ಇಂದಿನಿಂದ ಗೋವಾಗೆ ಮುಕ್ತ ಪ್ರವೇಶ; ಕಾರವಾರದಿಂದ ಓಡಾಟ ಶುರು
ಕಾರವಾರ, ಸೆಪ್ಟೆಂಬರ್ 1: ಕಳೆದ ಐದು ತಿಂಗಳಿನಿಂದ ಮುಚ್ಚಿದ್ದ ಗೋವಾ ಗಡಿ ಪ್ರವೇಶಕ್ಕೆ ಇದ್ದ ನಿರ್ಬಂಧ ಇಂದು ತೆರವಾಗಿದ್ದು, ಮಂಗಳವಾರದಿಂದ ಮುಕ್ತ ಅವಕಾಶ ನೀಡಲಾಗಿದೆ.
Recommended Video
ಕೇಂದ್ರದ ಅನುಮತಿ ಇದ್ದರೂ ಗೋವಾ ಸರ್ಕಾರ ಕೊರೊನಾ ಭಯದಿಂದ ಗಡಿಯನ್ನು ಬಂದ್ ಮಾಡಿತ್ತು. ಅಲ್ಲದೇ, ಇತ್ತೀಚಿಗೆ ಗಡಿ ತೆರವುಗೊಳಿಸಿ, ಹೊಸ ಸುತ್ತೋಲೆಯೊಂದನ್ನು ಹೊರಡಿಸಿತ್ತು. ಅದರ ಪ್ರಕಾರ, ಕೋವಿಡ್ ನೆಗೆಟಿವ್ ಪರೀಕ್ಷಾ ವರದಿ ಇದ್ದರೆ ಮಾತ್ರ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಇಲ್ಲದಿದ್ದರೆ ಕೋವಿಡ್ ಪರೀಕ್ಷೆಗಾಗಿ 2000 ರೂಪಾಯಿ ನೀಡಬೇಕಾಗಿತ್ತು.
ಗೋವಾ ಪ್ರಯಾಣದ ಮೇಲಿದ್ದ ನಿರ್ಬಂಧ ಸಡಿಲ; ಆದರೆ ಷರತ್ತು ದುಬಾರಿ!
ಗೋವಾ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಇದು ಹೊರೆಯಾಗಿತ್ತಲ್ಲದೇ, ಗೋವಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಕುಟುಂಬಸ್ಥರಿಗೆ ಹಾಗೂ ಚಿಕಿತ್ಸೆಗಾಗಿ ತೆರಳುವವರಿಗೆ ಗೋವಾ ಸರ್ಕಾರದ ಈ ನೀತಿ ತೊಡಕಾಗಿತ್ತು. ಇದರಿಂದಾಗಿ ಬೇಸತ್ತಿದ್ದ ಕಾರವಾರ ಭಾಗದ ಜನರು ಇತ್ತೀಚೆಗೆ ಗಡಿಯಲ್ಲಿ ಪ್ರತಿಭಟನೆ ನಡೆಸಿ, ಹೆದ್ದಾರಿ ಸಂಚಾರ ತಡೆದಿದ್ದರು. ಅಲ್ಲದೇ, ಇಂದಿನಿಂದ ಗಡಿಯನ್ನು ಮುಕ್ತಗೊಳಿಸಿದ್ದರೆ ರಾಜ್ಯದಿಂದ ಗೋವಾಕ್ಕೆ ಹೋಗುತ್ತಿದ್ದ ಅಗತ್ಯ ವಸ್ತುಗಳ ಸರಬರಾಜನ್ನೂ ತಡೆಯುವುದಾಗಿ ಎಚ್ಚರಿಕೆ ನೀಡಿದ್ದರು.
ಕಾರವಾರ ಶಾಸಕಿ ರೂಪಾಲಿ ನಾಯ್ಕ ಕೂಡ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದರು. ಗಡಿಯಲ್ಲಿ ಪ್ರವೇಶ ನಿರ್ಬಂಧಿಸಿರುವುದರಿಂದ ಕಾರವಾರದ ಯುವಜನತೆಗೆ ಉದ್ಯೋಗಕ್ಕೆ ತೆರಳಲು ತೊಡಲಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.
ಇಲ್ಲಿ 20 ರೂ.ಗೆ ಒಂದು ಬಿಯರ್... ಆದ್ರೂ ಕೊಳ್ಳೋರೇ ಇಲ್ಲ!
ಇಷ್ಟೆಲ್ಲದರ ನಂತರ ಇಂದಿನಿಂದ ಗಡಿ ಪ್ರವೇಶಕ್ಕೆ ಮುಕ್ತ ಅವಕಾಶವನ್ನು ಗೋವಾ ನೀಡಿದೆ. ಮುಕ್ತ ಪ್ರವೇಶದ ಹಿನ್ನಲೆ ಕಾರವಾರ ಭಾಗದಿಂದ ಜನರು ಓಡಾಟ ಪ್ರಾರಂಭಿಸಿದ್ದಾರೆ. ಸರಕು ಸಾಗಣೆ, ಟ್ಯಾಕ್ಸಿ, ಕೆಲಸ ಕಾರ್ಯಗಳಿಗೆ ವಾಹನಗಳು ಹಾಗೂ ಜನರು ಅಡೆತಡೆ ಇಲ್ಲದೇ ಹೋಗಿಬರುತ್ತಿದ್ದಾರೆ.
ಗಡಿಯಲ್ಲಿ ಮುಕ್ತ ಪ್ರವೇಶ ನೀಡಿದ ಹಿನ್ನೆಲೆಯಲ್ಲಿ ಗಡಿ ಭಾಗಕ್ಕೆ ತೆರಳಿದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು, ಗಡಿಯಲ್ಲಿನ ಪೊಲೀಸರು ಹಾಗೂ ಪ್ರಯಾಣಿಕರಿಗೆ ಸಿಹಿ ವಿತರಿಸಿ ಸಂತಸ ವ್ಯಕ್ತಪಡಿಸಿದರು.