ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಚಾರ: ಸದಸ್ಯರ ಮೇಲೆ ಹಲ್ಲೆ, ಪ್ರತಿಭಟನೆ
ಕಾರವಾರ, ಫೆಬ್ರವರಿ 9: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಮದನೂರು ಗ್ರಾ.ಪಂ ನೂತನ ಸದಸ್ಯ ಹಾಗೂ ಕಬಡ್ಡಿ ಆಟಗಾರ ದನಗರ ಗೌಳಿ ಸಮುದಾಯಕ್ಕೆ ಸೇರಿರುವ ವಿಠ್ಠು ಶೆಳ್ಕೆ ಹಾಗೂ ಇನ್ನಿತರರ ಮೇಲೆ ಕಲಘಟಗಿ ಹೋಟೆಲೊಂದರಲ್ಲಿ ಭಾನುವಾರ ಸಂಜೆ ಹಲ್ಲೆ ಮಾಡಲಾಗಿದೆ ಎಂದು ವಿಠ್ಠು ಶೇಳ್ಕೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ವಿಠ್ಠು ಶೆಳ್ಕೆಯವರ ಮುಖ ಸಂಪೂರ್ಣವಾಗಿ ಗಾಯಗೊಂಡಿದ್ದು, ಬಟ್ಟೆಗಳು ಹರಿದುಹೋಗಿದೆ. ಅಲ್ಲದೆ ಅಂಬುಲೆನ್ಸ್ ವಾಹನ ಒಂದರಲ್ಲಿ ವಿಠ್ಠು ಶೆಳ್ಕೆ ಹಾಗೂ ಇನ್ನಿಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಫೆ.24ಕ್ಕೆ ಶಿರಸಿ ಬಂದ್ಗೆ ಕರೆ
ಗಾಯಗೊಂಡಿರುವ ಶೆಳ್ಕೆ ವಿಡಿಯೋದಲ್ಲಿ ಹೇಳಿಕೆ ನೀಡಿ, ಭಾನುವಾರ ಮಧ್ಯಾಹ್ನ ಯಲ್ಲಾಪುರದಲ್ಲಿ ಸಚಿವ ಶಿವರಾಮ ಹೆಬ್ಬಾರ ಅವರ ಜೊತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸಭೆ ನಡೆಸಿ, ತಮ್ಮ ಖಾಸಗಿ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಹೋಗುವಾಗ ಕಲಘಟಗಿಯ ಹೊಟೇಲೊಂದರಲ್ಲಿ ಕಿರವತ್ತಿಯ ಕೆಲವು ಜನ ಹಾಗೂ ಹೊರ ಪ್ರದೇಶದ ಇನ್ನೂ ಹಲವಾರು ಜನರು ಸುಮಾರು 45ಕ್ಕೂ ಹೆಚ್ಚು ಜನ ಸೇರಿ ತಮ್ಮ ಹಾಗೂ ತಮ್ಮೊಂದಿಗಿದ್ದವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ಎಚ್ಚರ ತಪ್ಪಿದ ತಮಗೆ ಎಲ್ಲಿ ಬಿದ್ದುಕೊಂಡಿದ್ದೇವೆ ಎಂಬುದು ಗೊತ್ತಾಗಿಲ್ಲ, ಯಾರೋ ತಮ್ಮನ್ನು ಎತ್ತುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದಿದ್ದಾರೆ.
