ದಂಡ ವಸೂಲಿ ಹೆಚ್ಚಿಸುವಂತೆ ಪೊಲೀಸರಿಗೆ ಸರ್ಕಾರದ ಟಾರ್ಗೆಟ್; ಬೆತ್ತ ಹಿಡಿದು ನಿಲ್ಲುವವರ ವಿರುದ್ಧ ಜನಾಕ್ರೋಶ
ಕಾರವಾರ, ಮಾರ್ಚ್ 24: ದಂಡ ವಸೂಲಿ ಹೆಚ್ಚಿಸಿ ಎಂದು ಸರ್ಕಾರ ಪೊಲೀಸರಿಗೆ ಟಾರ್ಗೆಟ್ ನೀಡುತ್ತಿದ್ದು, ಇದನ್ನು ಪರಿಪಾಲಿಸಲು ಎಲ್ಲೆಂದರಲ್ಲಿ ನಿಂತು ವಾಹನ ಸವಾರರಿಂದ ಪೊಲೀಸರು ದಂಡ ವಸೂಲಿಗೆ ಇಳಿದಿದ್ದಾರೆ. ಇದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
ಇತ್ತೀಚಿಗೆ ಪೊಲೀಸರಿಗೆ ದಂಡ ವಸೂಲಿ ಹೆಚ್ಚಿಗೆ ಮಾಡುವಂತೆ ಸರ್ಕಾರ ಟಾರ್ಗೆಟ್ ನೀಡಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಹಿಂದಿಗಿಂತಲೂ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಸಂಚಾರಿ ಪೊಲೀಸರು ಬೆಳಿಗ್ಗೆಯಿಂದ ರಾತ್ರಿಯವರೆಗೂ ಹೆಲ್ಮೆಟ್ ಧರಿಸದ, ವಾಹನ ದಾಖಲೆ ಇಲ್ಲದೇ ಓಡಾಡುವವರನ್ನು ಅಡ್ಡಗಟ್ಟಿ ದಂಡ ವಸೂಲಿ ಮಾಡಿ ಸರ್ಕಾರದ ಬೊಕ್ಕಸ ತುಂಬಿಸುತ್ತಿದ್ದಾರೆ.
ಮೈಸೂರು: ಪೊಲೀಸರ ಮೇಲೆ ಹಲ್ಲೆ ಮಾಡಿದ್ದ 11 ಮಂದಿ ವಶಕ್ಕೆ
ಮರೆಯಲ್ಲಿ ನಿಂತು ವಾಹನಗಳನ್ನು ಅಡ್ಡಗಟ್ಟುವುದು
ಸರ್ಕಾರ ಟಾರ್ಗೆಟ್ ರೀಚ್ ಮಾಡುವಂತೆ ನೀಡಿದ ಸೂಚನೆಯಂತೆಯೇ ಪೊಲೀಸರು ಕೆಲಸ ನಿರ್ವಹಿಸುತ್ತಿದ್ದು, ಇದು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿರುವ ಕಾರಣ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಪೊಲೀಸರು ಎಲ್ಲೆಂದರಲ್ಲಿ, ಮರೆಯಲ್ಲಿ ನಿಂತು ವಾಹನಗಳನ್ನು ಅಡ್ಡಗಟ್ಟಿ, ಸವಾರರಿಂದ ದಂಡ ವಸೂಲಿ ಮಾಡುವ ಕಾರ್ಯ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನೊಂದೆಡೆ ಕೆಲ ಯುವಕರು ಪೊಲೀಸರಿಗೆ ಹೆದರಿ ವಾಹನದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿ ಅಪಘಾತ ಸಹ ಆಗುತ್ತಿದ್ದು, ಇದಕ್ಕೆ ಹೊಣೆ ಯಾರು ಎಂದು ಸಾರ್ವಜನಿಕರು ಪ್ರಶ್ನೆ ಕೇಳಲಾರಂಭಿಸಿದ್ದಾರೆ.
ವಾಹನ ತಪಾಸಣೆ ಮಾಡುವ ವೇಳೆ ಅಪಘಾತ
ಪೊಲೀಸರು ತಮ್ಮ ಕರ್ತವ್ಯ ಪಾಲಿಸುತ್ತಿದ್ದರೂ ಸಾರ್ವಜನಿಕರನ್ನು ಕೆರಳಿಸಿದೆ. ಕೇವಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೇ, ರಾಜ್ಯದ ಎಲ್ಲ ಜಿಲ್ಲೆಯಲ್ಲೂ ಟಾರ್ಗೆಟ್ ರೀಚ್ ಮಾಡುವ ಉದ್ದೇಶದಿಂದ ಪೊಲೀಸರು ಹೆಚ್ಚಿನ ವಾಹನಗಳನ್ನು ತಡೆದು ದಂಡ ಹಾಕುತ್ತಿದ್ದಾರೆ. ಕಳೆದ ಎರಡು ದಿನದ ಹಿಂದೆ ಮೈಸೂರಿನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಬೈಕ್ ಸವಾರ ರಸ್ತೆಯಲ್ಲಿ ಬಿದ್ದಾಗ ಹಿಂದಿನಿಂದ ಬಂದ ವಾಹನ ಆತನ ಮೇಲೆ ಹರಿದು ಸ್ಥಳದಲ್ಲೇ ಸವಾರ ಮೃತಪಟ್ಟಿದ್ದ.
