ಹಣಕಾಸಿನ ವಿಷಯದಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆ ಹೆಜ್ಜೆ ಇಡಲಿ: ಶಾಸಕ ದೇಶಪಾಂಡೆ
ಕಾರವಾರ, ನವೆಂಬರ್ 03: ಮುಂಬರುವ ವರ್ಷಗಳಲ್ಲಿ ರಾಜ್ಯ ಸರ್ಕಾರ ವರಮಾನದ ಕೊರತೆ ಎದುರಿಸಬಹುದಾದ ಸಾಧ್ಯತೆ ಇದೆ. ಇದರಿಂದಾಗಿ ರಾಜ್ಯದಲ್ಲಿ ಹಣಕಾಸಿನ ಬಿಕ್ಕಟ್ಟು ಸೃಷ್ಟಿಯಾಗಬಹುದು. ಆದ್ದರಿಂದ ರಾಜ್ಯ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ತನ್ನ ಮುಂದಿನ ಹೆಜ್ಜೆಗಳನ್ನು ಇರಿಸಬೇಕು ಎಂದು ಶಾಸಕ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಸೋಮವಾರ ಹಳಿಯಾಳ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ಸರ್ಕಾರ ಮುಂದಿನ ವರ್ಷಗಳಲ್ಲಿ ವಿವಿಧ ಆದಾಯೋತ್ಪನ್ನ ಚಟುವಟಿಕೆಗಳ ಮೂಲಕ 1 ಲಕ್ಷದ 80 ಸಾವಿರದ 217 ಕೋಟಿ ಆದಾಯ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದೆ. ಇದರಲ್ಲಿ ಬಹಳ ಎಂದರೆ 1 ಲಕ್ಷದ 15 ಸಾವಿರ ಕೋಟಿ ಮಾತ್ರ ಸರ್ಕಾರ ಬೊಕ್ಕಸ ಸೇರಬಹುದಾದ ಸಾಧ್ಯತೆ ಇದೆ. ಇದಿಷ್ಟನ್ನು ಹೊರತುಪಡಿಸಿದರೆ ಬೇರೆ ಯಾವುದೇ ಮೂಲದ ವರಮಾನಗಳು ತೃಪ್ತಿದಾಯಕವಾಗಿರಬಹುದಾದ ಸಾಧ್ಯತೆ ಇಲ್ಲ" ಎಂದು ಹೇಳಿದರು.
Oneindia Kannada Impact: ರೈತರ ಸಾಲ ವಸೂಲಿ; ಸಿಎಂಗೆ ದೇಶಪಾಂಡೆ ಪತ್ರ
ಜಿಎಸ್ಟಿಯಿಂದ ರಾಜ್ಯಕ್ಕೆ ದೊಡ್ಡ ಮೊತ್ತದಲ್ಲಿ ಆದಾಯ ದೊರೆಯುವುದು ವಾಡಿಕೆ ಆದರೂ, ಮುಂದಿನ ವರ್ಷ ಈ ಒಟ್ಟು ಮೊತ್ತದಲ್ಲಿ 25ರಿಂದ 28 ಸಾವಿರ ಕೋಟಿ ಕೊರತೆ ಆಗಬಹುದು. ಈ ಕೊರತೆ ಸರಿದೂಗಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಸೆಸ್ ಮೂಲಕ ಪರಿಹಾರ ನೀಡಬಹುದು. ಅದರಿಂದ 18 ರಿಂದ 20 ಸಾವಿರ ಕೋಟಿಗಳಷ್ಟು ಮಾತ್ರ ಅನುದಾನ ದೊರೆಯಬಲ್ಲದು. ಇಷ್ಟಾಗಿಯೂ ರಾಜ್ಯ ಸರಕಾರ ಕೇಂದ್ರದಿಂದ ದೊರೆಯುವ ಜಿಎಸ್ಟಿ ಅನುದಾನದ ಮೇಲೆ ಇಲ್ಲಿಂದೀಚೆಗೂ ಅವಲಂಬನೆ ಇಟ್ಟುಕೊಳ್ಳುವುದು ತರವೂ ಅಲ್ಲ. ಈವರೆಗೂ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ನೀಡುತ್ತಾ ಬಂದಿರುವ ಜಿಎಸ್ಟಿ ಅನುದಾನವನ್ನು 2022ರಿಂದ ಕೇಂದ್ರ ಸರಕಾರ ನಿಲ್ಲಿಸಲಿದೆ. ಹಾಗಾಗಿ ಆ ಬಗೆಗಿನ ಅವಲಂಬನೆಯನ್ನು ಈಗಿನಿಂದಲೇ ಕಡಿಮೆ ಮಾಡಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು.
