ರೈತರ ವರ್ಷದ ಕೂಳು ಕಸಿದುಕೊಂಡ ಎರಡು ದಿನದ ಧಾರಾಕಾರ ಮಳೆ
ಕಾರವಾರ, ಅಕ್ಟೋಬರ್ 18: ಕಾರವಾರ ತಾಲ್ಲೂಕಿನ ನಗೆಕೋವೆ ಗ್ರಾಮದಲ್ಲಿ ಸತತವಾಗಿ ಸುರಿದ ಭಾರೀ ಮಳೆಗೆ ಗ್ರಾಮಕ್ಕೆ ಹೊಂದಿಕೊಂಡಿದ್ದ ಹಳ್ಳಗಳು, ಉಕ್ಕಿ ಹರಿದು ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಕಟಾವಿಗೆ ಹತ್ತಿರದಲ್ಲಿದ್ದ ಬೆಳೆ ನೆಲಕಚ್ಚಿದೆ. ಎರಡೇ ದಿನದ ಧಾರಾಕಾರ ಮಳೆ ರೈತರ ವರ್ಷದ ಕೂಳು ಕಸಿದುಕೊಂಡಿದೆ.
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ನಗೆಕೋವೆ ಗ್ರಾಮದಲ್ಲಿ ಬಹುತೇಕರು ಕೃಷಿಕರೇ ಇದ್ದು, ಅನಾದಿ ಕಾಲದಿಂದಲೂ ಇರುವ ಅಲ್ಪ ಪ್ರಮಾಣದ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಲ್ಲಿನ ಹೆಚ್ಚಿನ ಕುಟುಂಬಗಳಿಗೆ ಕೃಷಿಯೇ ಪ್ರಮುಖ ಜೀವನಾಧಾರವಾಗಿದೆ.
ಕಲಬುರಗಿ ಪ್ರವಾಹ; ರಕ್ಷಣಾ ಕಾರ್ಯಕ್ಕೆ ಸೇನೆ ನಿಯೋಜನೆ
ಕಳೆದ ತಿಂಗಳು ಸುರಿದ ಭಾರೀ ಪ್ರಮಾಣದ ಮಳೆಗೆ ಗ್ರಾಮದ ಸಮೀಪದ ಗುಡ್ಡ ಜರಿದು ಸಾಕಷ್ಟು ಪ್ರಮಾಣದಲ್ಲಿ ಮಣ್ಣು, ಗುಡ್ಡದ ಕೆಳಗಿನ ಕೃಷಿ ಜಮೀನುಗಳಿಗೆ ನುಗ್ಗಿತ್ತು. ಅಲ್ಲದೇ ಸಾಕಷ್ಟು ಮರಗಳು ಸಹ ಬುಡಸಮೇತ ತೇಲಿಬಂದಿದ್ದು, ಉಳುಮೆ ಮಾಡಿದ್ದ ಬೆಳೆಯೆಲ್ಲಾ ನಾಶವಾಗುವಂತಾಗಿತ್ತು.
ಆದರೂ ಉಳಿದ ಕೃಷಿ ಜಮೀನು ಬಚಾವಾಗಿದ್ದು, ಅಷ್ಟಾದರೂ ಬೆಳೆ ಕೈಸೇರುವ ನಿರೀಕ್ಷೆಯಲ್ಲಿ ತಾಲ್ಲೂಕಿನ ರೈತರು ಇದ್ದರು. ಆದರೆ, ಕಳೆದೆರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದ್ದ ಸ್ವಲ್ಪ ಜಮೀನಿನಲ್ಲಿ ನೀರು ನಿಲ್ಲುವುದರ ಜೊತೆಗೆ ಗುಡ್ಡದ ಮೇಲಿನ ಕಸವನ್ನು ಸಹ ಬೆಳೆಯ ಮೇಲೆ ತಂದು ಹಾಕಿದ್ದರ ಪರಿಣಾಮ ಬೆಳೆದು ನಿಂತಿದ್ದ ಬೆಳೆ ಸಂಪೂರ್ಣ ಹಾನಿಗೊಳಗಾಗುವಂತಾಗಿದೆ.
ಸದ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾನಿ ಕುರಿತು ಮಾಹಿತಿ ನೀಡಿದ್ದು, ಕೃಷಿ ಇಲಾಖೆ ಸೂಕ್ತ ಪರಿಹಾರವನ್ನಾದರೂ ಒದಗಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.