ಮಳೆ ಅವಾಂತರ: ಉತ್ತರ ಕನ್ನಡದಲ್ಲಿ 437 ಕೋಟಿ ಹಾನಿ, ಮನೆ ಕಳೆದುಕೊಂಡವರಿಗೆ ಪರಿಹಾರ
ಕಾರವಾರ, ಆಗಸ್ಟ್, 17: ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಮಳೆರಾಯನ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ನೆರೆ ಪರಿಸ್ಥಿತಿಯಿಂದ ಸಂಕಷ್ಟದಲ್ಲಿದ್ದ ಜನ ಜೀವನ ಇದೀಗ ಸಹಜ ಸ್ಥಿತಿಗೆ ಮರಳಿದೆ. ಜಿಲ್ಲೆಯಾದ್ಯಂತ 437 ಕೋಟಿ ರೂಪಾಯಿ ಆಸ್ತಿ ಹಾನಿಯಾಗಿರುವ ಬಗ್ಗೆ ಜಿಲ್ಲಾಡಳಿತ ಅಂದಾಜಿಸಿದ್ದು, ಇದೀಗ ಪರಿಹಾರ ವಿತರಣೆಗೆ ಮುಂದಾಗಿದೆ.
ಹೌದು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಲ್ಲಿ ಮಳೆರಾಯ ಸೃಷ್ಟಿಸಿದ ಅವಾಂತರಗಳು ಒಂದೆರಡಲ್ಲ. ಹಿಂದೆಂದೂ ಕಂಡು ಕೇಳರಿಯದ ಮಟ್ಟಿಗೆ ಕೆಲವೆಡೆ ವರುಣ ಅಬ್ಬರಿಸಿದ್ದು, ಪ್ರವಾಹದಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿತ್ತು.
ಅದರಲ್ಲೂ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ ಭಾರೀ ಪ್ರಮಾಣದಲ್ಲಿ ಸುರಿದ ಮಳೆಯಿಂದ ಭೂಕುಸಿತ ಸಂಭವಿಸಿತ್ತು. ಇದರ ಪರಿಣಾಮ ಮನೆಯಡಿ ಸಿಲುಕಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ನೂರಾರು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿತ್ತು. ಹವಾಮಾನ ಇಲಾಖೆ ವರದಿ ಪ್ರಕಾರ ಕರಾವಳಿ ಹಾಗೂ ಮಲೆನಾಡು ತಾಲೂಕುಗಳಲ್ಲಿ ಜೂನ್ 1ರಿಂದ ಈವರೆಗೆ ಸರಾಸರಿ 2,083 ಮಿ. ಮೀ. ಮಳೆ ದಾಖಲಾಗಿದೆ.
ಇನ್ನು ಜಿಲ್ಲೆಯಲ್ಲಿ ಜೂನ್ 1ರಿಂದ ಸುರಿದ ಮಳೆಯಿಂದಾಗಿ 451 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಒಟ್ಟು 751 ಮನೆಗಳಿಗೆ ಹಾನಿ ಆಗಿದೆ. ಮಳೆಯಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 95 ಸಾವಿರ ಪರಿಹಾರವನ್ನು ನೀಡುವ ಕಾರ್ಯವೂ ನಡೆಯುತ್ತಿದೆ. ಹೆಚ್ಚಿನ ಪರಿಹಾರಕ್ಕೆ ಅರ್ಜಿ ಸಲ್ಲಿಸಿ 5 ಲಕ್ಷದವರೆಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾಗಶಃ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರ ನಿಗದಿಪಡಿಸಿದ್ದು, ಈಗಾಗಲೇ 10 ಸಾವಿರ ರೂಪಾಯಿ ನೀಡಲಾಗಿದೆ. ಉಳಿದ 40 ಸಾವಿರ ರೂಪಾಯಿ ವಿತರಿಸುವ ಕಾರ್ಯ ಜಾರಿಯಲ್ಲಿದೆ.
ಜಿಲ್ಲಾಡಳಿತದಿಂದ ಪರಿಹಾರ ಪ್ರಸ್ತಾವಾನೆ
ಜಿಲ್ಲೆಯ ವಿವಿಧೆಡೆ ನೆರೆ ಸೃಷ್ಟಿಯಾದ ಕಾರಣ ಒಟ್ಟು 6,283 ಮನೆಗಳಿಗೆ ನೀರು ನುಗ್ಗಿ ಹಾನಿ ಆಗಿದೆ. ಈ ಮನೆಗಳ ಸಮೀಕ್ಷೆ ನಡೆಸಿ ಮಾಹಿತಿ ಪಡೆದು ಇದೀಗ ತಲಾ 10 ಸಾವಿರ ರೂಪಾಯಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಅಲ್ಲದೆ ಕರಾವಳಿಯ ಕಡಲ ತೀರಗಳಲ್ಲಿ ಒಟ್ಟು 9 ಕಡೆ ಕಡಲ ಕೊರೆತವಾಗಿ ಹಾನಿಯಾಗಿದೆ. ಈಗಾಗಲೇ ಸರ್ಕಾರಕ್ಕೆ 39.25 ಕೋಟಿ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ರಸ್ತೆಗಳ ಹಾನಿಯಿಂದ ಆದ ನಷ್ಟ ಎಷ್ಟು?
