ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ: ಹೆದ್ದಾರಿ ಸಂಚಾರ ಬಂದ್
ಕಾರವಾರ, ಜುಲೈ 9: ಕೊರೊನಾ ಸೋಂಕಿನ ಭೀತಿಯ ನಡುವೆ ಮಳೆಯ ಅಬ್ಬರ ಹೆಚ್ಚಾಗಿದ್ದು, ಕಾರವಾರ ಹಾಗೂ ಅಂಕೋಲಾ ತಾಲೂಕಿನ ಹಲವೆಡೆ ನೆರೆ ಆತಂಕ ಎದುರಾಗಿದೆ.
Recommended Video
ಇಂದು ಬೆಳಿಗ್ಗೆಯಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದು ಕಾರವಾರ ತಾಲೂಕಿನ ಆಮದಳ್ಳಿ, ಮುದಾಗ ಬಳಿ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಬಂದ್ ಆಗಿದೆ. ಮುದಗಾ ಬಳಿ ವಾಹನಗಳು ಮುಂದೆ ಸಾಗಲಾಗದೇ ರಸ್ತೆ ಮಧ್ಯೆಯೇ ಸಿಲುಕಿಕೊಂಡಿವೆ. ಇದಲ್ಲದೇ ಹೆದ್ದಾರಿ ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.
ಕದ್ರಾ ಜಲಾಶಯದ ಒಳಹರಿವು ಏರಿಕೆ; ಪ್ರವಾಹದ ಮೊದಲ ಮುನ್ಸೂಚನೆ ಪ್ರಕಟ
ಮಳೆಯಿಂದ ಹಲವು ಗ್ರಾಮಗಳು ಜಲಾವೃತ
ಇನ್ನು ಅಂಕೋಲಾ ತಾಲೂಕಿನ ಬಾಳೆಗುಳಿ, ಶಿರಗುಂಜಿ ಸೇರಿದಂತೆ ಹಲವು ಗ್ರಾಮಗಳು ಮಳೆಯಿಂದ ಜಲಾವೃತವಾಗಿದ್ದು ಹಲವು ಮನೆಗಳಿಗೆ ನೀರು ನುಗ್ಗಿದೆ. ಇದಲ್ಲದೇ ಗದ್ದೆಗಳು ಜಲಾವೃತವಾಗಿವೆ. ಕಂದಾಯ ಇಲಾಖೆ, ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ವರುಣನ ಅಬ್ಬರ ಹೀಗೇ ಮುಂದುವರೆದರೆ ಇನ್ನಷ್ಟು ಅಪಾಯ ಎದುರಾಗಲಿದ್ದು ಜನರು ಆತಂಕದಲ್ಲಿದ್ದಾರೆ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ ಹೀಗಿದೆ. ಅಂಕೋಲಾದಲ್ಲಿ 127.0 ಮಿ.ಮೀ, ಭಟ್ಕಳ 80.0 ಮಿ.ಮೀ, ಹಳಿಯಾಳ 3.2 ಮಿ.ಮೀ, ಹೊನ್ನಾವರ 82.7 ಮಿ.ಮೀ, ಕಾರವಾರ 51.8 ಮಿ.ಮಿ, ಕುಮಟಾ 51.6 ಮಿ.ಮೀ, ಮುಂಡಗೋಡ 12.2 ಮಿ.ಮೀ, ಸಿದ್ದಾಪುರ 67.2 ಮಿ.ಮೀ ಶಿರಸಿ 68.0 ಮಿ.ಮೀ, ಜೋಯಡಾ 31.8 ಮಿ.ಮೀ, ಯಲ್ಲಾಪುರ 44.0 ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ
ಕದ್ರಾ: 34.50ಮೀ (ಗರಿಷ್ಠ), 31.15 ಮೀ (2020), 21352.00 ಕ್ಯೂಸೆಕ್ (ಒಳಹರಿವು) 19558.00 ಕ್ಯೂಸೆಕ್ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಠ), 70.15 ಮೀ. (2020), 8043.0 ಕ್ಯೂಸೆಕ್ (ಒಳ ಹರಿವು) 12196.0 (ಹೊರಹರಿವು) ಸೂಪಾ: 564.00 ಮೀ (ಗ), 530.95 ಮೀ (2020), 23199.471 ಕ್ಯೂಸೆಕ್ (ಒಳ ಹರಿವು), 2460.331 ಕ್ಯೂಸೆಕ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 450.97 ಮೀ (2020), 49.00 ಕ್ಯೂಸೆಕ್ (ಒಳ ಹರಿವು) 0.00 ಕ್ಯೂಸೆಕ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 432.90 ಮೀ (2020), 3404.0 ಕ್ಯೂಸೆಕ್ (ಒಳ ಹರಿವು) 4332.0 ಕ್ಯೂಸೆಕ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 49.83 ಮೀ (2020) 8310.0 ಕ್ಯೂಸೆಕ್ (ಒಳ ಹರಿವು) 7911.0 ಕ್ಯೂಸೆಕ್ (ಹೊರ ಹರಿವು) ಲಿಂಗನಮಕ್ಕಿ: 1819.00 ಅಡಿ (ಗ), 1763.65 ಅಡಿ (2020). 36537.00 ಕ್ಯೂಸೆಕ್ (ಒಳ ಹರಿವು) 5028.98 ಕ್ಯೂಸೆಕ್ಸ್ (ಹೊರ ಹರಿವು).
ಶಾಸಕಿ ರೂಪಾಲಿ ನಾಯ್ಕ ಸೂಚನೆ
ಕಾರವಾರ- ಅಂಕೋಲಾ ತಾಲೂಕುಗಳಲ್ಲಿ ವ್ಯಾಪಕ ಮಳೆಯಿಂದ ಹಲವು ಹಳ್ಳಿಗಳಲ್ಲಿ ನೀರು ತುಂಬುತ್ತಿದ್ದು, ಯಾವುದೇ ಸ್ಥಿತಿ ಎದುರಿಸಲು ಸಿದ್ಧರಾಗುವಂತೆ ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾಳಜಿ ಕೇಂದ್ರ ಆರಂಭ, ಜನರ ಸ್ಥಳಾಂತರ ಕಾರ್ಯ ಸೇರಿದಂತೆ ಯಾವುದೇ ರೀತಿಯ ಪರಿಹಾರ ಕಾರ್ಯ ವಿಳಂಬ ಇಲ್ಲದೆ ನಡೆಯಬೇಕು ಎಂದಿದ್ದಾರೆ.