ಕೊರೊನಾ; ಮೋಜು ಮಸ್ತಿಗೆ ಬರುವವರನ್ನು ವಾಪಸ್ ಕಳಿಸಿ ಎಂದ ಡಿಸಿ
ಕಾರವಾರ, ಮಾರ್ಚ್ 20: 'ಮೋಜು ಮಸ್ತಿಗಾಗಿ ಜಿಲ್ಲೆಗೆ ಬರುವವರನ್ನು ವಾಪಸ್ ಕಳುಹಿಸಿ' ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಆದೇಶಿಸಿದ್ದಾರೆ.
ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರ್, ಇಒ, ಉಪವಿಭಾಗಾಧಿಕಾರಿ ಹಾಗೂ ಆರೋಗ್ಯಾಧಿಕಾರಿಗಳೊಂದಿಗೆೆ ನಿನ್ನೆ ವಿಡಿಯೋ ಸಂವಾದ ನಡೆಸಿದ ಅವರು, 'ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸದ ಉದ್ದೇಶಕ್ಕಾಗಿ ಬರುವವನ್ನು ಗಡಿಯಲ್ಲಿಯೇ ತಡೆ ಹಿಡಿಯಲಾಗುವುದು. ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ- ಪುನಸ್ಕಾರಗಳು ನಡೆಯಬಹುದಾಗಿದ್ದು, ಭಕ್ತಾದಿಗಳು ಅಲ್ಲಿಗೆ ತೆರಳಲು ನಿರಾಕರಿಸಲಾಗಿದೆ. ಅರ್ಚಕರು ಹಾಗೂ ಆಡಳಿತ ಮಂಡಳಿಯವರು ಪ್ರವೇಶಿಸಬಹುದಾಗಿದೆ. 5 ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುವಂತಿಲ್ಲ' ಎಂದು ತಿಳಿಸಿದರು.
ಕೊರೊನಾ ವೈರಸ್; ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ?
ಜಿಲ್ಲೆಯಲ್ಲಿ ಸೋಶಿಯಲ್ ಡಿಸಿಶನ್ ಶಿಪ್
‘ಹೊಟ್ಟೆಪಾಡಿಗಾಗಿ ದುಡಿಯುವವರನ್ನು ಅಡ್ಡಿಪಡಿಸಬೇಡಿ. ಆದರೆ, ಜನಸಂದಣಿಗೆ ಅವಕಾಶ ನೀಡದೇ ಮಂಜಾಗೃತಾ ಕ್ರಮಗಳನ್ನು ಕೈಗೊಳ್ಳಿ. ಇಂದಿನಿಂದ ಸಾರ್ವಜನಿಕರು ನೀಡುವ ದೂರುಗಳನ್ನು ಅಧಿಕಾರಿಗಳು ಸ್ವೀಕರಿಸಬೇಕು. ಅದಕ್ಕಾಗಿ ಇಂದಿನಿಂದಲೇ ಜಿಲ್ಲೆಯಲ್ಲಿ ಸೋಶಿಯಲ್ ಡಿಸಿಶನ್ ಶಿಪ್ ಜಾರಿಗೊಳಿಸಿ ಆದೇಶಿಸಲಾಗುವುದು. ಜಿಲ್ಲೆಯಲ್ಲಿ ಜನಜಾಗೃತಿ ಕಾರ್ಯಕ್ರಮಗಳು ಯಶಸ್ವಿಯಾಗಿದ್ದು, ಇನ್ನೂ ಉತ್ತಮವಾಗಿ ಜನರನ್ನು ತಲುಪುವಂತೆ ಮಾಡಬೇಕು' ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ‘ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಗರ್ಭಿಣಿ ಹಾಗೂ ಬಾಣಂತಿಯರು ಮಾರ್ಚ್ 31ರವರೆಗೆ ಮನೆಯಲ್ಲಿಯೇ ಕುಳಿತು ಕೆಲಸ ನಿರ್ವಹಿಸಬೇಕು. ಅನಾರೋಗ್ಯ ಇರುವ ಕಚೇರಿ ಸಿಬ್ಬಂದಿ ಸಹ ಆಯಾ ಹಂತದ ಇಲಾಖೆಯ ಮುಖ್ಯಸ್ಥರಿಂದ ಅನುಮತಿಯನ್ನು ಪಡೆದು ಮನೆಯಲ್ಲಿಯೇ ಕುಳಿತು ಕಾರ್ಯ ನಿರ್ವಹಿಸಬಹುದಾಗಿದೆ. ಮೂಲ ಸೌಕರ್ಯಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದರ ಜೊತೆಯಲ್ಲಿ ಜನಸಂದಣಿಗೆ ಎಲ್ಲಿಯೂ ಅವಕಾಶ ನೀಡಬಾರದು' ಎಂದರು.
