ಉತ್ತರ ಕನ್ನಡ ಬಾಣಂತಿ ಸಾವಿನ ಪ್ರಕರಣ: ಮೀನುಗಾರರಿಂದ ಮತ್ತೆ ಪ್ರತಿಭಟನೆ
ಕಾರವಾರ, ಮಾರ್ಚ್ 2: ಉತ್ತರ ಕನ್ನಡ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವಿನ ಪ್ರಕರಣ ಸಂಬಂಧ ತಪ್ಪಿತಸ್ಥರು ಯಾರು ಎಂದು ಈವರೆಗೂ ತಿಳಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಈ ಬಗ್ಗೆ 10 ದಿನಗಳ ಒಳಗೆ ಜಿಲ್ಲಾಡಳಿತ ಸ್ಪಷ್ಟಪಡಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಕೂರುತ್ತೇವೆಂದು ಸ್ಥಳೀಯ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿರುವ ಮೀನುಗಾರರು, ಸರ್ವೋದಯನಗರ ನಿವಾಸಿಯಾಗಿದ್ದ ಗೀತಾ ಬಾನಾವಳಿ ಎಂಬ ಬಾಣಂತಿ ಮಹಿಳೆ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ ದಾಖಲಾದ ವೇಳೆ 2020ರ ಸೆಪ್ಟೆಂಬರ್ 3ರಂದು ಮೃತಪಟ್ಟಿದ್ದಳು.
ಬಾಣಂತಿ ಗೀತಾ ಸಾವಲ್ಲಿ ನಿರ್ಲಕ್ಷವಾಗಿಲ್ಲ, ಸರ್ಜನ್ ನಿರ್ದೋಷಿ ಎಂದ ವರದಿ
ಮರಣೋತ್ತರ ಪರೀಕ್ಷೆಯ ವರದಿ ಬಂದಿಲ್ಲ
ಜಿಲ್ಲಾ ಸರ್ಜನ್ ಆಗಿದ್ದ ಡಾ.ಶಿವಾನಂದ ಕುಡ್ತರಕರ್ ನಿರ್ಲಕ್ಷ್ಯತನದಿಂದ ಸಾವಾಗಿದೆ ಎಂದು ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಆದರೆ ಘಟನೆ ನಡೆದು ಆರು ತಿಂಗಳಾದರೂ, ಈವರೆಗೆ ಸಾವಿನ ಪ್ರಕರಣದಲ್ಲಿ ಏನಾಗಿದೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ ಎಂದಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಸಹ ಬಂದಿಲ್ಲ. ಪ್ರಕರಣವನ್ನು ಕೆಲವರು ಮುಚ್ಚಿ ಹಾಕಲು ಮಾಡಿದ ಪ್ರಯತ್ನ ಸಹ ಬಹಿರಂಗವಾಗಿ ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ತನಿಖಾ ತಂಡ ರಚಿಸಿ ವರದಿ ಸಹ ಸಲ್ಲಿಸಿದ್ದು, ವರದಿಯಲ್ಲಿ ಈ ಸಾವಿಗೆ ಕಾರಣ ಯಾರು, ತಪ್ಪಿತಸ್ಥರು ಯಾರು ಎಂದು ತಿಳಿಸಿಲ್ಲ. ನಿರ್ಲಕ್ಷ್ಯತನದ ಆರೋಪ ಎದುರಿಸುತ್ತಿರುವ ವೈದ್ಯ ಕುಡ್ತರಕರ್ ವರ್ಗಾಯಿಸಿ, ನಂತರ ಮತ್ತೆ ಕಾರವಾರಕ್ಕೆ ಮರು ನಿಯುಕ್ತಿಗೊಳಿಸಲಾಗಿದೆ.
ಜಿಲ್ಲಾ ಆಸ್ಪತ್ರೆಯ ಬಾಗಿಲು ಮುಚ್ಚುತ್ತೀರಾ?
ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾದರೂ ನಿರ್ಲಕ್ಷ್ಯ ಆರೋಪ ಎದುರಿಸುತ್ತಿರುವವರ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಸಾವಿಗೆ ನಿಖರ ಕಾರಣ ತಿಳಿಸಬೇಕು. ಜೊತೆಗೆ ನಿರ್ಲಕ್ಷತನ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಗೀತಾ ಬಾನವಾಳಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಡಾ.ಕುಡ್ತರಕರ್ ಅವರನ್ನು ಇಲ್ಲಿಂದ ವರ್ಗಾಯಿಸಿದರೆ ಇಲ್ಲಿನ ಆಸ್ಪತ್ರೆ ನಡೆಸಲು ಸಮಸ್ಯೆ ಆಗುತ್ತದೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಾರೆ. ಹಾಗಿದ್ದರೆ ಅವರು ನಿವೃತ್ತಿ ಹೊಂದಿದ ಮೇಲೆ ಜಿಲ್ಲಾ ಆಸ್ಪತ್ರೆಯ ಬಾಗಿಲು ಮುಚ್ಚುತ್ತೀರಾ? ಎಂದು ಉತ್ತರ ಕನ್ನಡ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಇದೇ ವೇಳೆ ಪ್ರಶ್ನಿಸಿದ್ದಾರೆ.
