ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!
ಕಾರವಾರ, ಮೇ 3: ಕೊರೊನಾ ಎರಡನೇ ಅಲೆಯ ಅಬ್ಬರ ಜನರನ್ನು ಬೆಚ್ಚಿ ಬೀಳಿಸಿದ್ದು, ದಿನದಿಂದ ದಿನಕ್ಕೆ ಸೋಂಕಿನಿಂದ ಸಾಯುವವರ ಸಂಖ್ಯೆ ಏರುತ್ತಲೇ ಇದೆ. ಈ ನಡುವೆ ಮದುವೆ ಹಿಂದಿನ ದಿನವೇ ವರನೋರ್ವ ಕೊರೊನಾ ಸೋಂಕಿಗೆ ಸಾವನ್ನಪ್ಪಿರುವ ಘಟನೆ ಕಾರವಾರ ನಗರದಲ್ಲಿ ನಡೆದಿದೆ.
ನಗರದ ತೇಲಂಗಾ ರಸ್ತೆಯ ರೋಷನ್ ಪಡವಳಕರ್ (30) ಮೃತಪಟ್ಟ ವರನಾಗಿದ್ದಾನೆ. ಪುಣೆಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತನಿಗೆ ಮೇ 4ರಂದು ಮದುವೆ ನಿಶ್ಚಯವಾಗಿತ್ತು. ನಂದನಗದ್ದಾ ಬಡಾವಣೆಯ ಸಮಾದೇವಿ ಹಾಲ್ನಲ್ಲಿ ಸೋಮವಾರ ಹಳದಿ ಶಾಸ್ತ್ರವಿದ್ದು, ಮಂಗಳವಾರ ಮದುವೆ ಸಮಾರಂಭ ನಡೆಯಬೇಕಾಗಿತ್ತು.
ಚಿಕ್ಕಮಗಳೂರು: ಮದುವೆಯಾಗಬೇಕಿದ್ದ ದಿನವೇ ಯುವಕ ಕೊರೊನಾ ಸೋಂಕಿಗೆ ಸಾವು
ಮದುವೆ ಹಿನ್ನಲೆಯಲ್ಲಿ ತಿಂಗಳ ಹಿಂದೆ ಪುಣೆಯಿಂದ ಕಾರವಾರಕ್ಕೆ ಆಗಮಿಸಿದ್ದ ಈತ, ಕಳೆದ ಒಂದು ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ. ಈ ವೇಳೆ ನಂದನಗದ್ದಾದ ಖಾಸಗಿ ಕ್ಲಿನಿಕ್ಗೆ ತೆರಳಿದಾಗ ತಪಾಸಣೆ ಮಾಡಿದ ವೈದ್ಯರು, ಟೈಫಾಯ್ಡ್ ಇರಬಹುದು ಎಂದು ತಿಳಿಸಿದ್ದರಂತೆ. ಯಾವುದಕ್ಕೂ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದರೂ, ಮದುವೆಗೆ ಸಮಸ್ಯೆ ಆಗಲಿದೆ ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ಹೋಗಿರಲಿಲ್ಲ ಎನ್ನಲಾಗಿದೆ.
ಸೋಮವಾರ ತೀವ್ರ ಅನಾರೋಗ್ಯಕ್ಕೆ ಒಳಗಾದ ಹಿನ್ನಲೆಯಲ್ಲಿ ತಕ್ಷಣ ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು, ಆಸ್ಪತ್ರೆ ಸೇರುವ ಮುನ್ನವೇ ಈತ ಅಸುನೀಗಿದ್ದಾನೆ. ಮೃತಪಟ್ಟ ನಂತರ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ ಎನ್ನಲಾಗಿದೆ.
ಇನ್ನು ಮದುವೆ ಸಿದ್ಧತೆಯಲ್ಲಿದ್ದ ಮನೆಯವರಿಗೆ ವರನ ಸಾವು ದೊಡ್ಡ ಅಘಾತವನ್ನೇ ನೀಡಿದ್ದು, ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ಮದುವೆಯ ಹಿಂದಿನ ದಿನವೇ ಹಸೆಮಣೆ ಏರಬೇಕಿದ್ದ ವರ ಸಾವನ್ನಪ್ಪಿರುವುದಕ್ಕೆ ಮದುವೆ ಮನೆಯಲ್ಲಿ ಸೂತಕದ ಛಾಯೆ ನಿರ್ಮಾಣವಾಗಿದೆ.
ಕ್ಲಿನಿಕ್ಗಳ ಮೇಲೆ ಕಣ್ಣಿಡಬೇಕು
ಕೊರೊನಾದಂತಹ ಸಂದರ್ಭದಲ್ಲಿ ಕೆಲ ಕ್ಲಿನಿಕ್ಗಳಲ್ಲಿ ತೀವ್ರ ಜ್ವರ ಬಂದು ಚಿಕಿತ್ಸೆಗೆಂದು ಹೋದರೂ ಟೈಫಾಯ್ಡ್, ಮಲೇರಿಯಾ ಎಂದು ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯ ಇಲಾಖೆ ಇಂತಹ ಕೆಲ ಕ್ಲಿನಿಕ್ಗಳ ಮೇಲೆ ಕಣ್ಣಿಡಬೇಕಾಗಿದೆ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ ಆಗ್ರಹಿಸಿದ್ದಾರೆ.
ಮೃತ ರೋಷನ್ ಅನ್ನು ಮೊದಲೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೊರೊನಾ ಪರೀಕ್ಷೆ ಮಾಡಿಸಿ ಚಿಕಿತ್ಸೆ ನೀಡಿದ್ದರೆ, ಆತನ ಜೀವ ಉಳಿಯುತ್ತಿತ್ತೇನೋ. ಆದರೆ ಯಾವುದೋ ಕ್ಲಿನಿಕ್ನಲ್ಲಿ ಸಾಮಾನ್ಯ ಕಾಯಿಲೆಯಂತೆ ಚಿಕಿತ್ಸೆ ಪಡೆದು ನಿರ್ಲಕ್ಷ್ಯ ತೋರಿದ ಪರಿಣಾಮ ಸಾವಾಗಿದೆ.
ಜನರು ಈ ಬಗ್ಗೆ ನಿರ್ಲಕ್ಷಿಸಬಾರದು. ತೀವ್ರ ಜ್ವರ, ಕೊರೊನಾ ಲಕ್ಷಣ ಕಂಡು ಬಂದರೆ ತಕ್ಷಣ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲಿ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಸಹ ತಂದಿದ್ದು, ಮುಂದಿನ ದಿನದಲ್ಲಾದರೂ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡುವ ಕೆಲ ಕ್ಲಿನಿಕ್ಗಳ ಮೇಲೆ ಆರೋಗ್ಯ ಇಲಾಖೆ ಕಣ್ಣಿಡಬೇಕು ಎಂದು ಮಾಧವ ನಾಯ್ಕ ತಿಳಿಸಿದ್ದಾರೆ.
Recommended Video