ಮುಂಜಾಗ್ರತೆ ವಹಿಸಿ ಮೀನುಗಾರಿಕೆಗೆ ಅವಕಾಶ ನೀಡಲಿ: ಅಸ್ನೋಟಿಕರ್
ಕಾರವಾರ, ಏಪ್ರಿಲ್ 05: ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಮೀನುಗಾರಿಕೆ ಮಾಡದಂತೆ ಆದೇಶ ಮಾಡಿರುವುದರಿಂದ ಮೀನುಗಾರರು ದುಡಿಮೆ ಇಲ್ಲದೇ ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಿ, ಮುಂಜಾಗ್ರತಾ ಕ್ರಮ ಕೈಗೊಂಡು ಮೀನುಗಾರಿಕೆಗೆ ಅವಕಾಶ ನೀಡಲಿ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಆಗ್ರಹಿಸಿದ್ದಾರೆ.
ಮೂರ್ನಾಲ್ಕು ಮೀನುಗಾರರು ತೆರಳಿ ಮೀನುಗಾರಿಕೆ ಮಾಡಿಕೊಂಡು ಬರಲು ಮುಂಜಾಗ್ರತಾ ಕ್ರಮ ಕೈಗೊಂಡು ಅವಕಾಶ ಕೊಡಬೇಕು. ಇದರೊಟ್ಟಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮೀನುಗಾರ ಮಹಿಳೆಯರಿಗೆ ಮೀನು ಮಾರಲು ಅವಕಾಶ ಮಾಡಿಕೊಡಿ. ಮೀನುಗಾರಿಕೆ ಪ್ರಾರಂಭಿಸಿದರೆ ತಾಜಾ ಮೀನುಗಳನ್ನು ಮನೆ ಮನೆಗೆ ಹೋಗಿ ಮಹಿಳೆಯರು ಮಾರಾಟ ಮಾಡಿ ಜೀವನ ಸಾಗಿಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
""ಕರಾವಳಿ ಭಾಗಕ್ಕೆ ಮೀನುಗಾರರೇ ಅನ್ನದಾತರು. ಕರಾವಳಿ ಭಾಗದಲ್ಲಿ ಕೃಷಿ ಕಡಿಮೆ. ಮತ್ಸ್ಯ ಕೃಷಿಯೇ ಹೆಚ್ಚಾಗಿರುವುದರಿಂದ ಮೀನುಗಾರರನ್ನು ಕೃಷಿಕರೆಂದು ಪರಿಗಣಿಸಬೇಕು. ಈ ಬಾರಿ ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆ ಸರಿಯಾಗದೆ, ಮೀನುಗಾರಿಕೆಗೆ ತೆರಳಿದಾಗಲೂ ಮೀನು ಬೀಳದೆ ಜಿಲ್ಲೆಯ ಎಲ್ಲಾ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೋಟ್, ಬಲೆ ಖರೀದಿಗೆ ಸಾಲ ಮಾಡಿ ಹಣ ಕಟ್ಟಲು ಆಗದೇ ಆತಂಕದಲ್ಲಿದ್ದಾರೆ'' ಎಂದು ಹೇಳಿದ್ದಾರೆ.
""ಸರ್ಕಾರ ಈ ಬಗ್ಗೆ ಗಮನಹರಿಸಿ ಮೀನುಗಾರರ ಸಾಲ ಮನ್ನಾ ಮಾಡಬೇಕು. ಅಲ್ಲದೇ ಕೊರೊನಾ ವೈರಸ್ ತುರ್ತು ಪರಿಸ್ಥಿತಿ ಇರುವ ಸಂದರ್ಭದಲ್ಲಿ ಮೀನುಗಾರ ಕುಟುಂಬದವರು ದುಡಿಮೆ ಇಲ್ಲದೇ ಸಂಕಷ್ಟದಲ್ಲಿರುವುದರಿಂದ ಅವರಿಗೆ ಆರ್ಥಿಕ ಸಹಾಯ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು'' ಎಂದು ಆಗ್ರಹಿಸಿದ್ದಾರೆ.
""ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಹಾಗೂ ಇತರೆ ಮೀನುಗಾರಿಕಾ ಸಂಘಟನೆಯ ಅಧ್ಯಕ್ಷರುಗಳು, ಮುಖಂಡರುಗಳು ಎಲ್ಲರೂ ಆತಂಕದಲ್ಲಿರುವ ಮೀನುಗಾರರಿಗೆ ಧೈರ್ಯ ತುಂಬಬೇಕು'' ಎಂದು ಮನವಿ ಮಾಡಿಕೊಂಡಿರುವ ಅವರು,
""ನಾನು ಸಹ ಪ್ರತಿನಿತ್ಯ ಹಲವು ಮೀನುಗಾರರಿಗೆ ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಮೀನುಗಾರರ ಜೊತೆ, ಅವರ ನೋವಿಗೆ ನಮ್ಮ ಕುಟುಂಬ ಸದಾ ಇರುತ್ತದೆ. ಸರ್ಕಾರ ಕೂಡಲೇ ಸಂಕಷ್ಟದಲ್ಲಿರುವ ಮೀನುಗಾರರ ನೆರವಿಗೆ ಬರಬೇಕು'' ಎಂದು ಒತ್ತಾಯಿಸಿದ್ದಾರೆ.