ವಿಶೇಷ ವರದಿ: ಕುತೂಹಲ ಮೂಡಿಸಿದ ಮಧು ಬಂಗಾರಪ್ಪ, ಆನಂದ್ ಅಸ್ನೋಟಿಕರ್ ಭೇಟಿ!
ಕಾರವಾರ, ಜೂನ್ 22: ಲೋಕಸಭಾ ಚುನಾವಣೆ ನಂತರ ರಾಜಕೀಯದಿಂದ ದೂರ ಉಳಿದಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮತ್ತೆ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಜೊತೆ ಚರ್ಚೆಗೆ ಆನಂದ್ ಸಿದ್ಧರಾಗಿದ್ದಾರೆ.
"ರಾಜಕೀಯ ನಿರ್ಣಯದ ಚರ್ಚೆ ಮಾಡುವ ಉದ್ದೇಶದಿಂದಲೇ ಬುಧವಾರ ಮಧು ಬಂಗಾರಪ್ಪ ಭೇಟಿ ಮಾಡುವಂತೆ ತಿಳಿಸಿದ್ದು, ಅದಕ್ಕಾಗಿ ಹೊರಟಿದ್ದೇನೆ. ಇದಾದ ನಂತರ ಶೀಘ್ರದಲ್ಲೇ ನಿರ್ಧಾರವನ್ನು ಪ್ರಕಟಿಸಿ ರಾಜಕೀಯ ಅಖಾಡಕ್ಕೆ ಇಳಿಯಲಿದ್ದೇನೆ ಎಂದು,'' ಆನಂದ್ ಅಸ್ನೋಟಿಕರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಿಂದ ಸುರೇಶ್ ಕುಮಾರ್ ದೂರ ದೂರ !
ಕಾರವಾರ- ಅಂಕೋಲಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಆನಂದ್ ಅಸ್ನೋಟಿಕರ್ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಸಹ ಕಾರ್ಯನಿರ್ವಹಿಸಿದ್ದರು. ನಂತರದ ಚುನಾವಣೆಯಲ್ಲಿ ಪರಾಭವಗೊಂಡ ನಂತರ ರಾಜಕೀಯದಿಂದ ದೂರ ಉಳಿದಿದ್ದರು. ಅಸ್ನೋಟಿಕರ್ ತಂದೆ ವಸಂತ್ ಅಸ್ನೋಟಿಕರ್ ಬಂಗಾರಪ್ಪನವರ ಆಪ್ತರಾಗಿದ್ದು, ಇದೇ ನಿಟ್ಟಿನಲ್ಲಿ ಅವರ ಪುತ್ರ ಮಧು ಬಂಗಾರಪ್ಪನವರ ಜೊತೆ ಸಹ ಆನಂದ್ ಇಂದಿಗೂ ಆತ್ಮೀಯರಾಗಿದ್ದಾರೆ.
ಮಧು ಬಂಗಾರಪ್ಪ ಅನತಿಯಂತೆ ಜೆಡಿಎಸ್ ಪಕ್ಷಕ್ಕೆ
ಕಳೆದ ಚುನಾವಣೆಯಲ್ಲಿ ಮಧು ಬಂಗಾರಪ್ಪನವರ ಅನತಿಯಂತೆ ಜೆಡಿಎಸ್ ಪಕ್ಷಕ್ಕೆ ಬಂದು, ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರು. ಕ್ಷೇತ್ರದಲ್ಲಿ ಹೆಸರೇ ಇಲ್ಲದ ಪಕ್ಷದಲ್ಲಿ ಸುಮಾರು 50 ಸಾವಿರ ಮತ ಪಡೆದು ಗಮನ ಸೆಳೆದಿದ್ದರು. ಇದೇ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲೂ ಪಕ್ಷದಿಂದ ಟಿಕೆಟ್ ಆನಂದ್ಗೆ ನೀಡಿದ್ದು, ಲೋಕಸಭಾ ಚುನಾವನೆಯಲ್ಲಿ ಸೋಲನ್ನು ಕಂಡ ನಂತರ ಆನಂದ್ ಅಸ್ನೋಟಿಕರ್ ರಾಜಕೀಯ ಜೀವನದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.
