ಅಧಿಕಾರಿಗಳಿಗೆ ಹೆಣ ಹಿಡಿದು ಊರೆಲ್ಲ ತಿರುಗಾಡೋ ಪರಿಸ್ಥಿತಿ; ಎಲ್ಲೇ ಹೂತರೂ ವಿರೋಧ
ಕಾರವಾರ, ಜುಲೈ 14: ಕೊರೊನಾ ವೈರಸ್ ನಿಂದಾಗಿ ಮೃತಪಟ್ಟವರ ಶವಸಂಸ್ಕಾರವನ್ನು ಮಾರ್ಗಸೂಚಿಗಳ ಪ್ರಕಾರ ಜಿಲ್ಲಾಡಳಿತವೇ ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಆದರೆ, ಕಾರವಾರದಲ್ಲಿ ಮಾತ್ರ ಶವಸಂಸ್ಕಾರ ಎನ್ನುವುದು ಇದೀಗ ಅಧಿಕಾರಿಗಳಿಗೆ ಫಜೀತಿ ತಂದೊಡ್ಡಿದೆ.
Recommended Video
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್-19 ವಾರ್ಡ್ ನಲ್ಲಿ ಕಳೆದ ಒಂದು ವಾರದ ಹಿಂದೆ ಶಿರಸಿ ಮೂಲದ ಸೋಂಕಿತನೋರ್ವ ಮೃತಪಟ್ಟಿದ್ದ. ಮೃತಪಟ್ಟವನ ಶವ ಸಂಸ್ಕಾರವನ್ನು ಸರ್ವೋದಯ ನಗರದ ಸ್ಮಶಾನದಲ್ಲಿ ಮಾಡಲು ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ಇದಾದ ನಂತರ ಶವವನ್ನು ಹಿಡಿದು ಅಲೆದಾಟ ನಡೆಸಿದ್ದ ಅಧಿಕಾರಿಗಳು, ಬಿಣಗಾ ಬಳಿಯ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಶವಸಂಸ್ಕಾರ ಮಾಡಿದ್ದರು.
ಕಾರವಾರದಲ್ಲಿ ಲಾಕ್ಡೌನ್ ಇದೆಯಾ? ಶಿವರಾಮ್ ಹೆಬ್ಬಾರ್ ಸ್ಪಷ್ಟನೆ
ಆದರೆ, ಬಿಣಗಾ ಬಳಿ ಮಾಡಿದ ಶವಸಂಸ್ಕಾರಕ್ಕೂ ವಿರೋಧ ವ್ಯಕ್ತವಾಗಿತ್ತು. ಇನ್ನು, ಕಾರವಾರ ತಾಲೂಕಿನ 71 ವರ್ಷದ ಕೊರೊನಾ ವೈರಸ್ ಸೋಂಕಿತ ವೃದ್ಧೆಯ ದೇಹ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಳು. ಆಕೆಯ ಶವಸಂಸ್ಕಾರವನ್ನು ನಗರದ ಹೈಚರ್ಚ್ ಬಳಿ ಜಿಲ್ಲಾಡಳಿತ ಮಾಡಿತ್ತು. ಆದರೆ, ಹೈಚರ್ಚ್ ಸುತ್ತಮುತ್ತಲಿನ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದು ಸಹ ಜಿಲ್ಲಾಡಳಿತಕ್ಕೆ ತಲೆನೋವಾಗಿತ್ತು.
ಜನವಸತಿ ಇಲ್ಲದ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡಿದರೂ ವಿರೋಧ
ಜಿಲ್ಲಾಡಳಿತವು ಜನವಸತಿ ಇಲ್ಲದ ಪ್ರದೇಶದಲ್ಲಿ ಶವಸಂಸ್ಕಾರ ಮಾಡಬೇಕು ಎಂದು ಕೆಲವರು ಆಗ್ರಹಿಸಿದ ಹಿನ್ನೆಲೆಯಲ್ಲಿ, ತಾಲೂಕಿನ ಮೈಗಿಣಿ ಗ್ರಾಮದ ಬಳಿ ಅರಣ್ಯ ಇಲಾಖೆಯ ಜಾಗಕ್ಕೆ ಸೇರಿದ ಪ್ರದೇಶದಲ್ಲಿ ಎರಡು ದಿನದ ಹಿಂದೆ ಮೃತಪಟ್ಟ ಸೋಂಕಿತನ ಶವ ಸಂಸ್ಕಾರ ಮಾಡಲಾಗಿದೆ.
ಜನವಸತಿ ಇಲ್ಲದ ಪ್ರದೇಶದಲ್ಲಿ ಸೋಂಕಿತನ ಶವ ಸಂಸ್ಕಾರ ಮಾಡಿದರೂ ಇದೀಗ ಅದಕ್ಕೂ ವಿರೋಧ ವ್ಯಕ್ತಪಡಿಸಲು ಪ್ರಾರಂಭಿಸಲಾಗಿದೆ. ಅರಣ್ಯ ಪ್ರದೇಶದ ಜಾಗದಲ್ಲಿ ಶವವನ್ನು ಹೂಳುತ್ತಿದ್ದು, ಆ ಭಾಗದಲ್ಲಿ ಕಾಡು ಪ್ರಾಣಿಗಳು ಸಾಕಷ್ಟಿದೆ. ದೇಹವನ್ನು ಮೇಲಕ್ಕೆ ಎಳೆದು ತಂದರೆ ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಬೇರೆ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡುವಂತೆ ಆಗ್ರಹ ಪಡಿಸಿದ್ದಾರೆ.