ಪೊಲೀಸ್ ವ್ಯವಸ್ಥೆಯ ವಿರುದ್ಧ ಆಕ್ರೋಶ
ಇನ್ನು ಸ್ಥಳದಲ್ಲಿ ಜಮಾವಣೆಗೊಂಡ ಜನರು ಸಿಟ್ಟಿಗೆದ್ದು, ಪೊಲೀಸರು ದುರ್ನಡತೆಯಿಂದಲೇ ಒಂದು ಜೀವ ಹೋಗಿದೆ ಎಂದು ಆಕ್ರೋಶ ಹೊರಹಾಕಿ ಇಬ್ಬರು ಪೊಲೀಸರಿಗೆ ಮನ ಬಂದಂತೆ ಥಳಿಸಿದ್ದರು. ವೈರಲ್ ಆಗಿರುವ ಥಳಿತದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಸಾರ್ವಜನಿಕರು, ಪೊಲೀಸ್ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಂಡ ವಸೂಲಿ ಮಾಡಲು ನಿಂತ ಪೊಲೀಸರು ವಾಹನವನ್ನು ನಿಲ್ಲಿಸದಿದ್ದರೆ ಫೋಟೋ ಹೊಡೆದು ವಾಹನ ಸವಾರನ ಮನೆ ವಿಳಾಸಕ್ಕೆ ರಶೀದಿ ಕಳುಹಿಸಿ ದಂಡದ ಹಣವನ್ನು ವಸೂಲಿ ಮಾಡಲಿ. ಅದನ್ನು ಬಿಟ್ಟು ಹೊಡೆದು ಬಡಿದು ದಂಡ ವಸೂಲಿ ಮಾಡುವುಂಥದ್ದೇನಿದೆ ಎಂದು ಕಿಡಿಕಾರುತ್ತಿದ್ದಾರೆ. ಅಲ್ಲದೇ ಸ್ವತಃ ಕೆಲ ಪೊಲೀಸ್ ಸಿಬ್ಬಂದಿಯೇ ಇಂಥ ಟಾರ್ಗೆಟ್ಗಳನ್ನು ತೆಗೆದು ಹಾಕಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾರ್ಗೆಟ್ ರೀಚ್ ಮಾಡದಿದ್ದರೆ ನೋಟಿಸ್
ಪೊಲೀಸರು ದಂಡ ವಸೂಲಿಯ ನಿಗದಿತ ಟಾರ್ಗೆಟ್ ರೀಚ್ ಮಾಡದಿದ್ದರೆ ಇಲಾಖೆಯ ಮೇಲಾಧಿಕಾರಿಗಳು ನೋಟಿಸ್ ನೀಡುತ್ತಿದ್ದಾರಂತೆ. ತಿಂಗಳಿಗೆ ಇಂತಿಷ್ಟು ಕೇಸ್ಗಳನ್ನು ಹಿಡಿದು ದಂಡ ಹಾಕಬೇಕು ಎಂದು ಡಿವೈಎಸ್ಪಿಯಿಂದ ಕೆಳ ಮಟ್ಟದ ಅಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ. ಒಂದೊಮ್ಮೆ ದಂಡ ಕಡಿಮೆ ಸಂಗ್ರಹವಾದರೆ ಇಲಾಖೆಯ ಹಿರಿಯ ಅಧಿಕಾರಿಗಳು ನೋಟಿಸ್ ನೀಡಿ, ಕಡಿಮೆ ಕೇಸ್ ಆಗಲು ಕಾರಣ ಕೇಳುತ್ತಿರುವುದಲ್ಲದೆ, ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಕೂಡ ನೋಟಿಸ್ನಲ್ಲಿ ಕೇಳುತ್ತಿದ್ದಾರೆನ್ನಲಾಗಿದೆ.
ಜನರಿಗೆ ತೊಂದರೆ ನೀಡುವ ಅವಶ್ಯಕತೆ ನಮಗೂ ಇಲ್ಲ
ಸರ್ಕಾರದ ಆದೇಶದಂತೆ ಹಿರಿಯ ಅಧಿಕಾರಿಗಳು ನೋಟಿಸ್ ನೀಡುತ್ತಿರುವ ಕಾರಣ, ಇತ್ತ ನೋಟಿಸ್ಗೆ ಹೆದರಿ ಸಿಪಿಐ, ಪಿಎಸ್ಐಗಳು ರಸ್ತೆಯಲ್ಲಿ ನಿಂತು ವಾಹನಗಳನ್ನು ಅಡ್ಡಗಟ್ಟಿ ದಾಖಲೆಗಳ ಪರಿಶೀಲನೆ ಮಾಡಿ, ದಾಖಲೆಗಳು ಇಲ್ಲದ ವಾಹನಗಳಿಗೆ ದಂಡ ಹಾಕುತ್ತಿದ್ದಾರೆ. ಇನ್ನು ಟಾರ್ಗೆಟ್ ರೀಚ್ ಮಾಡದೇ ಇದ್ದರೆ ಇನ್ಕ್ರಿಮೆಂಟ್ ಕಡಿತಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನು ಸಹ ಕೊಡುತ್ತಿದ್ದಾರೆನ್ನಲಾಗಿದೆ.
ಸರ್ಕಾರ ಹಾಗೂ ಮೇಲಾಧಿಕಾರಿಗಳ ಆದೇಶಕ್ಕೆ ನಾವು ರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆದು ದಾಖಲೆಗಳಿಲ್ಲದ ವಾಹನ ಸವಾರರಿಗೆ ದಂಡ ಹಾಕುತ್ತಿದ್ದೇವೆ. ಸುಖಾ ಸುಮ್ಮನೆ ಜನರಿಗೆ ತೊಂದರೆ ನೀಡುವ ಅವಶ್ಯಕತೆ ನಮಗೂ ಇಲ್ಲ. ಜನರು ಸರಿಯಾಗಿ ದಾಖಲೆಗಳನ್ನು ಇಟ್ಟುಕೊಂಡರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.
Recommended Video