ಕೊರೊನಾ ನಿರ್ವಹಣೆ ವೈಫಲ್ಯಕ್ಕೆ ಹರ್ಷವರ್ಧನ್ ಕೈಬಿಟ್ಟಿರುವುದೇ ಸಾಕ್ಷಿ; ಡಿಕೆಶಿ
ಕಾರವಾರ, ಜುಲೈ 08: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ. ಹರ್ಷವರ್ಧನ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಹೊರಗುಳಿಸಿರುವುದು, ಕೊರೊನಾ ಸೋಂಕನ್ನು ಸರ್ಕಾರ ಸಮರ್ಥವಾಗಿ ನಿರ್ವಹಣೆ ಮಾಡಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಕೆಲವು ಗಂಟೆಗಳ ಮುನ್ನ ಡಾ. ಹರ್ಷವರ್ಧನ್ ಅವರು ರಾಜೀನಾಮೆ ನೀಡಿದ್ದರು.
ಹೊನ್ನಾವರ ಮೀನುಗಾರರ ಸಮಸ್ಯೆಗೆ ಸದನದಲ್ಲಿ ಹೋರಾಟ: ಡಿಕೆಶಿ
ಈ ಕುರಿತು ಪ್ರತಿಕ್ರಿಯಿಸಿರುವ ಶಿವಕುಮಾರ್, "ಹರ್ಷವರ್ಧನ್ ಅವರು ಕೇಂದ್ರ ಸಚಿವ ಸಂಪುಟದಿಂದ ಹೊರಗೆ ಉಳಿದಿರುವುದು ಕೇಂದ್ರ ಸರ್ಕಾರ ಕೊರೊನಾ ನಿರ್ವಹಣೆಯನ್ನು ಸಮರ್ಥವಾಗಿ ಮಾಡಿಲ್ಲ ಎಂಬುದಕ್ಕೆ ಸಾಕ್ಷಿ. ಆದರೆ ಇದು ಹರ್ಷವರ್ಧನ್ ಅವರೊಬ್ಬರ ಜವಾಬ್ದಾರಿಯಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡರ ಜವಾಬ್ದಾರಿಯೂ ಇದೆ. ಎರಡು ಸರ್ಕಾರಗಳು ಈ ಜವಾಬ್ದಾರಿ ಹೊರಬೇಕಿದೆ. ಜನರ ನೋವಿಗೆ ಸ್ಪಂದಿಸಬೇಕಿದೆ" ಎಂದು ಹೇಳಿದರು.
Recommended Video
ರಾಜ್ಯದಲ್ಲಿ ಬುಧವಾರದ ಮಾಹಿತಿಯಂತೆ, 2743 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3081 ಸೋಂಕಿತರು ಗುಣಮುಖರಾಗಿದ್ದು, 75 ಮಂದಿ ಕೊವಿಡ್-19 ಸೋಂಕಿನಿಂದ ಸಾವನ್ನಪ್ಪಿದ್ದಾರೆ.