ಉತ್ತರಕನ್ನಡದಲ್ಲಿ ಮಳೆ ಆರ್ಭಟ; ಮರ ಮನೆಮೇಲೆ ಬಿದ್ದು 6 ಮಂದಿಗೆ ಗಾಯ
ಕಾರವಾರ, ಜುಲೈ 4 : ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಮಳೆ ಆರ್ಭಟ ಜೋರಾಗಿದೆ. ಸೋಮವಾರ ದಿನವಿಡಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಹೊನ್ನಾವರದಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ 6 ಮಂದಿ ಗಾಯಗೊಂಡಿದ್ದಾರೆ. ಗೋವಾ-ಅನಮೋಡ ರಾಷ್ಟ್ರೀಯ ಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಸಂಪರ್ಕ ಕಡಿತಗೊಂಡಿದೆ.
ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಕೊಂಚ ಬಿಡುವು ನೀಡಿದ್ದ ಮಳೆ ಸೋಮವಾರ ಮುಂಜಾನೆಯಿಂದ ಸಂಜೆವರೆಗೂ ವ್ಯಾಪಕವಾಗಿ ಮಳೆಯಾಗಿದೆ. ಪರಿಣಾಮ ಹೊನ್ನಾವರದ ಬಗ್ರಾಣಿ ಕ್ರಾಸ್ ಬಳಿ ಬೃಹತ್ ಅಶ್ವತ್ಥ ಮರ ಮನೆ ಮೇಲೆ ಬಿದ್ದು ಮನೆಯಲ್ಲಿ ವಾಸವಾಗಿದ್ದ 6 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಉತ್ತರ ಕನ್ನಡ; ಮಳೆ, ಹೆದ್ದಾರಿಗಳಲ್ಲಿ ಗುಡ್ಡ ಕುಸಿತದ ಭೀತಿ
ಇನ್ನು ಈ ಆಲದಮರ ಬಿದ್ದ ಪರಿಣಾಮ 8 ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಬೀಳುವ ಸ್ಥಿತಿಯಲ್ಲಿದ್ದ ಇನ್ನೊಂದು ಮರವನ್ನು ಸಹ ತೆರವುಗೊಳಿಸುವ ಮೂಲಕ ಮುಂಜಾಗೃತೆ ವಹಿಸಲಾಗಿದೆ.
ರಸ್ತೆ ಸಂಪರ್ಕ ಕಡಿತ
ಇನ್ನು ಸಿದ್ದಾಪುರ ತಾಲ್ಲೂಕಿನ ಕಾನಸೂರು- ಮಾದ್ನಕಳ್ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಹೊಸ ಸೇತುವೆ ಕೆಲಸ ಮುಗಿಯದ ಕಾರಣ ಬದಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ವ್ಯಾಪಕ ಮಳೆಯಿಂದಾಗಿ ಕಾನಸೂರು ಹೊಳೆ ತುಂಬಿ ಹರಿಯುತ್ತಿದ್ದು, ಮಾದ್ನಕಳ್, ಶ್ರೀನಗರ, ಅಮ್ಮಚ್ಚಿ, ದೇವಿಸರ, ಅರೆಹಳ್ಳ, ಕೊಪ್ಪ, ಗಟ್ಟಿಕೈ ಸೇರದಿದಂತೆ ಇನ್ನಿತರ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ಭಾಗದ ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗಕ್ಕೆ ತೆರಳುವವರು ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ, ಹೆಬ್ಬಾಳೆ ಸೇತುವೆ ಮುಳುಗಡೆ, ಸಂಚಾರ್ ಬಂದ್
ಗುಡ್ಡ ಕುಸಿತ, ವಾಹನ ಸಂಚಾರ ಅಸ್ತವ್ಯಸ್ತ
ಇನ್ನು ಗೋವಾ-ಅನಮೋಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾದ ಕಾರಣ ಈ ಮಾರ್ಗದ ಸಂಚಾರ ಸಂಪೂರ್ಣ ಕಡಿತಗೊಂಡಿದೆ. ಗೋವಾ ಗಡಿಯಲ್ಲಿ ಗುಡ್ಡಕುಸಿತವಾಗಿದ್ದು, ಜೆಸಿಬಿ ಮೂಲಕ ಕುಸಿದ ಮಣ್ಣು ಹಾಗೂ ಕಲ್ಲುಗಳನ್ನು ತೆರವು ಮಾಡುವ ಕಾರ್ಯಾಚರಣೆ ಸಂಜೆವರೆಗೂ ನಡೆದಿದೆ. ಈ ಮಾರ್ಗದ ಮೂಲಕ ಸಂಚಾರ ಮಾಡುತ್ತಿದ್ದ ವಾಹನಗಳ ಸಂಚಾರ ಸಂಜೆವರೆಗೂ ಅಸ್ತವ್ಯಸ್ತವಾಗಿದೆ.
ಜಿಲ್ಲೆಯಲ್ಲಿ 531.3 ಮಿ.ಮೀ ಮಳೆ
ಶಿರಸಿಯಲ್ಲಿ 105ಮಿ.ಮೀ, ಹೊನ್ನಾವರ 75.3 ಮೀ.ಮೀ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 531.3 ಮೀ.ಮೀ ಮಳೆಯಾಗಿದೆ. ಕರಾವಳಿ ಹಾಗೂ ಘಟ್ಟದ ಮೆಲ್ಭಾಗದ ಅಲ್ಲಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಇನ್ನು ಹಳಿಯಾಳದಲ್ಲಿ ಕೆರೆಯ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಮಂಜುನಾಥ್ ಮೋರೆ ಎಂಬುವವನು ಸಾತ್ನಳ್ಳಿ ಕೆರೆಯ ನೀರಿನಲ್ಲಿ ಮುಳುಗಿ ಸಾವುಕಂಡಿದ್ದಾನೆ. ಸ್ಥಳಕ್ಕೆ ತೆರಳಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 8ರವರೆಗೆ ಮಳೆ
ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಜು.8 ರವರೆಗೂ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜು.8 ರವರೆಗೆ ಭಾರೀ ಮಳೆಯಾಗುವ ಕಾರಣ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಭಾರೀ ಗಾಳಿ ಸಹಿತ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಿದೆ. ಈ ಅವಧಿಯಲ್ಲಿ ಗಾಳಿಯು ಪ್ರತಿ ಗಂಟೆಗೆ 40- 50 ಕಿ.ಮೀ. ವೇಗದಲ್ಲಿ ಬೀಸಲಿದೆ ಎನ್ನಲಾಗಿದ್ದು, ಕಡಲತೀರ, ನದಿಪಾತ್ರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಹಿನ್ನಲೆ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Recommended Video