ಮಾಜಿ ಶಾಸಕ ಸತೀಶ್ ಸೈಲ್ ಆಯ್ಕೆ ಅಕ್ರಮ: ಉಸ್ತುವಾರಿ ಸಚಿವರಿಗೆ ದೂರು
ಕಾರವಾರ, ಅಕ್ಟೋಬರ್ 18: ಕಾರವಾರದ ಚಿತ್ತಾಕುಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಿರ್ದೇಶಕರ ಹುದ್ದೆಗೆ ಅಕ್ರಮವಾಗಿ ಚುನಾವಣೆ ನಡೆದಿದ್ದು, ನಿರ್ದೇಶಕರಾಗಿ ಆಯ್ಕೆಯಾಗಿರುವ ಮಾಜಿ ಶಾಸಕ ಸತೀಶ್ ಸೈಲ್ ಅವರ ಸ್ಥಾನವನ್ನು ರದ್ದು ಪಡಿಸುವಂತೆ ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ದೂರು ನೀಡಲಾಗಿದೆ.
ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಅವರ ಮೂಲಕ ದೂರು ರವಾನಿಸಿರುವ ಹೊಸಾಳಿಯ ನಂದಕಿಶೋರ ನಾಯ್ಕ್, ತಾಲೂಕು ಪಂಚಾಯತಿ ಸದಸ್ಯ ಸುರೇಂದ್ರ ಗಾಂವ್ಕರ್, ಎಂ.ಪಿ.ರಾಣೆ ಹಾಗೂ ಪ್ರಣಯ್ ರಾಣೆ, ಚಿತ್ತಾಕುಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಖಾಲಿ ಇದ್ದ ಓರ್ವ ನಿರ್ದೇಶಕರ ಹುದ್ದೆಗಾಗಿ ಅಕ್ರಮವಾಗಿ ಚುನಾವಣೆ ನಡೆದಿದೆ ಎಂದು ದೂರಿದ್ದಾರೆ.
ಗದ್ದುಗೆ ಏರಲು ಕಾಂಗ್ರೆಸ್- ಬಿಜೆಪಿ ತಂತ್ರ; ನಿರ್ಣಾಯಕರಾದ ಪಕ್ಷೇತರ- ಜೆಡಿಎಸ್ ಸದಸ್ಯರು
ಸಂಘದಲ್ಲಿ ಇತ್ತೀಚಿಗೆ ಷೇರು ಪಡೆದಿರುವ ಮಾಜಿ ಶಾಸಕ ಸತೀಶ್ ಸೈಲ್, ಹಿಂದಿನ ದಿನಾಂಕಕ್ಕೆ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ. ಅಲ್ಲದೇ, ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಹಣದ ಆಮಿಷವೊಡ್ಡಿ ಅಕ್ರಮವಾಗಿ ಚುನಾವಣೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಂಘದ ಯಾವುದೇ ಷೇರುದಾರರಿಗೆ ನೋಟಿಸ್ ನೀಡದೇ ಚುನಾವಣೆ ನಡೆಸಲಾಗಿದೆ. ಹೀಗಾಗಿ ಈ ಚುನಾವಣೆಯ ಕುರಿತು ತನಿಖೆ ನಡೆಸಬೇಕು. ಕಾನೂನು ಬಾಹಿರವಾಗಿ ನಿರ್ದೇಶಕರಾದ ಸೈಲ್ ಅವರನ್ನು ವಜಾಗೊಳಿಸಿ, ಈ ಅಕ್ರಮ ಚುನಾವಣೆ ನಡೆಸಲು ಸಹಕರಿಸಿದ ಎಲ್ಲರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸತೀಶ್ ಸೈಲ್ ವಿರುದ್ಧ ಇದೀಗ ದೂರು ನೀಡಿರುವವರ ಪೈಕಿ ನಂದಕಿಶೋರ ನಾಯ್ಕ ಈ ಹಿಂದೆ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು. ಯುವ ಕಾಂಗ್ರೆಸ್ನ ಪ್ರಮುಖರಾಗಿದ್ದರು. ಸುರೇಂದ್ರ ಗಾಂವ್ಕರ್ ಪಕ್ಷೇತರರಾಗಿ ತಾಲೂಕು ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದರೂ ಕಾಂಗ್ರೆಸ್ನಲ್ಲಿ ಹಾಗೂ ಸೈಲ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಈ ಇಬ್ಬರು ಆಪ್ತರಾಗಿದ್ದ ಸೈಲ್ ವಿರುದ್ಧವೇ ದೂರು ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.