ಬಾಣಂತಿ ಗೀತಾ ಸಾವಲ್ಲಿ ನಿರ್ಲಕ್ಷವಾಗಿಲ್ಲ, ಸರ್ಜನ್ ನಿರ್ದೋಷಿ ಎಂದ ವರದಿ
ಪ್ರತಿಭಟನೆ ಆತ್ಮಹತ್ಯೆಗೆ ಪ್ರಚೋದನೆ
"ನನ್ನ ವಿರುದ್ಧ ಪದೇ ಪದೇ ಪ್ರತಿಭಟನೆ ಮಾಡುವ ಮೂಲಕ ಕೆಲವರು ಮಾನಸಿಕವಾಗಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದೊಂದು ರೀತಿ ಆತ್ಮಹತ್ಯೆಗೆ ಪ್ರಚೋದನೆ ಮಾಡಿದಂತೆ'' ಎಂದು ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ಹೇಳಿದ್ದಾರೆ.
‘ಒನ್ ಇಂಡಿಯಾ ಕನ್ನಡ'ಕ್ಕೆ ಹೇಳಿಕೆ ನೀಡಿರುವ ಅವರು, "ಬಾಣಂತಿ ಸಾವಿನ ನಂತರ ಹಿರಿಯ ಅಧಿಕಾರಿಗಳು, ವೈದ್ಯರ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಸಹ ನಡೆಸಲಾಗಿದೆ. ತನಿಖೆಯಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಹೀಗಾಗಿ ಮತ್ತೆ ಕರ್ತವ್ಯವನ್ನೂ ಪ್ರಾರಂಭಿಸಿದ್ದೇನೆ. ಈ ನಡುವೆ ಕೆಲವರು ನನ್ನ ಹೆಸರನ್ನು ಬಳಸಿಕೊಂಡು ಪದೇ ಪದೇ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದ್ದು, ಸರಿಯಾಗಿ ಕೆಲಸ ಮಾಡಲು ಆಗದ ವಾತಾವರಣ ಸೃಷ್ಟಿ ಮಾಡಿದಂತಾಗುತ್ತದೆ'' ಎಂದಿದ್ದಾರೆ.
Recommended Video
ಕಾರವಾರದಲ್ಲಿ ವೈದ್ಯರ ಕೊರತೆಯಿದೆ
"ಮೊದಲೇ ಕಾರವಾರದಲ್ಲಿ ವೈದ್ಯರ ಕೊರತೆಯಿದೆ. ಅಂಕೋಲಾದಲ್ಲಿ ಪ್ರಸೂತಿ ವೈದ್ಯರು ಇಲ್ಲದೇ ಜನರು ಪರದಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇರುವ ವೈದ್ಯರ ವಿರುದ್ಧ ಹೀಗೆ ದೂರುತ್ತಾ ಇದ್ದರೆ ಇಲ್ಲಿ ಸೇವೆ ಮಾಡಲು ಯಾರು ಬರುತ್ತಾರೆ? ನನ್ನದಲ್ಲದ ತಪ್ಪಿಗೆ ಅನಾವಶ್ಯಕವಾಗಿ ಈ ಹಿಂದೆ ನನ್ನ ಮೇಲೆ ಆರೋಪ ಹೊರಿಸಿ, ಜನರಿಗೂ ತಪ್ಪು ಸಂದೇಶ ಕೊಡುವಂತೆ ಮಾಡಿದ್ದರು. ಈಗ ತನಿಖೆ ನಡೆಸಿ ನಿರ್ದೋಷಿ ಎಂದು ವರದಿ ಬಂದರೂ ಈ ಹಿಂದಿನದನ್ನೇ ಮುಂದುವರೆಸಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಬಗ್ಗೆ ಗೊಂದಲವಿದ್ದರೆ ನ್ಯಾಯಾಲಯದ ಮೊರೆ ಹೋಗಲಿ. ಅದನ್ನು ಬಿಟ್ಟು ಪದೇ ಪದೇ ನನ್ನ ಹೆಸರು ಬಳಸಿಕೊಂಡು ಪ್ರತಿಭಟನೆ ಮಾಡುವುದು ಸರಿಯಾದ ಕ್ರಮವಲ್ಲ. ಹೀಗೇ ಮುಂದುವರಿದರೆ ಪೊಲೀಸ್ ದೂರು ದಾಖಲಿಸುವುದು ಅನಿವಾರ್ಯವಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.