ಇತರೆ ಅನುದಾನಗಳಿಂದ ರಾಜ್ಯಕ್ಕೆ 6ರಿಂದ 8 ಸಾವಿರ ಕೋಟಿಗಳಷ್ಟು ಮಾತ್ರ ಅನುದಾನ ಬರಬಲ್ಲದು. ಕೇಂದ್ರ ಸರಕಾರ ಮುಂದಿನ ವರ್ಷ ತನ್ನ ಮುಂಗಡ ಪತ್ರದಲ್ಲಿ ಕರ್ನಾಟಕಕ್ಕೆ 31 ಸಾವಿರದ 570 ಕೋಟಿ ಅನುದಾನ ನೀಡಬಹುದು ಎನ್ನುವ ನಿರೀಕ್ಷೆ ಇದೆಯಾದರೂ, ಅದರಲ್ಲಿ ಬಹಳ ಎಂದರೆ 17 ಸಾವಿರ ಕೋಟಿ ಮಾತ್ರ ರಾಜ್ಯಕ್ಕೆ ದೊರೆಯುತ್ತದೆ. ಮಿಕ್ಕಿದ 14 ಸಾವಿರ ಕೋಟಿಯನ್ನು ಕೇಂದ್ರವೇ ಹಿಡಿದಿಟ್ಟುಕೊಳ್ಳುವ ಸಾಧ್ಯತೆ ವ್ಯಾಪಕವಾಗಿವೆ ಎಂದು ಹೇಳಿದರು.
"ಡ್ರಗ್ ತನಿಖೆ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತವಾಗದಿರಲಿ"
ಈ ವರ್ಷವೂ ಕರ್ನಾಟಕ ಸರ್ಕಾರ ಕೇಂದ್ರದಿಂದ 50 ಸಾವಿರ ಕೋಟಿ ಅನುದಾನವನ್ನು ಪಡೆದುಕೊಳ್ಳಲಾಗದ ಸ್ಥಿತಿ ಇದೆ. ಆದ್ದರಿಂದ ಸಹಜವಾಗಿಯೇ ಇದರ ಬಿಕ್ಕಟ್ಟು ಮುಂದಿನ ವರ್ಷ ತಲೆದೋರುತ್ತದೆ. ಈಗಿನ ಸ್ಥಿತಿಯಲ್ಲಿ ಪರಿಸ್ಥಿತಿ ಸರಿದೂಗಿಸುವುದಕ್ಕೆ ಈ ವರ್ಷವೇ ರಾಜ್ಯ ಬಿಜೆಪಿ ಸರಕಾರ 85 ಸಾವಿರದಿಂದ 1 ಲಕ್ಷ ಕೋಟಿಗಳಷ್ಟು ಸಾಲ ಪಡೆದುಕೊಳ್ಳಲೇ ಬೇಕಾದ ಸ್ಥಿತಿ ಇದೆ. ಹಾಗಾಗಿ ಮುಂದಿನ ವರ್ಷದಿಂದ ಯಾವುದೇ ಹೊಸ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದು ಮತ್ತು ಈಗ ಜಾರಿಯಲ್ಲಿರುವ ಅಭಿವೃದ್ಧಿ ಚಟುವಟಿಕೆಗಳನ್ನು ಪೂರ್ಣ ಮಾಡುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ರಾಜ್ಯ ಸರಕಾರ ಈಗಲೇ ಎಚ್ಚೆತ್ತುಕೊಂಡು ಜಾಣ ಹೆಜ್ಜೆ ಇರಿಸಬೇಕು ಎಂದು ಕಿವಿಮಾತು ಹೇಳಿದರು.
Recommended Video