ಕಾರವಾರ: ತರಕಾರಿ ಮಾರುವ ವೇಶದಲ್ಲಿ ಮನೆಗೆ ಬಂದ ಅತಿಥಿಗಳು
ಕಾರವಾರ, ಏಪ್ರಿಲ್ 27: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಘೋಷಿಸಲಾಗಿತ್ತು.
Recommended Video
ಆದರೂ ಜನರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ತುರ್ತು ಅಗತ್ಯತೆಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ. ಆದರೆ ಇದನ್ನೇ ದುರುಪಯೋಗ ಪಡಿಸಿಕೊಂಡ ಇಬ್ಬರು ತರಕಾರಿ ಮಾರಾಟದ ನೆಪದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ವಾಪಸ್ಸಾಗಿರುವ ಆತಂಕಕಾರಿ ಘಟನೆ ನಡೆದಿದೆ.
ನಿನ್ನೆ ರಾತ್ರಿ ವೇಳೆ ಧಾರವಾಡ ಮೂಲದ ಇಬ್ಬರು ವ್ಯಕ್ತಿಗಳು ತರಕಾರಿ ಮಾರಾಟದ ನೆಪದಲ್ಲಿ ಕಾರವಾರ ನಗರದ ಕೋಡಿ ಭಾಗದ ನವಾಯತ್ ಕುಟುಂಬವೊಂದನ್ನು ಭೇಟಿ ಮಾಡಿ ಅವರ ಮನೆಯಲ್ಲಿಯೇ ಉಳಿದುಕೊಂಡಿದ್ದರು.
ಬಳಿಕ ಬೆಳಿಗ್ಗೆ ವಾಪಾಸ್ ತೆರಳಿದ್ದು, ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ತಕ್ಷಣ ಕಾರವಾರ ನಗರ ಠಾಣೆ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಸ್ಥಳಕ್ಕೆ ತೆರಳಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ನವಾಯತ್ ಕುಟುಂಬದಲ್ಲಿ ಹತ್ತು ಮಂದಿ ಸದಸ್ಯರು ಹಾಗೂ ಮಕ್ಕಳಿದ್ದು, ಧಾರವಾಡದಿಂದ ತರಕಾರಿ ಮಾರಾಟಕ್ಕೆಂದು ಬಂದಿದ್ದವರು ಇವರ ಸಂಬಂಧಿಕರೆಂದು ತಿಳಿದುಬಂದಿದೆ. ನಿನ್ನೆ ಕಾರವಾರಕ್ಕೆ ತರಕಾರಿ ತಂದಿದ್ದವರು ಇವರ ಮನೆಗೆ ಆಗಮಿಸಿ, ರಾತ್ರಿಯಾಗಿದ್ದ ಹಿನ್ನೆಲೆ ಮನೆಯಲ್ಲಿಯೇ ಉಳಿದುಕೊಂಡು ಬೆಳಿಗ್ಗೆ ಧಾರವಾಡಕ್ಕೆ ವಾಪಸ್ ತೆರಳಿದ್ದರು.
ಇನ್ನು ಕುಟುಂಬದ ಎಲ್ಲ ಸದಸ್ಯರ ದೇಹದ ತಾಪಮಾನದ ತಪಾಸಣೆ ನಡೆಸಿದ ಆರೋಗ್ಯ ಇಲಾಖೆ ಸಿಬ್ಬಂದಿ, ಎಲ್ಲರ ಆರೋಗ್ಯ ಸ್ಥಿತಿಯನ್ನು ಸಹ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಕುಟುಂಬಸ್ಥರಲ್ಲಿ ಯಾರಿಗೇ ಆಗಲೀ ಜ್ವರ, ಕೆಮ್ಮು ಸೇರಿದಂತೆ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಎದುರಾದಲ್ಲಿ ಕೂಡಲೇ ಆರೋಗ್ಯ ಸಿಬ್ಬಂದಿಗೆ ಅಥವಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಆರೋಗ್ಯ ಪರಿಶೀಲನೆ ನಡೆಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಕುಟುಂಬದ ಹತ್ತೂ ಮಂದಿ ಸದಸ್ಯರಿಗೂ "ಹೋಮ್ ಕ್ವಾರಂಟೈನ್' ಸೀಲ್ ಹಾಕಿದ್ದು, ಎಲ್ಲರೂ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಿದ್ದಾರೆ. ಹಾಗೂ ಕುಟುಂಬದ ಮೇಲೆ ನಿಗಾ ಇರಿಸುವಂತೆ ಪೊಲೀಸ್ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೂಚನೆ ಸಹ ನೀಡಲಾಗಿದೆ.