ವಿಶೇಷ ಸುದ್ದಿ: ನೆಚ್ಚಿನ ಗೋಕರ್ಣದಲ್ಲಿ ತರಕಾರಿ ಬೆಳೆದು ಮಾದರಿಯಾದ ವಿದೇಶಿ ಜೋಡಿ
ಕಾರವಾರ, ಡಿಸೆಂಬರ್ 16: ಲಾಕ್ ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡವರು, ಉದ್ಯೋಗವಿಲ್ಲದೆ ತಮ್ಮ ಊರಿಗೆ ವಾಪಸ್ ಹೋಗಲಾಗದೆ ಪರದಾಡಿದವರು ಹಲವರಿದ್ದಾರೆ. ಹೀಗೆ ಸಂಕಷ್ಟಗಳ ಸರಮಾಲೆಯಲ್ಲಿ ಸ್ಥಳೀಯರಿದ್ದರೆ, ಇತ್ತ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದ ವಿದೇಶಿ ಪ್ರವಾಸಿಗರಲ್ಲಿ ಹಲವರು ತಮ್ಮ ದೇಶಕ್ಕೆ ತೆರಳಲಾಗದೆ ಇಲ್ಲೇ ಉಳಿದಿದ್ದಾರೆ. ಆದರೆ, ತಮ್ಮ ದೇಶಕ್ಕೆ ಮರಳಲಾಗಲಿಲ್ಲ ಎಂದು ಕೊರಗದೆ ಇಲ್ಲೇ ಏನಾದರೂ ಮಾಡಬೇಕೆಂದು ತಾವು ವಸತಿ ಇರುವ ಮನೆಗಳ ಹಿತ್ತಲ್ಲಿನಲ್ಲಿ ಕೃಷಿ ಚಟುವಟಿಕೆ ಕೈಗೊಂಡು ಮಾದರಿಯಾಗಿದ್ದಾರೆ.
ಇಟಲಿ ದೇಶದ ಮೌರಿಯಾ ಎಂಬ ಪ್ರವಾಸಿಗ ಕಳೆದ ಆರು ವರ್ಷಗಳಿಂದ ಗೋಕರ್ಣಕ್ಕೆ ಬರುತ್ತಿದ್ದು, ಅದರಂತೆ ಕಳೆದ ವರ್ಷ ಕೂಡ ಬಂದಿದ್ದರು. ಮೂರು ತಿಂಗಳು ಉಳಿದು ಹೊರಡಬೇಕಿದ್ದ ಇವರಿಗೆ ಲಾಕ್ ಡೌನ್ ತಡೆ ನೀಡಿತ್ತು. ಆ ಅವಧಿಯ ನಂತರ ಹಲವರು ಇಲ್ಲಿನ ವಿವಿಧ ಇಲಾಖೆಗಳ ಸಹಾಯದಿಂದ ಸ್ವದೇಶಕ್ಕೆ ತೆರಳಿದ್ದರೂ, ಇವರಿಗೆ ತಮ್ಮ ದೇಶದ ತಾಂತ್ರಿಕ ತೊಂದರೆಯಿಂದ ಇಲ್ಲೇ ಉಳಿಯುವ ಪರಿಸ್ಥಿತಿ ಬಂದಿತ್ತು.
