ಅವಧಿಗೆ ಮುನ್ನವೇ ಎದುರಾಗಿದೆ ಮತ್ಸ್ಯಕ್ಷಾಮ; ಕಂಗಾಲಾಗಿರುವ ಕಡಲ ಮಕ್ಕಳು
ಕಾರವಾರ, ಫೆಬ್ರವರಿ 21: ಕರಾವಳಿಯಲ್ಲಿ ಈ ಬಾರಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೀನುಗಾರಿಕಾ ಅವಧಿ ಮುಗಿಯಲು ಇನ್ನೇನು ಕೆಲವೇ ತಿಂಗಳುಗಳು ಉಳಿದಿದ್ದು, ಉತ್ತಮ ಮೀನುಗಾರಿಕೆ ನಡೆಸಲು ಮೀನುಗಾರರು ಸಿದ್ಧತೆ ನಡೆಸಿದ್ದರೂ ಆಳ ಸಮುದ್ರದವರೆಗೆ ತೆರಳಿ ಮೀನುಗಳೇ ಸಿಗದೇ ವಾಪಸ್ಸಾಗುವಂತಾಗಿದೆ. ಅರ್ಥಾತ್, ಈ ಬಾರಿ ಅವಧಿಗೆ ಮುನ್ನವೇ ಮತ್ಸ್ಯಕ್ಷಾಮ ಎದುರಾಗಿದೆ.
ಜಿಲ್ಲೆಯ ಕರಾವಳಿಯಲ್ಲಿ ಸದ್ಯ ಮೀನುಗಾರಿಕೆ ಮೇಲೆ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಮೀನುಗಾರಿಕೆ ಸ್ಥಗಿತಗೊಳ್ಳುವಂತಾಗಿದೆ. ಈ ಬಾರಿ ಕರಾವಳಿಯಲ್ಲಿ ಅವಧಿಗೆ ಮುನ್ನವೇ ಮತ್ಸ್ಯಕ್ಷಾಮ ಎದುರಾಗಿದೆ.
ಉಡುಪಿಯಲ್ಲಿ ಮೂವತ್ತು ವರ್ಷಗಳಲ್ಲೇ ಕಂಡೂ ಕೇಳರಿಯದ ಮತ್ಸ್ಯಕ್ಷಾಮ
ಲಂಗರು ಹಾಕಿರುವ 300ಕ್ಕೂ ಹೆಚ್ಚು ಬೋಟುಗಳು
ಜನವರಿಯಿಂದಲೂ ಉತ್ತಮ ಮೀನುಗಳು ಸಿಗದೇ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಬೋಟುಗಳು ಖಾಲಿಯಾಗಿಯೇ ವಾಪಸ್ಸಾಗುವಂತಾಗಿತ್ತು. ಕೆಲವೊಂದು ಬೋಟುಗಳಿಗೆ ಮೀನು ಸಿಕ್ಕರೂ ಡೀಸೆಲ್ ಗೆ ವ್ಯಯಿಸಿದ ಖರ್ಚು ಸಹ ಪೂರೈಸುವಷ್ಟು ಮೀನುಗಳು ಸಿಗದೆ, ಮೀನುಗಳು ಸಿಕ್ಕರೂ ಲಾಭವಾಗುವ ಪರಿಸ್ಥಿತಿ ಇರಲಿಲ್ಲ. ಈ ನಿಟ್ಟಿನಲ್ಲಿ ಕಳೆದ ಹದಿನೈದು ದಿನಗಳಿಂದ ಬೈತಖೋಲ್ ಭಾಗದ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲೇ ಲಂಗರು ಹಾಕಿ ನಿಂತಿವೆ. ಸುಮಾರು 300ಕ್ಕೂ ಅಧಿಕ ಬೋಟುಗಳು ಮೀನುಗಳು ಸಿಗದೇ ಮೀನುಗಾರಿಕೆ ಸ್ಥಗಿತಗೊಳಿಸಿದ್ದು, ಮೀನುಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಹವಾಮಾನ ವೈಪರೀತ್ಯದಿಂದ ತೊಂದರೆ
ಈ ಬಾರಿಯ ಮೀನುಗಾರಿಕಾ ಅವಧಿಯಂತೆ ಆಗಸ್ಟ್ ತಿಂಗಳಿನಿಂದ ಮೀನುಗಾರಿಕೆ ಪ್ರಾರಂಭವಾಗಿದ್ದರೂ ಧಾರಾಕಾರ ಮಳೆ ಹಾಗೂ ಚಂಡಮಾರುತದಂತಹ ಹವಾಮಾನ ವೈಪರೀತ್ಯದಿಂದಾಗಿ ನಾಲ್ಕೈದು ಬಾರಿ ಮೀನುಗಾರಿಕೆ ಸ್ಥಗಿತಗೊಳ್ಳುವಂತಾಗಿತ್ತು. ಇದಾದ ನಂತರ ಮೀನುಗಾರಿಕೆಯನ್ನು ಪುನಃ ಪ್ರಾರಂಭಿಸಿದ್ದರೂ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದ ಪರಿಣಾಮ ಉತ್ತಮ ಮೀನುಗಾರಿಕೆ ಸಾಧ್ಯವಾಗಿರಲಿಲ್ಲ. ಇದೀಗ ಬೇಸಿಗೆ ಸಮೀಪಿಸುತ್ತಿದ್ದು, ಪ್ರತಿ ವರ್ಷ ಈ ಅವಧಿಯಲ್ಲಿ ಉತ್ತಮ ಮೀನುಗಾರಿಕೆ ನಡೆಯುತ್ತಿತ್ತು. ಆದರೆ ಈ ಬಾರಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ನಿರಾಸೆ ಉಂಟಾಗುವಂತಾಗಿದೆ.
