ್ಲಿ ಹೊಂಡೆಯೊಂದಿಗೆ ಹೋರಾಟಕ್ಕಿಳಿದು ತಮ್ಮ ಕ್ಷತ್ರಿಯ ವರ್ಚಸ್ಸನ್ನು ತೋರ್ಪಡಿಸಿದರು. ನಂತರ ಎರಡು ಪಂಗಡಗಳು ಒಂದಾಗಿ ಊರಿನ ದೊಡ್ಡ ದೇವರೆನಿಸಿಕೊಂಡ ವೆಂಕಟರಮಣ ದೇವಸ್ಥಾನಕ್ಕೆ 'ಗೋವಿಂದ.. ಗೋವಿಂದ..' ಎನ್ನುತ್ತ ತೆರಳಿ ಹೋರಾಟದ ನೆನಪುಗಳನ್ನು ಮೆಲಕು ಹಾಕಿತು. ಅಲ್ಲದೆ, ಈ ಸಮಯದಲ್ಲಿ ಆದ ಸಣ್ಣಪುಟ್ಟ ತಪ್ಪುಗಳನ್ನು ಒಪ್ಪಿಕೊಂಡು ಸಮಾಜದವರೆಲ್ಲ ಒಂದಾಗಿ ಬಾಳೋಣ ಎನ್ನುವ ಸಾಮರಸ್ಯ ಮೆರೆದರು.
ಹಿಂಡಲಕಾಯಿ ಹೊಡೆತ: ಅಂಕೋಲಾ ತಾಲೂಕಿನ ಕೆಲ ಗ್ರಾಮಾಂತರ ಪ್ರದೇಶಗಳಲ್ಲಿ ನವ ದಂಪತಿ ಸಾಂಪ್ರದಾಯಿಕ ಪದ್ಧತಿಯಂತೆ ದೀಪಾವಳಿಯ ಸಂದರ್ಭದಲ್ಲಿ ಮಾವನ ಮನೆಗೆ ಕೈ ಮುಗಿಯಲು ಬರುವಾಗ ಹೊಸ ಬಟ್ಟೆ ಧರಿಸಿ ಬರುತ್ತಾರೆ. ಇಂತಹ ಸಂದರ್ಭಗಳಲ್ಲಿ ಆ ಪರಿಸರದ ಕೆಲ ಹುಡುಗರು ಹೊಸ ಮದುಮಗನಿಗೆ ಹಿಂಡಲಕಾಯಿಯಿಂದ ಹೊಡೆಯುವ ಸಂಪ್ರದಾಯ ಕೆಲ ಹಳ್ಳಿಗಳಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತ ಬಂದಿರುವುದು ಸಹ ಇಲ್ಲಿನ ದೀಪಾವಳಿಯ ಆಚರಣೆಯ ವಿಶೇಷತೆಗಳಲ್ಲೊಂದಾಗಿದೆ.