ಗೋಕರ್ಣದಲ್ಲಿ ಪೂಜೆ ವಿವಾದ: ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಗೊಂದಲ ನಿವಾರಣೆ
ಕಾರವಾರ, ಅಕ್ಟೋಬರ್ 10: ದಕ್ಷಿಣಕಾಶಿ ಖ್ಯಾತಿಯ ಗೋಕರ್ಣ ದೇವಾಲಯ ಸದ್ಯ ಸರ್ಕಾರದ ಹಿಡಿತದಲ್ಲಿದ್ದು, ದೇವಸ್ಥಾನ ನಿರ್ವಹಣೆಗೆ ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚನೆ ಮಾಡಿತ್ತು. ಆದರೆ ಕೆಲ ದಿನಗಳ ಹಿಂದೆ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರವಾಗಿ ಉಪಾಧಿವಂತರು ಹಾಗೂ ದೇವಸ್ಥಾನದ ಸಮಿತಿಯ ಸದಸ್ಯರ ನಡುವೆ ಗಲಾಟೆ ಉಂಟಾಗಿದ್ದು, ಇದರಿಂದ ಉಳಿದ ಭಕ್ತರಿಗೂ ಆತ್ಮಲಿಂಗ ದರ್ಶನಕ್ಕೆ ಅವಕಾಶ ಇಲ್ಲದಂತಾಗಿತ್ತು.
ಇದೀಗ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಧ್ಯ ಪ್ರವೇಶಿಸಿ ಪೂಜೆ ವಿಚಾರವಾಗಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಗೋಕರ್ಣ ಮಹಾಬಲೇಶ್ವರನ ಮೇಲಿನ ಹಕ್ಕು ವಿವಾದ: ಭಕ್ತರಿಗಿಲ್ಲ ಪೂಜೆ, ಪ್ರಸಾದ
ರಾಜ್ಯದಲ್ಲಿಯೇ ಶಿವನ ಆತ್ಮಲಿಂಗವಿರುವ ಏಕೈಕ ದೇವಸ್ಥಾನ ಇರುವುದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದಲ್ಲಿ. ಹೀಗಾಗಿ ರಾಜ್ಯ, ಹೊರರಾಜ್ಯವಷ್ಟೇ ಅಲ್ಲದೇ ದೇಶ ವಿದೇಶಗಳ ಪ್ರವಾಸಿಗರೂ ಮಹಾಬಲೇಶ್ವರನ ದರ್ಶನ ಪಡೆಯಲು ಗೋಕರ್ಣಕ್ಕೆ ಆಗಮಿಸುತ್ತಾರೆ. ಈ ಹಿಂದೆ 2007ರಿಂದ ಶ್ರೀ ರಾಮಚಂದ್ರಾಪುರ ಮಠದ ಆಡಳಿತದಲ್ಲಿದ್ದ ಮಹಾಬಲೇಶ್ವರ ದೇವಸ್ಥಾನವನ್ನು 2021ರ ಮೇ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಅಲ್ಲದೇ ದೇವಸ್ಥಾನದ ಆಡಳಿತ ನಿರ್ವಹಣೆಗೆ ಅರ್ಚಕರು ಸೇರಿದಂತೆ ಸಮಿತಿಯೊಂದನ್ನು ರಚನೆ ಮಾಡಿತ್ತು.
ಆದರೆ ಕಳೆದ ತಿಂಗಳು ಪೂಜೆ ಸಲ್ಲಿಕೆ ವಿಚಾರವಾಗಿ ಸುಪ್ರೀಂ ಆದೇಶದಿಂದ ಗೊಂದಲ ಉಂಟಾಗಿದ್ದು, ಅನಾದಿ ಕಾಲದಿಂದ ಮಹಾಬಲೇಶ್ವರನಿಗೆ ಪೂಜೆ ಮಾಡಿಕೊಂಡು ಬಂದಿರುವ ಉಪಾಧಿವಂತರು ಹಾಗೂ ಸಮಿತಿಯ ಸದಸ್ಯರ ನಡುವೆ ಗಲಾಟೆ ಉಂಟಾಗಿತ್ತು. ಪರಿಣಾಮ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲು ಭಕ್ತರೂ ಸೇರಿದಂತೆ ಯಾರಿಗೂ ಅವಕಾಶ ನೀಡದಂತೆ ಸಮಿತಿ ಸೂಚನೆ ನೀಡಿದ್ದು ಇದು ವಿವಾದಕ್ಕೆ ಕಾರಣವಾಗಿತ್ತು.