ಸಾಲ ಮಾಡಿ ಬೋಟು ಸಿದ್ಧಪಡಿಸಿದ್ದರು
ಮೀನುಗಾರಿಕೆ ನಡೆಸಲು ಮೀನುಗಾರರು ಬ್ಯಾಂಕುಗಳಲ್ಲಿ ಸಾಲ ಮಾಡಿ ಬೋಟುಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇದೀಗ ಮೀನುಗಳೇ ಸಿಗದೇ ಅವರ ಸ್ಥಿತಿ ಆತಂಕಗೊಳ್ಳುವಂತಾಗಿದೆ. ಮಾರ್ಚ್ ತಿಂಗಳು ಸಮೀಪಿಸುತ್ತಿರುವುದರಿಂದ ಬ್ಯಾಂಕುಗಳು ಸಾಲದ ಮರುಪಾವತಿಗೆ ಒತ್ತಾಯಿಸುತ್ತಿವೆ. ಮೀನುಗಾರರು ದಿಕ್ಕು ಕಾಣದಂತಹ ಪರಿಸ್ಥಿತಿಯಲ್ಲಿದ್ದಾರೆ. ಒಂದೆಡೆ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಮೊದಲೇ ನಷ್ಟದಲ್ಲಿ ಮೀನುಗಾರರಿದ್ದಾರೆ. ಇದೀಗ ಸಾಲ ಮರುಪಾವತಿಸಲು ಸಾಧ್ಯವಾಗದ ಸ್ಥಿತಿ ಇದೆ. ಸರ್ಕಾರ ಈ ಸಮಯದಲ್ಲಿ ಮೀನುಗಾರರ ನೆರವಿಗೆ ಬರಬೇಕು ಎನ್ನುವುದು ಮೀನುಗಾರರ ಮನವಿಯಾಗಿದೆ.
ಮೀನುಗಾರರು ಬೀದಿಗೆ ಬೀಳುವ ಪರಿಸ್ಥಿತಿ
ಪ್ರತಿವರ್ಷ ಏಪ್ರಿಲ್, ಮೇ ತಿಂಗಳ ಕೊನೆಯವರೆಗೆ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದರು. ಜೂನ್ ತಿಂಗಳಿನಿಂದ ಮೀನುಗಾರಿಕೆಗೆ ನಿಷೇಧವಿರುವುದರಿಂದ ಮೀನುಗಾರರಿಗೆ ಎರಡು ತಿಂಗಳು ರಜೆಯ ಅವಧಿಯಂತಿರುತ್ತದೆ. ಅದಕ್ಕೂ ಮೊದಲೇ ಉತ್ತಮ ಮೀನುಗಾರಿಕೆ ಮಾಡಿಕೊಂಡು ಲಾಭ ಗಳಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಅವಧಿಗೆ ಮುನ್ನವೇ ಮತ್ಸ್ಯಕ್ಷಾಮ ಎದುರಾಗಿದ್ದು, ಬೋಟಿಗೆ ಹಾಕಿದ್ದ ಹಣವನ್ನೂ ಗಳಿಸಲಾಗದ ಸ್ಥಿತಿಯಿದೆ. ಮೀನುಗಾರರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಸರ್ಕಾರ ಕೇವಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮಾತ್ರ ಮನ್ನಾ ಮಾಡಿದ್ದು, ಸ್ಥಳೀಯ ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡಿದ್ದವರಿಗೆ ಸಾಲಮನ್ನಾ ಪ್ರಯೋಜನವಾಗದಂತಾಗಿದೆ. ಹೀಗಾಗಿ ಸ್ಥಳೀಯ ಬ್ಯಾಂಕುಗಳ ಸಾಲವನ್ನೂ ಮನ್ನಾ ಮಾಡಿದಲ್ಲಿ ಮೀನುಗಾರರು ಸಂಕಷ್ಟದಿಂದ ಪಾರಾಗುವುದು ಸಾಧ್ಯವಾಗಲಿದೆ. ಇಲ್ಲವಾದಲ್ಲಿ ಬೀದಿಗೆ ಬೀಳಬೇಕಾದ ಪರಿಸ್ಥಿತಿ ಇದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.