ಕಿರವತ್ತಿ ಭಾಗದ ಹಿರಿಯ ರಾಜಕೀಯ ಮುಖಂಡ ವಿಜಯ್ ಮಿರಾಶಿ ಈ ಕುರಿತಂತೆ ಮಾತನಾಡಿ, ತಾವು ಭಾನುವಾರ ರಾತ್ರಿ 10.30ರ ವರೆಗೆ ಸಚಿವ ಶಿವರಾಮ ಹೆಬ್ಬಾರ ಜೊತೆಗೆ ಮಂಗಳವಾರ ನಡೆಯುವ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತು ಚರ್ಚೆಯಲ್ಲಿ ತೊಡಗಿದ್ದೆವು. ವಿಠ್ಠು ಶೇಳ್ಕೆ ಮದನೂರು ಪಂಚಾಯಿತಿ ವ್ಯಾಪ್ತಿಯ ಇಬ್ಬರು ಸದಸ್ಯರನ್ನು ತಮ್ಮ ವಾಹನದಲ್ಲಿ ಹುಬ್ಬಳ್ಳಿ-ಧಾರವಾಡ ಕಡೆಗೆ ಕರೆದುಕೊಂಡು ಹೋಗುವಾಗ ಅದನ್ನು, ಕೆಲವು ಜನ ತಡೆದಿದ್ದಾರೆ. ಆಗ ಹಲ್ಲೆ ಪ್ರತಿಹಲ್ಲೆಗಳು ನಡೆದಿರಬಹುದಾಗಿದೆ. ಈ ಹಲ್ಲೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಯಲ್ಲಾಪುರ ತಾಲೂಕಿನ 15 ಗ್ರಾಮ ಪಂಚಾಯತಿಯ ಅಧ್ಯಕ್ಷರು- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಮೀಸಲಾತಿ ಪ್ರಕಟವಾಗಿದೆ. ಮದನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ರಾಗುವ ಗೌಳಿ ಸಮಾಜದ 6 ಅಭ್ಯರ್ಥಿಗಳು ಇದ್ದಾರೆ ಎನ್ನಲಾಗಿದೆ. ಗೌಳಿ ಸಮುದಾಯಕ್ಕೆ ಉಪಾಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಬೇಡಿಕೆಗೆ ವಿರುದ್ಧವಾಗಿ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಸಚಿವರ ಸೂಚನೆಯ ಮೇರೆಗೆ "ಅ' ವರ್ಗದ ಮಹಿಳಾ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ಇಂದಿರಾ ನಾಯ್ಕ ಎನ್ನುವವರನ್ನು ಆಯ್ಕೆ ಮಾಡಲಾಗಿದೆ. ಆದರೆ ಅಧ್ಯಕ್ಷ ಸ್ಥಾನದ ವಿಷಯಕ್ಕೆ ಗೊಂದಲ ನಡೆದಿಲ್ಲ. ಸಾಮಾನ್ಯ ಸ್ಥಾನಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಶಾಪುರಕರ ಎನ್ನುವವರ ಹೆಸರನ್ನು ಸೂಚಿಸಲಾಗಿದ್ದು, ಆರು ಜನ ಸದಸ್ಯರನ್ನು ಹೊಂದಿರುವ ಗೌಳಿ ಸಮುದಾಯಕ್ಕೆ ಉಪಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕು ಎಂದು ಬೇಡಿಕೆ ಇಡಲಾಗಿತ್ತು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ದನಗರ ಗೌಳಿ ಸಮುದಾಯದವರು ಸೋಮವಾರ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಕಿರವತ್ತಿಯಲ್ಲಿಯ ಡಿಪೋ ಮಾರುತಿ ದೇವಸ್ಥಾನದ ಆವಾರದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮುದಾಯದ ಜಿಲ್ಲಾ ಅಧ್ಯಕ್ಷ ಬಜ್ಜು ಪಿಂಗಳೆ, ಬಹಳ ಹಿಂದಿನಿಂದ ವ್ಯವಸ್ಥಿತವಾಗಿ ನಮ್ಮ ಸಮುದಾಯವನ್ನು ತುಳಿಯುವ ಕಾರ್ಯ ನಡೆಯುತ್ತಿದೆ. ಮುಂದೆ ಇದನ್ನು ಸಹಿಸಲಾಗದು.
ಹೋರಾಟ ಶಾಂತಿಯುತವಾಗಿ ಹಾಗೂ ಸಭ್ಯಸ್ಥರ ಮಾರ್ಗದರ್ಶನದಲ್ಲಿ ನಡೆಯಬೇಕು. ಹಲ್ಲೆಗೊಳಗಾದವರಿಗೆ ನ್ಯಾಯ ಕೊಡಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.