ಕಾರವಾರದಲ್ಲಿ ಹುತಾತ್ಮ ಯೋಧನ ಸ್ಮಾರಕ ರಕ್ಷಣೆಗೂ ಪರದಾಟ: ಕಣ್ಣೀರಿಡುತ್ತಿರುವ ಕುಟುಂಬ
ಕಾರವಾರ, ಡಿಸೆಂಬರ್, 07: ಕಾರವಾರದಲ್ಲಿ ಹುತಾತ್ಮ ಯೋಧ ವಿಜಯಾನಂದ ನಾಯ್ಕ ಅವರ ಸ್ಮಾರಕ ಹಾಗೂ ಧ್ಜಜದ ಕಟ್ಟೆ ತೆರವಿಗೆ ನಗರಸಭೆ ಸದಸ್ಯರೊಬ್ಬರು ಹುನ್ನಾರ ನಡೆಸಿದ್ದಾರೆ. ಕಳೆದ ಎರಡು ವರ್ಷದಿಂದ ಅಧಿಕಾರಿಗಳು ಈ ಬಗ್ಗೆ ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಕೂಡ ಪ್ರಯೋಜನ ಇಲ್ಲದಂತಾಗಿದೆ. ಯಾರೊಬ್ಬರು ನಮ್ಮ ಸಹಾಯಕ್ಕೆ ಬರುತ್ತಿಲ್ಲ ಎಂದು ಹುತಾತ್ಮ ಯೋಧನ ಕುಟುಂಬದವರು ಅಳಲು ತೋಡಿಕೊಂಡಿದೆ.
ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯಾನಂದ ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ 2018ರ ಜುಲೈ 9 ರಂದು ನಕ್ಸಲರು ಹುದುಗಿಸಿಟ್ಟಿದ್ದ ಬಾಂಬ್ ಸ್ಪೋಟಗೊಂಡು ಪ್ರಾಣತ್ಯಾಗ ಮಾಡಿದ್ದರು. ಆದರೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಗನನ್ನು ಚತ್ತಿಸಗಡದ ಸೇನಾ ಕ್ಯಾಂಪ್ನಲ್ಲಿ ಸ್ಮಾರಕ ಮಾಡಿ ಗೌರವ ಸಲ್ಲಿಸಲಾಗುತ್ತಿದೆ. ಆದರೆ ಕಾರವಾರದಲ್ಲಿ ಸರ್ಕಾರದಿಂದ ಯಾವುದೇ ಸ್ಮಾರಕ ಪ್ರತಿಷ್ಠಾಪನೆ ಆಗಿಲ್ಲ. ಈಗಿದ್ದರೂ ಕೂಡ ಕುಟುಂಬಸ್ಥರು ಹಾಗೂ ಊರಿನವರು ಸೇರಿ ವಾರ್ಡ್ನಲ್ಲಿರುವ ತಮ್ಮದೆ ಜಾಗದಲ್ಲಿ ಸ್ಮಾರಕ, ಧ್ವಜಸ್ಥಂಭ ನಿರ್ಮಾಣ ಮಾಡಿದ್ದಾರೆ. ಆದರೆ ಇದರ ರಕ್ಷಣೆಗೆ ಇದೀಗ ಹುತಾತ್ಮ ಯೋಧನ ಕುಟುಂಬ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಶಿರವಾಡದ ರೆಸಾರ್ಟ್ನಲ್ಲಿ 500ಕ್ಕೂ ಅಧಿಕ ಹೊರರಾಜ್ಯ ಕಾರ್ಮಿಕರ ಕಾಮದ ಕಣ್ಣು: ಹೆಣ್ಣುಮಕ್ಕಳಿಗೆ ಆತಂಕ
ಹುತಾತ್ಮ ಯೋಧನ ಸ್ಮಾರಕ ಕೆಡವಲು ಪ್ಲಾನ್?
