ಜೂನ್ 1 ರಿಂದ ಮೀನುಗಾರಿಕೆ ನಿಷೇಧ: ಯಾವ ಕಾರಣಕ್ಕೆ ಗೊತ್ತಾ?
ಕಾರವಾರ ಮೇ 24: ರಾಜ್ಯದ ಕರಾವಳಿ ತೀರದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಡೆಸುವವರಿಗೆ ಜೂನ್ 1ರಿಂದ ಜುಲೈ 31ರವರೆಗೆ ಎರಡು ತಿಂಗಳ ನಿಷೇಧ ಹೇರಲಾಗಿದೆ. ಜೂನ್ ತಿಂಗಳಿನಿಂದ ಸಾಮಾನ್ಯವಾಗಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ.
ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸುವುದು ಅವುಗಳ ಸಂತತಿಗಳ ಅಳಿವಿಗೆ ಕಾರಣವಾಗಬಹುದು. ಹೀಗಾಗಿ ಪ್ರತಿ ವರ್ಷವೂ ಜೂನ್ ತಿಂಗಳಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ.
ಕಾಳಿ ನದಿ ಹಿನ್ನೀರಿನಲ್ಲಿ ಸಾಮೂಹಿಕ ಮತ್ಸ್ಯ ಭೇಟೆ ಕಣ್ತುಂಬಿಕೊಂಡ ಜನ
ಇದು ಮತ್ಸ್ಯ ಸಂತತಿಯ ವೃದ್ಧಿಗೆ ಕಾರಣವಾಗಲಿದೆ. ನಿಷೇಧದ ಸಮಯದಲ್ಲಿ ರಾಜ್ಯ ಕರಾವಳಿಯ ಬಂದರುಗಳಲ್ಲಿ ದೋಣಿಗಳು ಲಂಗರು ಹಾಕಲಿವೆ.
ದುರಸ್ತಿ ಕಾರ್ಯ ಶುರು
ಈ ಸಂದರ್ಭ ವರ್ಷವಿಡೀ ದುಡಿಯುವ ಮೀನುಗಾರರು ಬಿಡುವು ಮಾಡಿಕೊಂಡು, ದೋಣಿಗಳು ಹಾಗೂ ಮೀನುಗಾರಿಕೆಗೆ ಬಳಸುವ ಬಲೆ ಇನ್ನಿತರ ಸಾಮಗ್ರಿಗಳನ್ನು ಈ ಎರಡು ತಿಂಗಳಲ್ಲಿ ದುರಸ್ತಿ ಮಾಡಿಕೊಳ್ಳುತ್ತಾರೆ.
ಸಮುದ್ರ ಮೀನುಗಾರಿಕೆಗೆ ಅನುಮತಿ
ಈ ನಿಷೇಧದ ಸಮಯದಲ್ಲಿ 10 ಅಶ್ವಶಕ್ತಿಯ ಯಂತ್ರ ಬಳಸಿ ಸಾಂಪ್ರದಾಯಿಕ, ನಾಡದೋಣಿಗಳ ಮೂಲಕ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಲು ಈ ವೇಳೆ ಅನುಮತಿ ಇರುತ್ತದೆ. ಅದಕ್ಕಿಂತ ಹೆಚ್ಚು ಸಾಮರ್ಥ್ಯದ ಯಂತ್ರ ಬಳಸಿ ಮೀನುಗಾರಿಕೆ ನಡೆಸಿದಲ್ಲಿ ಕರ್ನಾಟಕ ಕಡಲ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ 1986ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.
ನಿಷೇಧ ಉಲ್ಲಂಘಿಸಿದ ದೋಣಿಗಳು ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ಕಳೆದುಕೊಳ್ಳಲಿವೆ. ಜತೆಗೆ ಮೀನುಗಾರರು ಕೇಂದ್ರ ಅಬಕಾರಿ ತೆರಿಗೆ ಮರುಪಾವತಿ ಪಡೆಯಲು ಅನರ್ಹರಾಗುತ್ತಾರೆ.
ಪಾಚಿ ಇರುವಲ್ಲಿ ಮೀನಿಲ್ಲ
ಅರಬ್ಬಿ ಸಮುದ್ರದಲ್ಲಿ ಒತ್ತಡ ಹೆಚ್ಚಾಗಿದೆ. ಸಮುದ್ರಕ್ಕೆ ಸೇರುತ್ತಿರುವ ತ್ಯಾಜ್ಯಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಅಲ್ಲಿ ಪಾಚಿಗಳು ಬೆಳೆಯಲು ಕಾರಣವಾಗಿವೆ. ಈ ಪಾಚಿಗಳು ಮೀನುಗಳಿಗೆ ಆಮ್ಲಜನಕ ದೊರೆಯದಂತೆ ಮಾಡುತ್ತವೆ.
ಇದರಿಂದಾಗಿ ಮೀನುಗಳು ಪಾಚಿ ಬೆಳೆದ ಸ್ಥಳದಿಂದ ಪಲಾಯನ ಮಾಡುತ್ತವೆ. ಹೀಗಾಗಿ ಮೀನುಗಳ ಸಂಖ್ಯೆಯೂ ಕಡಿಮೆಯಾಗಿದೆ. ಇದರಿಂದಾಗಿ ಪ್ರತಿವರ್ಷದಂತೆ ಸಿಗುತ್ತಿದ್ದ ಮೀನುಗಳು ಕೂಡ ಈ ಬಾರಿ ಮೀನುಗಾರರಿಗೆ ಸಿಕ್ಕಿಲ್ಲ ಎನ್ನುತ್ತಾರೆ ಕಡಲ ಜೀವ ಶಾಸ್ತ್ರದ ಪ್ರಾಧ್ಯಪಕ ಡಾ.ಶಿವಕುಮಾರ ಹರಗಿ.
ಮೀನಿನ ಸಂತತಿ ಅಳಿವಿನತ್ತ?
ಈಗೆಲ್ಲ ಜವಾಬ್ದಾರಿಯುತ ಮೀನುಗಾರಿಕೆ ಮರೆಯಾಗಿದೆ. ಸಣ್ಣ ಸಣ್ಣ ಮರಿಗಳು ಕೂಡ ಮೀನುಗಾರರ ಬಲೆಗೆ ಬೀಳುತ್ತಿವೆ. ಆದರೂ ಈ ಬಗ್ಗೆ ಮೀನುಗಾರರು ಕಾಳಜಿ ವಹಿಸುತ್ತಿಲ್ಲ. ಇದು ಮುಂದೊಂದು ದಿನ ಮೀನುಗಳ ಸಂತತಿ ಅಳಿವಿಗೂ ಕಾರಣವಾಗಬಹುದು ಎನ್ನುತ್ತಾರೆ ಪ್ರಾಧ್ಯಪಕರು.