ಕಾರವಾರ: ನಾಪತ್ತೆಯಾಗಿದ್ದ ಯುವಕ ನಾಲ್ಕು ವರ್ಷಗಳ ಬಳಿಕ ಪತ್ತೆ !
ಕಾರವಾರ, ಜುಲೈ.09: ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗೋರ್ಸಗದ್ದೆಯ ಸಿದ್ದಿ ಜನಾಂಗದ ಯುವಕನೊಬ್ಬ ಸೋಮವಾರ ಕಾರವಾರಕ್ಕೆ ಮರಳಿದ್ದಾನೆ.
ಗೋರ್ಸಗದ್ದೆಯ ಸುಬ್ರಹ್ಮಣ್ಯ ಸಿದ್ದಿ ನಾಲ್ಕು ವರ್ಷಗಳ ಬಳಿಕ ಪತ್ತೆಯಾದ ಯುವಕ.
200 ದಿನದಿಂದ ನಾಪತ್ತೆ: ಟಿಕ್ಕಿ ಅಜಿತಾಬ್ ಪತ್ತೆಗೆ ಪೋಷಕರ ಅಳಲು
ತಂದೆ ರುದ್ರೇಶ್ ಸಿದ್ದಿ ಮುಂಬೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ, ಅವರನ್ನು ಹುಡುಕಿಕೊಂಡು 2014ರಲ್ಲಿ ಈತ ಮನೆಯಿಂದ ಹೊರಟಿದ್ದ. ರೈಲಿನ ಮೂಲಕ ಮುಂಬೈಗೆ ಹೊರಟ ಈತ ತಪ್ಪಿ ಮಥುರಾಕ್ಕೆ ಪ್ರಯಾಣ ಬೆಳೆಸಿದ್ದ.
ಈ ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತನನ್ನು ಗಮನಿಸಿದ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಫಿರೋಜಾಬಾದ್ ನ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.
ಇದೇ ಸಮಯದಲ್ಲಿ, ಯುವಕನನ್ನು ಅಪಹರಣ ಮಾಡಿರುವುದಾಗಿ ಯಲ್ಲಾಪುರ ಠಾಣೆಯಲ್ಲಿ ಈತನ ತಾಯಿ, ನರ್ಸ್ ಸುಶೀಲಾ ಸಿದ್ದಿ ದೂರು ದಾಖಲಿಸಿದ್ದರು. ಆದರೆ, 2017 ರವರೆಗೆ ಈತನ ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಜಿಲ್ಲಾ ಅಪರಾಧ ದಳ (ಡಿಸಿಬಿ)ಕ್ಕೆ ವರ್ಗಾಯಿಸಲಾಗಿತ್ತು.
ಅದರಂತೆ ತನಿಖೆ ಕೈಗೊಂಡಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಶರಣಗೌಡ ವಿ.ಎಚ್ ನೇತೃತ್ವದ ತಂಡ ಫಿರೋಜಾಬಾದ್ ನಲ್ಲಿ ಈತ ಇರುವುದನ್ನು ಪತ್ತೆ ಹಚ್ಚಿದೆ. ಬಳಿಕ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದ್ದು, ಅವರೇ ಈ ಯುವಕನನ್ನು ಕಾರವಾರದ ಡಿಸಿಬಿ ಕಚೇರಿಗೆ ತಂದು ಬಿಟ್ಟಿದ್ದಾರೆ. ಇದೀಗ ಯಲ್ಲಾಪುರದ ನಿವಾಸಕ್ಕೆ ಈತನನ್ನು ಕೊಂಡೊಯ್ಯಲಾಗುತ್ತಿದೆ.