ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಂದ ಮೊದಲ ಸಾವು
ಕಾರವಾರ, ಜುಲೈ 1: ಯಲ್ಲಾಪುರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿದ್ದ ವೃದ್ಧೆಯೊಬ್ಬರು ನಿನ್ನೆ ಮೃತಪಟ್ಟಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಂದ ಮೊದಲ ಸಾವು ದಾಖಲಾಗಿದೆ.
ಹೃದಯಾಘಾತದಿಂದ ಸಾವನ್ನಪ್ಪಿರುವ ವೃದ್ಧೆಗೆ ಕೊರೊನಾ ಸೋಂಕು ತಗುಲಿತ್ತು ಎಂದು ಜಿಲ್ಲಾಡಳಿತ ದೃಢಪಡಿಸಿದೆ. ಮೊದಲ ಪರೀಕ್ಷೆಯಲ್ಲಿ ಇವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಆದರೆ ಈ ವರದಿಯಲ್ಲಿ ತಪ್ಪಾಗಿದೆ ಎಂದು ಭಾವಿಸಿ, ಎರಡನೇ ಬಾರಿಗೆ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡನೇ ವರದಿ ಬರುವುದರೊಳಗೆ ಇವರು ಮೃತಪಟ್ಟಿದ್ದು, ಮಾರ್ಗಸೂಚಿಯಂತೆ ಅಂತಿಮ ಸಂಸ್ಕಾರ ನಡೆಸಲಾಗಿತ್ತು. ಬುಧವಾರ ಬೆಳಿಗ್ಗೆ ಬಂದ ದ್ವಿತೀಯ ವರದಿಯಲ್ಲಿ ವೃದ್ಧೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇನ್ಮುಂದೆ ಬೆಂಗಳೂರಿಗೆ ಹೋಗಿ ಬಂದರೂ ಕೊರೊನಾ ಟೆಸ್ಟ್ ಕಡ್ಡಾಯ
ಹೊನ್ನಾವರ ಮೂಲದ ಅಂದಾಜು 60 ವರ್ಷದ ಈ ಮಹಿಳೆ ಪತಿಯೊಂದಿಗೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಪತಿ ಅನಾರೋಗ್ಯದ ನಿಮಿತ್ತ ಮೃತಪಟ್ಟ ಕಾರಣ ಇವರನ್ನು ಸೊಸೆಯ ಮನೆಯಾದ ಯಲ್ಲಾಪುರಕ್ಕೆ ಖಾಸಗಿ ಕಾರಿನಲ್ಲಿ ಕರೆ ತರಲಾಗಿತ್ತು. ಆದರೆ, ಪತಿಗೆ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ನಡೆಸದೇ ಅಂತಿಮ ಸಂಸ್ಕಾರ ನಡೆಸಲಾಗಿತ್ತು.
ಪತಿ ಮೃತಪಟ್ಟ ದುಃಖದಲ್ಲಿದ್ದ ಇವರಿಗೆ ಹೋಂ ಕ್ವಾರಂಟೈನ್ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಿನ್ನೆ ಸಂಜೆಯವರೆಗೂ ಆರೋಗ್ಯಯುತವಾಗಿದ್ದವರು ಹೃದಯಾಘಾತದಿಂದಾಗಿ ಮೃತಪಟ್ಟಿದ್ದರು.