ಇನ್ನೆರಡು ತಿಂಗಳಲ್ಲಿ ಫಸಲು ಕಟಾವಿಗೆ ಬರಲಿದೆ
ಆದರೆ ಇಲ್ಲಿ ಕೇವಲ ತಿಂಡಿ, ಊಟ ಮಾಡಿ ಉಳಿದರೆ ಏನು ಪ್ರಯೋಜನ ಎಂದು ಯೋಚಿಸಿದ ಈತ, ತಾನು ತರಕಾರಿ ಬೆಳೆದರೆ ಹೇಗೆ ಎಂದು ತಾನು ಉಳಿದುಕೊಂಡಿದ್ದ ಮನೆಯ ಪಕ್ಕದ ಚಿಕ್ಕ ಜಾಗದಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಸ್ವತಃ ತಾವೇ ಓಳಿ ಕಡಿದು, ಬೀಜ ಬಿತ್ತಿ ತರಹೇವಾರಿ ತರಕಾರಿ ಬೆಳೆ ಬೆಳೆಯುತ್ತಿದ್ದು, ಇನ್ನೆರಡು ತಿಂಗಳಲ್ಲಿ ಫಸಲು ಕಟಾವಿಗೆ ಬರಲಿದೆ. ಟೊಮೆಟೊ, ಪಾಲಕ್ ಸೊಪ್ಪು, ಹರಿಗೆ, ಮೆಣಸು ಸೇರಿದಂತೆ ವಿವಿಧ ಜಾತಿಯ ತರಕಾರಿ ಬೆಳೆಯಲಾಗುತ್ತಿದೆ.
ಮರಳುಗಾರಿಕೆ, ಮಾಲಿನ್ಯದಿಂದಾಗಿ ಅವಸಾನದ ಹಂತಕ್ಕೆ ತಲುಪಿದ ಮೃದ್ವಂಗಿಗಳು
ಸಾವಯವ ಕೃಷಿ
ನಾನು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಹವ್ಯಾಸವಾಗಿ ಕೃಷಿ ಚಟುವಟಿಕೆಯನ್ನು ನನ್ನ ದೇಶದಲ್ಲಿ ಮಾಡುತ್ತಿದ್ದೆ. ಈ ವರ್ಷ ನಿಗದಿತ ಸಮಯಕ್ಕೆ ಸ್ವದೇಶಕ್ಕೆ ತೆರಳಾಗದ ಕಾರಣ ಈ ಕಾರ್ಯದಲ್ಲಿ ನಿರತನಾಗಿದ್ದೇನೆ ಎನ್ನುತ್ತಾನೆ ಮೌರಿಯಾ. ಸ್ವದೇಶಕ್ಕೆ ತೆರಳಲಾಗದ ಬಗ್ಗೆ ತುಂಬಾ ನೋವಿದೆ. ತಿಂಗಳಿಗೊಮ್ಮೆ ವೀಸಾ ಮುಂದುವರಿಸಬೇಕು. ಪೊಲೀಸರು ವಿಚಾರಿಸುತ್ತಾರೆ, ಆತಂಕವಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಆದರೆ ಇದೆಲ್ಲವನ್ನು ಮರೆಯಲು ಈ ಕೆಲಸ ಮಾಡುತ್ತಿದ್ದು, ಇಲ್ಲಿ ಬೆಳೆಯುವ ಬೆಳೆಗೆ ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದೇನೆ ಎಂದರು.
ಗೆಳತಿಯ ಸಾಥ್
ತಮ್ಮ ಮನೆಯಲ್ಲಿನ ಹಸಿ ಕಸವನ್ನು ಸಾವಯವ ಗೊಬ್ಬರ ಮಾಡುವ ವಿಧಾನವನ್ನು ವಿವರಿಸಿ ಸ್ವತಃ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕಿದ್ದನ್ನು ವಿವರಿಸಿದ ಮೌರಿಯಾ, ಮಾಂಸಹಾರ ಸೇವನೆ ಬಿಟ್ಟು ಬಹಳ ವರ್ಷವಾಗಿದ್ದು, ತರಕಾರಿ ಆಹಾರ ಪದಾರ್ಥಗಳನ್ನೇ ಸೇವಿಸುತ್ತಿದ್ದೇನೆ. ಇದರಂತೆ ಇಲ್ಲಿ ಬೆಳೆದ ಬೆಳೆ ನನ್ನ ಅಡುಗೆಗೆ ಬಳಸುತ್ತೇನೆ ಎಂದು ತಿಳಿಸಿದರು.