ಈ ನಿಟ್ಟಿನಲ್ಲಿ ಸಮಿತಿಯ ಸದಸ್ಯರು ಹಾಗೂ ಉಪಾಧಿವಂತರೊಂದಿಗೆ ಜಿಲ್ಲಾಧಿಕಾರಿಗಳು ಸಭೆಯನ್ನು ಕೈಗೊಂಡಿದ್ದು, ಸುಪ್ರೀಂ ಆದೇಶದ ಕುರಿತು ಮಾಹಿತಿ ನೀಡಿದ್ದಾರೆ. ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯು ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಾಗಿದ್ದು ಸರ್ಕಾರದ ಆದೇಶದಂತೆ ಭಕ್ತರಿಗೆ ದರ್ಶನಕ್ಕೆ ಸೂಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಾತ್ರ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಅದನ್ನು ಹೊರತುಪಡಿಸಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರವಾಗಿ ಯಾವುದೇ ನಿರ್ಬಂಧ ಹೇರಲು ಅಧಿಕಾರ ಇಲ್ಲ ಎಂದು ತಿಳಿಸಿದ್ದಾರೆ.
"ಗೋಕರ್ಣ ದೇಗುಲ ನಮಗೆ ಸೇವೆಯ ಸಾಧನವಷ್ಟೇ; ಕಾನೂನು ಹೋರಾಟ ಮುಂದುವರಿಸುತ್ತೇವೆ''
ಇದೇ ವರ್ಷ ಮೇ ತಿಂಗಳಲ್ಲಿ ಮಹಾಬಲೇಶ್ವರ ದೇವಸ್ಥಾನದ ಆಡಳಿತ ವಹಿಸಿಕೊಂಡಿದ್ದ ಸುಪ್ರೀಂಕೋರ್ಟ್ ಈ ಹಿಂದೆ ರಾಮಚಂದ್ರಾಪುರ ಮಠದ ಆಡಳಿತದ ಪೂರ್ವದಲ್ಲಿ 2007ರಲ್ಲಿ ಜಾರಿಯಲ್ಲಿದ್ದ ಪೂಜಾ ವಿಧಾನಗಳನ್ನೇ ಅನುಸರಿಸುವಂತೆ ಸೂಚನೆ ನೀಡಿತ್ತು. ಅಲ್ಲದೇ ದೇವಸ್ಥಾನದ ಆಡಳಿತ ನಿರ್ವಹಣೆಗೆ ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿಯೊಂದನ್ನು ರಚನೆ ಮಾಡಿತ್ತು. ಇನ್ನು ಈ ಹಿಂದಿನಿಂದ ಅನುವಂಶೀಯವಾಗಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದ ಉಪಾಧಿವಂತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ ವೇಳೆ ಸಮಿತಿಯ ಸದಸ್ಯರು ಅವಕಾಶ ನೀಡಲು ನಿರಾಕರಿಸಿದ್ದರಿಂದಾಗಿ ಮತ್ತೆ ಗಲಾಟೆ ಉಂಟಾಗುವಂತಾಗಿತ್ತು.
ಸದ್ಯ ಭಕ್ತರ ದರ್ಶನಕ್ಕೆ ಯಾವುದೇ ಅಡ್ಡಿಪಡಿಸದಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು ವೈಯಕ್ತಿಕ ಪೂಜೆ ಸಲ್ಲಿಕೆ ಅಥವಾ ನಿರಾಕರಣೆ ವಿಚಾರವಾಗಿ ಸುಪ್ರೀಂಕೋರ್ಟ್ನಿಂದ ಪ್ರತ್ಯೇಕ ಆದೇಶ ತಂದಲ್ಲಿ ಈ ಸಂಬಂಧ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಇನ್ನು ಭಕ್ತರಿಗೆ ಆತ್ಮಲಿಂಗ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ದೇವಸ್ಥಾನ ಸಮಿತಿ ಸಂತಸ ವ್ಯಕ್ತಪಡಿಸಿದೆ.
ಒಟ್ಟಾರೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಉಪಾಧಿವಂತರ ನಡುವಿನ ಗಲಾಟೆಯಿಂದಾಗಿ ಆತ್ಮಲಿಂಗ ದರ್ಶನಕ್ಕೆ ಭಕ್ತರಿಗೆ ಎದುರಾಗಿದ್ದ ಅಡ್ಡಿ ನಿವಾರಣೆಯಾದಂತಾಗಿದೆ. ಆತ್ಮಲಿಂಗ ದರ್ಶನಕ್ಕೆಂದೇ ದೂರದೂರುಗಳಿಂದ ಆಗಮಿಸುತ್ತಿದ್ದ ಭಕ್ತರಿಗೆ ಇದು ಸಂತಸ ಮೂಡಿಸಿದ್ದಂತೂ ಸತ್ಯ.