ಮೇ. 27 ರಂದು ಭಾನ್ಕುಳಿಯಲ್ಲಿ ಗೋಸ್ವರ್ಗದ ಲೋಕಾರ್ಪಣೆ
ಕಾರವಾರ, ಮೇ 25: ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗವು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭಾನ್ಕುಳಿಯಲ್ಲಿ ಮೇ27 ರಂದು ಲೋಕಾರ್ಪಣೆಗೊಳ್ಳುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಗೋ ಪ್ರೇಮಿಗಳೆಲ್ಲರೂ ಪಾಲ್ಗೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.
ಸಿದ್ದಾಪುರ ತಾಲೂಕಿನ ಭಾನ್ಕುಳಿ ರಾಮದೇವಮಠದ ಆವಾರದಲ್ಲಿ ಗೋಸ್ವರ್ಗದ ಕುರಿತು ಮಾಹಿತಿ ನೀಡಿದ ಅವರು, ಗೋವುಗಳು ಸ್ವತಂತ್ರವಾಗಿ ವಿಹರಿಸಬೇಕು. ಅವುಗಳದ್ದು ನರಕ ಯಾತನೆಯ ಜೀವನ ಆಗಬಾರದು. ಭಾರತೀಯ ಗೋತಳಿಗಳನ್ನು ಉಳಿಸುವುದೇ ಗೋಸ್ವರ್ಗದ ಮುಖ್ಯ ಉದ್ದೇಶವಾಗಿದೆ ಎಂದರು.
ಗೋಸ್ವರ್ಗ ಹಾಗೂ ಗೋಶಾಲೆಯ ಅವಶ್ಯಕತೆ ಎಲ್ಲೆಡೆಯೂ ಇದೆ. ಜಿಲ್ಲೆಯ ಮತ್ತಿತರ ಕಡೆಗಳಲ್ಲಿ ಹಾಗೂ ಅವಶ್ಯ ಇರುವಲ್ಲಿ ಗೋಸ್ವರ್ಗ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಗೋಸ್ವರ್ಗವು ಸಂಪೂರ್ಣ ಗೋಸೌಖ್ಯ ಕೇಂದ್ರವಾಗಿದೆ. ಇಲ್ಲಿ ಆರಂಭದಲ್ಲಿ ಒಂದು ಸಾವಿರ ಗೋವುಗಳಿಂದ ಆರಂಭಿಸಲಾಗುತ್ತಿದ್ದು, ಅವುಗಳಿಗೆ ಇದೊಂದು ಸ್ವಚ್ಛಂದ ಸಾಮ್ರಾಜ್ಯವಾಗಿದೆ. ಅವುಗಳಿಗೆ ಬೇಕಾದ ಪರಿಶುದ್ಧವಾದ ಆಹಾರ ಇಲ್ಲಿ ನೀಡಲಾಗುತ್ತದೆ.
ಪಾರಂಪರಿಕವಾಗಿ ಬಂದ ಕಲ್ಲು ಮರಿಗೆಯಲ್ಲಿಯೇ ಕುಡಿಯಲು ನೀರನ್ನು ಅವುಗಳಿಗೆ ನೀಡಲಾಗುತ್ತಿದೆ. ಗೋಸ್ವರ್ಗದ ಸುತ್ತಲೂ ಕಲ್ಲುಮರಿಗೆ ಇಡಲಾಗುತ್ತದೆ ಎಂದು ವಿವರಿಸಿದರು.
ಗೋವು ಸ್ವತಂತ್ರವಾಗಿ ಬದುಕಬೇಕು. ಅವುಗಳಿಗೆ ಒಳ್ಳೆಯ ಬದುಕನ್ನು ನೀಡಬೇಕು. ದೇಶಿಯ ಗೋತಳಿಗಳು ಉಳಿಯಬೇಕು. ಕಸಾಯಿಖಾನೆಗೆ ತೆರಳುವ ಗೋವುಗಳ ರಕ್ಷಣೆ ಆಗಬೇಕು ಎನ್ನುವ ಉದ್ದೇಶ ನಮ್ಮದಾಗಿದೆ. ಇದಕ್ಕೆ ಎಲ್ಲ ಕಡೆಯಿಂದಲೂ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದರು.
ಗೋವಿನ ಹಾಲು ನಮಗೆ ಮುಖ್ಯವಲ್ಲ. ಹಾಲು ಕರುವಿನ ಹಕ್ಕು. ಮುಖ್ಯವಾಗಿ ಗೋಉತ್ಪನ್ನಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಗೋವುಗಳನ್ನು ನೋಡಿಕೊಳ್ಳುವುದಕ್ಕೆ ಗೋಪಾಲಕರು ಇಲ್ಲಿ ಇರುತ್ತಾರೆ. ಅಲ್ಲದೇ ಅವುಗಳ ಆರೋಗ್ಯ ದೃಷ್ಟಿಯಿಂದ ಸುಸಜ್ಜಿತವಾದ ಗೋ ಆಸ್ಪತ್ರೆಯನ್ನು ಇಲ್ಲಿ ತೆರೆಯಲಾಗುತ್ತದೆ ಎಂದರು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮಠದ ಕಾಮದುಘಾ ಯೋಜನೆಯ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಆರ್.ಎಸ್.ಹೆಗಡೆ ಹರಗಿ, ಶಾಂತಾರಾಮ ಹೆಗಡೆ ಹಿರೇಮನೆ, ಮಹೇಶ ಚಟ್ನಳ್ಳಿ, ಮೋಹನ ಹರಿಹರ ಮತ್ತಿತರರಿದ್ದರು.