ಪದೇ ಪದೇ ವಿರೋಧ ಮಾಡುತ್ತಿರುವುದು ದೊಡ್ಡ ತಲೆ ನೋವಾಗಿದೆ
ಈ ಸಂಬಂಧ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಗ್ರಾಮಸ್ಥರ ಪರವಾಗಿ ಸುದ್ದಿಗೋಷ್ಠಿ ನಡೆಸಿ, ಶವಸಂಸ್ಕಾರ ಬೇರೆಡೆ ಮಾಡುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಸೋಂಕಿತರಿಗೆ ಚಿಕಿತ್ಸೆ ಕೊಡುವ ಸಂಬಂಧ ಜಿಲ್ಲಾಡಳಿತ ತಲೆ ಕೆಡಿಸಿಕೊಳ್ಳುವುದರ ನಡುವೆ ಇದೀಗ ಶವಸಂಸ್ಕಾರಕ್ಕೆ ಪದೇ ಪದೇ ವಿರೋಧ ಮಾಡುತ್ತಿರುವುದು ದೊಡ್ಡ ತಲೆ ನೋವಾಗಿದೆ. ಎಲ್ಲೇ ಶವಸಂಸ್ಕಾರ ಮಾಡಿದರೂ ವಿರೋಧ ಮಾಡುತ್ತಿರುವುದರಿಂದ ಎಲ್ಲಿ ಶವ ಸಂಸ್ಕಾರ ಮಾಡಬೇಕು ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವಿಡಿಯೋ ಮಾಡಿ ಹರಿಬಿಟ್ಟ ಕೊರೊನಾ ಸೋಂಕಿತ: ಸ್ಪಷ್ಟನೆ ನೀಡಿದ ಕ್ರಿಮ್ಸ್
ಶವ ಸಂಸ್ಕಾರದಲ್ಲಿ ರಾಜಕೀಯ ಮಾಡಬೇಡಿ
ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ಮಾಡುವ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಶವಸಂಸ್ಕಾರಕ್ಕೆ ಆದ ವಿವಾದದ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ಜಿಲ್ಲೆಯ ಭಟ್ಕಳದಲ್ಲಿ ಸೋಂಕಿನಿಂದ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಎರಡು ಮೂರು ಗಂಟೆಯಲ್ಲಿ ಶವಸಂಸ್ಕಾರವನ್ನು ಯಾವುದೇ ಸಮಸ್ಯೆ ಇಲ್ಲದೇ ಮಾಡಲಾಯಿತು. ಅದರಂತೆ ಯಲ್ಲಾಪುರದಲ್ಲಿ ಮೃತಪಟ್ಟಾಗ ಶವ ಸಂಸ್ಕಾರ ಮಾಡಲು ಯಾವುದೇ ವಿರೋಧವಾಗಿಲ್ಲ. ಆದರೆ ಕಾರವಾರದಲ್ಲಿ ಮಾತ್ರ ವಿರೋಧ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಗಿಣಿ ಭಾಗದ ಅರಣ್ಯ ಪ್ರದೇಶದಲ್ಲಿ ಶವ ಸಂಸ್ಕಾರಕ್ಕೆ ಜಾಗ ಗುರುತು
ನಾನು ಜನಪ್ರತಿನಿಧಿ, ಸಮಾಜದ ಮುಖಂಡರಿಗೆ ಪ್ರಾರ್ಥನೆ ಮಾಡುತ್ತೇನೆ. ಕೋವಿಡ್-19 ಸಂದರ್ಭದಲ್ಲಿ ಸಣ್ಣ ವಿಚಾರಗಳನ್ನೂ ಹಿಡಿದುಕೊಂಡು ರಾಜಕೀಯ ಮಾಡಬೇಡಿ. ಶವಸಂಸ್ಕಾರ ಮಾಡಲು, ಕೊರೊನಾ ವೈರಸ್ ಎದುರಿಸಲು ಜಿಲ್ಲಾಡಳಿತಕ್ಕೆ ಸಹಕಾರ ಕೊಡಿ. ಯಾರೇ ಮೃತರಾದರು ಜಿಲ್ಲಾಡಳಿತ ಅಂತಿಮ ಸಂಸ್ಕಾರ ಮಾಡಬೇಕಾದ ಜವಾಬ್ದಾರಿ ಇದ್ದು, ಈ ಹಿನ್ನೆಲೆಯಲ್ಲಿ ನಮ್ಮೊಂದಿಗೆ ಸಹಕರಿಸಿ ಎಂದಿದ್ದಾರೆ. ಅಲ್ಲದೇ, ಈಗಾಗಲೇ ಮೈಗಿಣಿ ಭಾಗದ ಅರಣ್ಯ ಪ್ರದೇಶದಲ್ಲಿ ಶವ ಸಂಸ್ಕಾರಕ್ಕೆ ಜಾಗವನ್ನು ಗುರುತು ಮಾಡಿದ್ದು, ಜನವಸತಿ ಇಲ್ಲದ ಜಾಗದಲ್ಲಿ ಶವಸಂಸ್ಕಾರ ಮಾಡುತ್ತಿದ್ದೇವೆ. ಇದೇ ಜಾಗ ಅಂತಿಮವಾಗಿದ್ದು, ಇದಕ್ಕೆ ವಿರೋಧ ಬೇಡ ಎಂದು ಸಚಿವ ಹೆಬ್ಬಾರ್ ಮನವಿ ಮಾಡಿಕೊಂಡಿದ್ದಾರೆ.