ದೊಡ್ಡ ಸಮಾವೇಶ ನಡೆಸಿ ಅಧಿಕೃತವಾಗಿ ಸೇರಲು ಸಿದ್ಧತೆ
ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ತನ್ನ ಸ್ವಕ್ಷೇತ್ರ ಸೊರಬದಲ್ಲಿ ದೊಡ್ಡ ಸಮಾವೇಶ ನಡೆಸಿ ಅಧಿಕೃತವಾಗಿ ಸೇರಲು ಸಿದ್ಧತೆ ನಡೆಸಿಕೊಂಡಿದ್ದರು. ಆದರೆ ಕೊರೊನಾ ಎರಡನೇ ಅಲೆಯಿಂದ ಕಾರ್ಯಕ್ರಮ ಮಾಡಲಾಗಿರಲಿಲ್ಲ. ಸದ್ಯ ಲಾಕ್ಡೌನ್ ಓಪನ್ ಮಾಡಲಾಗಿದ್ದು, ಮತ್ತೆ ಕಾರ್ಯಕ್ರಮ ಮಾಡಲು ಮಧು ಬಂಗಾರಪ್ಪ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತನ್ನ ಆಪ್ತರನ್ನು ಕರೆಸಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ತಾಯಿಗಾಗಿ ಸಾರ್ವಜನಿಕರಿಂದ ದೂರ ಉಳಿದೆ
ಇದೇ ನಿಟ್ಟಿನಲ್ಲಿ ಆನಂದ್ ಅಸ್ನೋಟಿಕರ್ ಸಹ ಬೆಂಗಳೂರಿಗೆ ತೆರಳಿ ಮಧು ಬಂಗಾರಪ್ಪನವರ ಜೊತೆ ಮಾತುಕತೆ ನಡೆಸಲಿದ್ದು, ಮುಂದಿನ ನಿರ್ಣಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟ ನಿಲುವನ್ನು ಪ್ರಕಟಿಸಲಿದ್ದೇನೆ ಎಂದು ಆನಂದ್ ಅಸ್ನೋಟಿಕರ್ ಸಹ ತಿಳಿಸಿದ್ದಾರೆ. "ಚಿಕ್ಕ ವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡ ನಾನು ತಾಯಿಯ ಆರೈಕೆಯಲ್ಲಿಯೇ ಬೆಳೆದಿದ್ದೆ. ಸದ್ಯ ಅವರು ಅನಾರೋಗ್ಯದಲ್ಲಿದ್ದು, ಅವರಿಗಾಗಿ ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕರಿಂದ ಸ್ವಲ್ಪ ದೂರ ಉಳಿದಿದ್ದೇನೆ,'' ಎಂದು ಆನಂದ್ ಅಸ್ನೋಟಿಕರ್ ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ರಾಜಕೀಯ ನಿರ್ಣಯ
"ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿ ಹಿರಿಯರಿಗೆ ಸೋಂಕು ತಗುಲಿ ಅನಾಹುತ ಆದ ಘಟನೆಗಳನ್ನು ನೋಡಿದ್ದೇವೆ. ಈ ನಿಟ್ಟಿನಲ್ಲಿ ಸುರಕ್ಷಿತವಾಗಿ ತಾಯಿಯನ್ನು ನೋಡಿಕೊಳ್ಳುವುದು ನನ್ನ ಮೊದಲ ಕರ್ತವ್ಯವಾಗಿತ್ತು. ಸದ್ಯ ಕೊರೊನಾ ಕಡಿಮೆಯಾಗುತ್ತಿರುವುದು ನೆಮ್ಮದಿ ಮೂಡಿಸಿದೆ,'' ಎಂದಿದ್ದಾರೆ.
"ಮನೆಯಲ್ಲಿಯೇ ನನಗೆ ಹಲವರು ಸಂಪರ್ಕ ಮಾಡಿ ನೆರೆಯ ಜಿಲ್ಲೆಗಳ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡಲು ಸಹಾಯ ಕೇಳಿದ್ದು, ನಾನು ಕೂಡ ಮಾಡಿದ್ದೇನೆ. ನಿರಂತರವಾಗಿ ಜನರ ಜೊತೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲಿಯೇ ರಾಜಕೀಯ ನಿರ್ಣಯವನ್ನು ಪ್ರಕಟಿಸಿ ಮುಂದೆ ಸಾಗುತ್ತೇನೆ,'' ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
Recommended Video