ಇಟಲಿಯ ಈ ಪ್ರಜೆಯೊಂದಿಗೆ ಪೋಲೆಂಡ್ ದೇಶದ ಜಾಸ್ಮಿನ್ ಎಂಬ ಗೆಳತಿ ಇದ್ದು, ಇವಳು ಕೂಡ ಜೊತೆಯಲ್ಲಿ ತರಕಾರಿ ಗಿಡಗಳಿಗೆ ನೀರುಣಿಸುವುದು, ಗೊಬ್ಬರ ಹಾಕುವುದು ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾಳೆ. ಈಕೆ ವೃತ್ತಿಯಲ್ಲಿ ಫೀಜಿಯೋಥೆರಪಿ ಮತ್ತು ಯೋಗ ಶಿಕ್ಷಕಿಯಾಗಿದ್ದಾರೆ.
ಗೋಕರ್ಣವೆಂದರೆ ಪಂಚ ಪ್ರಾಣ
ಹಲವು ವರ್ಷಗಳಿಂದ ಭಾರತದ ವಿವಿಧ ಪೌರಾಣಿಕ, ಪ್ರವಾಸಿ, ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ. ಉತ್ತರ, ದಕ್ಷಿಣ ಭಾತದ ಹಲವೆಡೆ ಭೇಟಿ ನೀಡಿದ್ದು, ಇಲ್ಲಿನ ಆಚಾರ, ವಿಚಾರ, ಸಂಸ್ಕೃತಿ ನಮ್ಮ ಜೀವನಕ್ಕೆ ಮಾದರಿಯಾಗಿದೆ. ಇದು ನನ್ನ ನೆಚ್ಚಿನ ದೇಶ. ಪುರಾಣ ಪ್ರಸಿದ್ಧ ಕ್ಷೇತ್ರ, ಸುಂದರ ಕಡಲತೀರ, ಸ್ಥಳೀಯರು, ಗೋಕರ್ಣ ನನ್ನ ಪ್ರಾಣವಿದ್ದಂತೆ ಎಂದು ಈ ಇಬ್ಬರು ಪ್ರವಾಸಿಗರು ಹೆಮ್ಮೆಯಿಂದ ನುಡಿಯುತ್ತಾರೆ.
Recommended Video
ಮಾದರಿಯಾಗಲಿ ಇಂದಿನ ಯುವ ಸಮುದಾಯಕ್ಕೆ
ಒಟ್ಟಾರೆ, ವಾರಾಂತ್ಯದ ರಜೆ ಬಂತೆಂದರೆ ಇಲ್ಲಿನ ಕಡಲತೀರಗಳಿಗೆ ಯುವ ಸಮೂಹದ ಪ್ರವಾಸಿಗರು ಮುಗಿಬೀಳುತ್ತಾರೆ. ಮೋಜು ಮಸ್ತಿ ಮಾಡುತ್ತಾ ಕುಡಿದು ತೂರಾಡುತ್ತಾರೆ. ಆದರೆ, ಪುಣ್ಯ ಕ್ಷೇತ್ರಕ್ಕೆ ಬರುತ್ತಿರುವ ವಿದೇಶಿಗರು ಅವರ ಸಂಸ್ಕೃತಿಯನ್ನು ಬಿಟ್ಟು, ನಮ್ಮ ಸುಸಂಸ್ಕೃತ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಇದು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ. ಜೊತೆಯಲ್ಲಿ ಗೋಕರ್ಣವೆಂದರೆ ವಾರಾಂತ್ಯ ಕಳೆಯುವ ಕಡಲತೀರವಲ್ಲ, ನಮ್ಮ ಪರಂಪರೆ ಬಿಂಬಿಸುವ ಪುಣ್ಯ ಸ್ಥಳ ಎಂದಾಗಲಿ ಎಂಬುದು ನಮ್ಮ ಆಶಯವಾಗಿದೆ.