ಕಾರವಾರ ಬಂದರು ಅಭಿವೃದ್ಧಿ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ
ಕಾರವಾರ, ಜನವರಿ 23: ಈಚೆಗೆ ಬಹು ಚರ್ಚಿತವಾದ, ಹಾಗೆಯೇ ಮೀನುಗಾರರ ಬೃಹತ್ ಹೋರಾಟಕ್ಕೆ ಕಾರಣವಾಗಿದ್ದ ಕಾರವಾರ ವಾಣಿಜ್ಯ ಬಂದರು ಅಭಿವೃದ್ಧಿಯ ಎರಡನೇ ಹಂತದ ವಿಸ್ತರಣೆಗೆ ಹೈಕೋರ್ಟ್ ತಡೆ ನೀಡಿದೆ.
ವಾಣಿಜ್ಯ ಬಂದರು ಅಭಿವೃದ್ಧಿಯ 2ನೇ ಹಂತದ ಕಾಮಗಾರಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ. ಬೈತ್ ಕೋಲ್ ಬಂದರು ನಿರಾಶ್ರಿತ ಮೀನುಗಾರರ ಸಹಕಾರ ಸಂಘ ಈ ಕಾಮಗಾರಿ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿತ್ತು.
ಕಾರವಾರದಲ್ಲಿ ಏನಿದು ಸಾಗರ ಮಾಲಾ ಯೋಜನೆ?; ಮೀನುಗಾರರ ವಿರೋಧ ಏಕೆ?
ಕಾಮಗಾರಿಗೆ ಮುನ್ನ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರದ ಅನುಮತಿ ಪಡೆದಿಲ್ಲದಿರುವುದರ ಕುರಿತು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದರೂ ಕಾಮಗಾರಿ ಮುಂದುವರಿಸಿದ್ದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಡಲತೀರವನ್ನು ಹಿಂದಿದ್ದಂತೆ ಮರುಸ್ಥಾಪಿಸಲು ಆದೇಶೀಸಿದೆ.
ಸಾಗರ ಮಾಲಾ ಯೋಜನೆಯು ವಾಣಿಜ್ಯ ಬಂದರನ್ನು ರಾಷ್ಟ್ರಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸುವ ಬಂದರು ವಿಸ್ತರಣೆ ಯೋಜನೆಯಾಗಿದ್ದು, ಕಾರವಾರದ ವಾಣಿಜ್ಯ ಬಂದರನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಸಾಗರ ಮಾಲಾ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗಿತ್ತು. ಈ ಕಾರಣಕ್ಕೆ ಸ್ಥಳೀಯ ಮೀನುಗಾರರ ವಿರೋಧದ ನಡುವೆಯೂ ಪೊಲೀಸ್ ಬಂದೋಬಸ್ತ್ ನಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿತ್ತು.
ಕಾಮಗಾರಿಗೆ ಮುಂದಾಗುತ್ತಿದ್ದಂತೆ ಮೀನುಗಾರರ ಪ್ರತಿಭಟನೆಯೂ ತೀವ್ರ ಸ್ವರೂಪ ಪಡೆದಿತ್ತು. ನಂತರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕಾರವಾರ ಶಾಸಕಿ ರೂಪಾಲಿ ನಾಯ್ಕ ಜನರಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.
ಕಾರವಾರ ಬಂದರು ವಿವಾದ: ಸತೀಶ್ ಸೈಲ್ ವಿರುದ್ಧ ಆಕ್ರೋಶ
ಈ ಯೋಜನೆಯಿಂದಾಗಿ ತಮ್ಮ ಸ್ಥಳ ಕಳೆದುಕೊಳ್ಳುವ ಜೊತೆ ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಮೀನುಗಾರರು ಈ ಯೋಜನೆಯನ್ನು ವಿರೋಧಿಸುತ್ತಿದ್ದರು. ಜೊತೆಗೆ ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಿ, ಮೀನುಗಾರರ ಉದ್ಯೋಗ ಕೂಡ ಕಡಿತವಾಗುತ್ತದೆ ಎನ್ನುವುದು ಮೀನುಗಾರರ ಆತಂಕವಾಗಿತ್ತು
ಇದೀಗ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಹಾಗೂ ನ್ಯಾ. ಹೇಮಂತ್ ಚಂದನ್ ಗೌಡರ್ ಅವರಿದ್ದ ವಿಭಾಗೀಯ ಪೀಠವು ಕಾಮಗಾರಿಗೆ ಮಧ್ಯಂತರ ತಡೆ ನೀಡಿ ಆದೇಶವನ್ನು ಹೊರಡಿಸಿದೆ.