ಮಳೆ ಅಬ್ಬರದಿಂದ 670 ಕಿ. ಮೀ. ಪಿಡಬ್ಲ್ಯೂಡಿ ರಸ್ತೆ, 633 ಕಿ. ಮೀ. ಗ್ರಾಮೀಣ ಪ್ರದೇಶದ ರಸ್ತೆ ಹಾಳಾಗಿದೆ. ಭಟ್ಕಳ ಪಟ್ಟಣದಲ್ಲಿ ನೆರೆ ಪರಿಸ್ಥಿತಿಯಿಂದ ನಗರ ಪ್ರದೇಶದಲ್ಲಿ ಸುಮಾರು 47 ಕಿಲೋ ಮೀಟರ್ ರಸ್ತೆ ಹಾಳಾಗಿದೆ. ಒಟ್ಟು ಜಿಲ್ಲೆಯಾದ್ಯಂತ ರಸ್ತೆಗಳು ಹಾನಿಯಾಗಿ 55 ಕೋಟಿಯಷ್ಟು ನಷ್ಟವಾಗಿದೆ. ಶೈಕ್ಷಣಿಕ ಸಂಸ್ಥೆಗಳ ಹಾನಿ ಸರ್ವೇ ಮಾಡಿದ್ದು, 476 ಶಾಲೆಗಳು ಹಾಗೂ 312 ಅಂಗನವಾಡಿಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇವುಗಳ ದುರಸ್ತಿಗೆ ಇರುವ ಅನುದಾನದಲ್ಲಿ ಹಣ ಬಿಡುಗಡೆಗೆ ಸೂಚಿಸಲಾಗಿದೆ.
ಗುಡ್ಡಕುಸಿತ ಪ್ರದೇಶಗಳಲ್ಲಿ ಸರ್ವೇ ಆರಂಭ
ಭಟ್ಕಳದಲ್ಲಿ ಆಗಸ್ಟ್ 1ರಂದು ದಾಖಲೆ ಪ್ರಮಾಣದಲ್ಲಿ ಮಳೆಯಾದ ಕಾರಣ ಮನೆಗಳು ಜಲಾವೃತವಾಗಿದ್ದವು. ಸುಮಾರು 3,890 ಮನೆಗಳಿಗೆ ನೆರೆ ನುಗ್ಗಿ ಹಾನಿ ಸಂಭವಿಸಿತ್ತು. ಮನೆ ಮೇಲೆ ಧರೆ ಕುಸಿದು ನಾಲ್ವರು ಸಾವನ್ನಪ್ಪಿದ ದುರ್ಘಟನೆಯೂ ನಡೆದಿತ್ತು. ಅಲ್ಲಿ ಜನರು ಇನ್ನು ಕೂಡ ಗುಡ್ಡ ಕುಸಿಯುವ ಆತಂಕದಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡದವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯ ವಿವಿಧೆಡೆ ಗುಡ್ಡ ಕುಸಿತವಾದ ಪ್ರದೇಶಗಳ ಪರೀಕ್ಷೆ ಕೂಡ ನಡೆಸಲಾಗುತ್ತಿದೆ. ಸರ್ವೇಯ ವರದಿಯನ್ನಾಧರಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಉತ್ತರ ಕನ್ನಡದಲ್ಲಿ ಮಳೆ ಹಾನಿ ಪ್ರಮಾಣ
ಜೂನ್ನಿಂದ ಇಲ್ಲಿಯವರೆಗೆ 2,042 ಮಿ. ಮೀ. ಮಳೆಯಾಗಿದೆ. ಭಟ್ಕಳ ತಾಲೂಕು ಒಂದರಲ್ಲೇ ಆಗಸ್ಟ್ 1ರಂದು ಬರೋಬ್ಬರಿ 533 ಮಿ. ಮೀ. ಮಳೆಯಾಗಿದ್ದು, ಹಿಂದಿನ ಎಲ್ಲ ದಾಖಲೆಗಳಿಗಿಂತ ಅತ್ಯಧಿಕವಾಗಿದೆ. ಧರೆ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ ದುರ್ಘಟನೆ ಸಂಭವಿಸಿತ್ತು.
ಇದಾದ
24
ಗಂಟೆಗಳೊಳಗೆ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಸ್ಥಳಕ್ಕೆ
ಭೇಟಿ
ನೀಡಿ
ಕುಟುಂಬಸ್ಥರಿಗೆ
ಸಾಂತ್ವನ
ಹೇಳುವುದರೊಂದಿಗೆ
ಆರ್ಥಿಕ
ಸಹಾಯ
ಒದಗಿಸಿದ್ದರು.
ಒಟ್ಟಾರೆ
ಜಿಲ್ಲೆಯಲ್ಲಿ
ಸದ್ಯದ
ಅಂದಾಜಿನಂತೆ
437.83
ಕೋಟಿಯಷ್ಟು
ಹಾನಿ
ಸಂಭವಿಸಿದ್ದು,
ಇನ್ನೂ
ಪರಿಶೀಲನೆ
ಕಾರ್ಯ
ನಡೆಯುತ್ತಿದೆ.
ಸದ್ಯ
ವರುಣ
ಬಿಡುವು
ಕೊಟ್ಟಿದ್ದು,
ಜನರು
ನಿಟ್ಟುಸಿರು
ಬಿಡುತ್ತಿದ್ದಾರೆ.
Recommended Video