ಮುಂಡಗೋಡ ಟಿಬೇಟಿಯನ್ ಕಾಲೋನಿಯಲ್ಲಿ 144 ಸೆಕ್ಷನ್ ಜಾರಿ
ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಎಫ್ ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಶಿವ ಪ್ರಕಾಶ್ ದೇವರಾಜು ಮಾತನಾಡಿ, ‘ಕ್ಷಣ ಕ್ಷಣದ ಮಾಹಿತಿಗಳನ್ನು ವಾಟ್ಸಾಪ್ ಗ್ರೂಪ್ಗಳಿಗೆ ರವಾನಿಸಿ, ಎಲ್ಲಿಯೂ ವದಂತಿಗಳಿಗೆ ಅವಕಾಶ ನೀಡದಿರಿ. ಚೆಕ್ಪೋಸ್ಟ್ ಗಳಲ್ಲಿ ಸರಿಯಾಗಿ ತನಿಖೆ ನಡೆಯಲಿ. ಇದು ಕೇವಲ ಒಂದು ಇಲಾಖೆ ಜವಾಬ್ದಾರಿಯಲ್ಲ. ಇಂತಹ ಸಮಯಗಳಲ್ಲಿ ಎಲ್ಲ ಇಲಾಖೆಗಳೂ ಒಗ್ಗಟ್ಟಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು' ಎಂದರು.
ತುರ್ತು ಅಗತ್ಯವಿಲ್ಲದಿದ್ದರೆ ಕಚೇರಿಗೆ ಬರಲೇಬೇಡಿ
ತುರ್ತು ಅಗತ್ಯವಿಲ್ಲದಿದ್ದರೆ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಆಗಮಿಸದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕೊರೊನಾ ವೈರಾಣು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲೆಯ ಎಲ್ಲ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಿಗೆ ಮತ್ತು ಸರ್ಕಾರದ ಸ್ವಾಮೀಪ್ಯಕ್ಕೆ ಒಳಪಟ್ಟ ಸಂಘ- ಸಂಸ್ಥೆಗಳಿಗೆ ತುರ್ತು ಇಲ್ಲದ ಕೆಲಸಗಳಿಗೆ ಆಗಮಿಸುವ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಈ ಬಗ್ಗೆ ಆಯಾ ಕಚೇರಿಯ ಮುಖ್ಯಸ್ಥರು ತಮ್ಮ ಕಚೇರಿಯ ಎದುರು ಫಲಕಗಳನ್ನು ಅಳವಡಿಸುವಂತೆ ಸೂಚಿಸಿದ್ದಾರೆ.
ಜತೆಗೆ, ಅನಿವಾರ್ಯ ಕಾರಣವಿಲ್ಲದೆ ಪಾರ್ಕ್, ಬೀಚ್, ಮಾರುಕಟ್ಟೆ, ಮಾಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗುಂಪಾಗಿ ತಿರುಗಾಡುವುದನ್ನು ಮಾಡಬಾರದು. ಸಾರ್ವಜನಿಕರು ತಮ್ಮ ಹಾಗೂ ಇತರರ ಆರೋಗ್ಯದ ಹಿತದೃಷ್ಟಿಯಿಂದ ಸಹಕರಿಸಬೇಕೆಂದು ಕಾರವಾರ ತಹಶೀಲ್ದಾರ್ ಆರ್.ವಿ.ಕಟ್ಟಿ ಈ ಮೂಲಕ ಕೋರಿದ್ದಾರೆ.
ಸಾರ್ವಜನಿಕ ಸೇವೆ ತಾತ್ಕಾಲಿಕ ಸ್ಥಗಿತ
ಕೊರೊನಾ ವೈರಸ್ ಅಪಾಯಕಾರಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ದೃಷ್ಟಿಯಿಂದ ಜನದಟ್ಟಣೆ ನಿಯಂತ್ರಿಸಲು ಕಾರವಾರ ನಗರಸಭೆಯು ಕೆಲವು ಸಾರ್ವಜನಿಕ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸಾರ್ವಜನಿಕ ಸೇವೆಗಳಾದ ಜನನ, ಮರಣ ಪ್ರಮಾಣ ಪತ್ರ, ಇ- ಆಸ್ತಿ, ಹಕ್ಕು ಬದಲಾವಣೆ, ಉದ್ದಿಮೆ ಹಾಗೂ ಕಟ್ಟಡ ಪರವಾನಗಿ ಸೇವೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿ ಪ್ರಭಾರ ಪೌರಾಯುಕ್ತ ಎಂ.ಪ್ರಿಯಾಂಗಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ತುರ್ತಲ್ಲದ ಕಚೇರಿ ಕೆಲಸಗಳಿಗೆ ಅಲೆದಾಡುವುದರೊಂದಿಗೆ, ಗುಂಪಿನಲ್ಲಿ ಕಂಡುಬರುತ್ತಿರುವುದರಿಂದ ಸಾರ್ವಜನಿಕ ಹಾಗೂ ಕಚೇರಿ ಸಿಬ್ಬಂದಿ ಆರೋಗ್ಯ ಮತ್ತು ಹಿತ ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರವು ತುರ್ತು ಪರಿಸ್ಥಿತಿ ಘೋಷಿಸಿರುವ ಹಿನ್ನೆಲೆಯಲ್ಲಿ ಹಾಗೂ ಪ್ರಕೃತಿ ವಿಪತ್ತು ನಿರ್ವಹಣೆ ಕಾಯ್ದೆ- 2005 ಸೆಕ್ಷೆನ್ 22ರನ್ವಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅವರ ಆದೇಶದಂತೆ ನಗರಸಭೆಯಿಂದ ನೀಡಲಾಗುತ್ತಿರುವ ಸಾರ್ವಜನಿಕ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇವರ ಮೊರೆ ಹೋದ ಗ್ರಾಮಸ್ಥರು
ಮಹಾಮಾರಿ ಕೊರೊನಾ ಸೋಂಕು ರೋಗ ತಡೆದು ವಿಪತ್ತಿನಿಂದ ರಕ್ಷಿಸುವಂತೆ ಬಲಮುರಿ ಮಹಾಗಣಪತಿ ದೇವರಲ್ಲಿ ಗ್ರಾಮಸ್ಥರು ಲೋಕ ಕಲ್ಯಾಣವಾಗುವಂತೆ ಪ್ರಾರ್ಥಿಸಿದರು.
ತಾಲ್ಲೂಕಿನ ಡೋಂಗ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಾರ ಪುನರ್ವಸತಿ ಪ್ರದೇಶದಲ್ಲಿ ಗುರುವಾರ ನಾಗರಿಕರೆಲ್ಲ ಸೇರಿ ಕೊರೊನಾ ಸೋಂಕು ತಡೆಯುವಂತೆ ದೇವರಲ್ಲಿ ಮೊರೆ ಹೋದರು. ಈ ಹಿಂದೆಯೂ ಡೆಂಗಿ ಜ್ವರ, ಪ್ರವಾಹ ಇತ್ಯಾದಿ ವಿಪತ್ತಿನ ಸಂದರ್ಭಗಳಲ್ಲೂ ಇಲ್ಲಿನ ಮಹಾಗಣಪತಿ ದೇವರಿಗೆ ‘ತೋರಣಕಟ್ಟಿನ ಹೇಳಿಕೆ' ಎಂಬ ಸಂಪ್ರದಾಯದಂತೆ ಊರವರೆಲ್ಲ ಸೇರಿ ತಲೆವಾರು ಕಾಣಿಕೆಯನ್ನು ದೇವರಿಗೆ ಅರ್ಪಿಸಿದ್ದರು. ಅದರ ಪರಿಣಾಮವಾಗಿ ಹಲವು ಬಾರಿ ವಿಪತ್ತಿನಿಂದ ದೇವರೇ ರಕ್ಷಿಸಿದ್ದು ಹಾಗೂ ಜೀವ ಹಾನಿ ಆಗದೇ ಇದ್ದುದೂ ಇತ್ತು ಎಂದು ಗ್ರಾಮಸ್ಥರು ನಂಬಿದ್ದಾರೆ.ಅದರಂತೆ ಈ ವರ್ಷ ಬಂದಿರುವ ಮಹಾರೋಗವಾದ ಕೊರೊನಾ ಸೋಂಕನ್ನು ತಡೆದು ಎಲ್ಲರಿಗೂ ಒಳ್ಳೆಯದನ್ನು ಮಾಡು ಎಂದು ಹೆಗ್ಗಾರ ಊರಿನ ಸಮಸ್ತ ಭಕ್ತಾದಿಗಳು, ನಾಗರಿಕರು ಸೇರಿ ತಲಾವಾರು ಕಾಣಿಕೆಯನ್ನು ಅರ್ಪಿಸಿ ವೈದಿಕ ವೃಂದದೊಡನೆ ದೇವರಲ್ಲಿ ಹೇಳಿಕೆ ಮಾಡಿಕೊಂಡರು.