ಪ್ರಸ್ತುತ ಸ್ಮಾರಕ ಹಾಗೂ ಧ್ವಜದ ಕಟ್ಟೆ ಇರುವ ಸ್ಥಳದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ದಿನಾಚರಣೆ ವೇಳೆ ಧ್ವಜಾರೋಹಣ ಹಾಗೂ ವಿಜಯಾನಂದ ಹುಟ್ಟಿದ ಹಬ್ಬವನ್ನು ಆತನ ಸ್ನೇಹಿತರು ಆಚರಿಸುತ್ತಾರೆ. ಆದರೆ ಕಳೆದ ಎರಡು ವರ್ಷದ ಹಿಂದೆ ಸ್ಮಾರಕದ ಪಕ್ಕದ ಜಾಗವೊಂದನ್ನು ನಗರಸಭೆ ಸದಸ್ಯ ಮೋಹನ್ ನಾಯ್ಕ ಅವರ ಸಹೋದರ ಶ್ಯಾಮ್ ನಾಯ್ಕ ಎಂಬುವವರು ಖರೀದಿ ಮಾಡಿದ್ದಾರೆ. ಇದೀಗ ಸ್ಮಾರಕಕ್ಕೆ ಹಾನಿಯಾಗುವಂತೆ ಈ ಜಾಗಕ್ಕೆ ಸಂಪರ್ಕ ಕಲ್ಪಿಸುವ ಗೇಟ್ ನಿರ್ಮಾಣ ಮಾಡಿದ್ದು, ನಿತ್ಯವೂ ಸ್ಮಾರಕ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹುತಾತ್ಮ ಯೋಧನ ಅಣ್ಣ ವಿಶಾಲ ನಾಯ್ಕ ಅಳಲು ತೋಡಿಕೊಂಡಿದ್ದಾರೆ.
ಹುತಾತ್ಮ ಯೋಧನ ಕುಟುಂಬಸ್ಥರ ಕಣ್ಣೀರು
ಪ್ರಸ್ತುತ ಮನೆ ಸಂಪರ್ಕಿಸಲು ಬೇರೆಡೆ ಗೇಟ್ ಇದ್ದರೂ ಕೂಡ, ಇದೀಗ ಸ್ಮಾರಕದ ಬಳಿ ಗೇಟ್ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಜಗಳ ತೆಗೆದು ಪ್ರಭಾವ ಶಕ್ತಿಗಳನ್ನು ಬಳಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ಅಲ್ಲದೆ ನಮ್ಮ ಜಾಗದಲ್ಲಿ ಸ್ಮಾರಕ ಹಾನಿಯಾಗದಂತೆ ರಸ್ತೆ ಬದಿ ಬೇಲಿ ಹಾಕಲು ಮುಂದಾದರೇ ಅದನ್ನು ನಗರಸಭೆ ತೆರವುಗೊಳಿಸಿದೆ. ಸಮಸ್ಯೆ ಕಳೆದ ಎರಡು ವರ್ಷದಿಂದ ಇದ್ದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶಿಲ್ದಾರ್ ಹಾಗೂ ಶಾಸಕಿ ಅವರಿಗೂ ದೂರು ನೀಡಲಾಗಿದೆ. ಆದರೆ ಯಾರೊಬ್ಬರು ನೆರವಿಗೆ ಬಂದಿಲ್ಲ. ಕಳೆದ ಎರಡು ವರ್ಷದಿಂದ ನಮ್ಮ ಕುಟುಂಬಕ್ಕೆ ತಮ್ಮನನ್ನು ಕಳೆದುಕೊಂಡ ನೋವಿನ ಜೊತೆಗೆ ಇದೀಗ ಈ ಸ್ಮಾರಕ ರಕ್ಷಣೆಗೆ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ವಿಜಯಾನಂದ ಕುಟುಂಬಸ್ಥರಿಗೆ ಹಿಂಸೆ
ದೇಶಕ್ಕಾಗಿ ಹುತಾತ್ಮನಾದ ಮಗನ ಸ್ಮಾರಕವನ್ನು ನಮ್ಮ ಕುಟುಂಬದವರು ತಮ್ಮದೆ ಜಾಗದಲ್ಲಿ ನಿರ್ಮಿಸಿಕೊಂಡರು ಉಳಿಸಿಕೊಳ್ಳುವುದಕ್ಕೆ ನಿತ್ಯವೂ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರಿಂದ ಕುಟುಂಬದವರು ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿದೆ. ಅಂದು ಸ್ಮಾರಕ ನಿರ್ಮಾಣ ಮಾಡುವ ಭರವಸೆ ನೀಡಿದ್ದರಾದರೂ ಈವರೆಗೂ ಎಲ್ಲಿಯೂ ನಿರ್ಮಾಣ ಮಾಡಿಲ್ಲ. ಆದರೆ ಕುಟುಂಬದವರು ನಿರ್ಮಿಸಿದ ಸ್ಮಾರಕ ರಕ್ಷಣೆಗೂ ತೊಂದರೆ ಅನುಭವಿಸುತ್ತಿದ್ದು, ಯಾರೊಬ್ಬರು ನೆರವಿಗೆ ಬರುತ್ತಿಲ್ಲ ಎಂದು ಹುತಾತ್ಮ ಯೋಧನ ತಂದೆ ಸುರೇಶ್ ನಾಯ್ಕ ಅಳಲು ತೋಡಿಕೊಂಡಿದ್ದಾರೆ.
ಸ್ಮಾರಕದ ಬಗ್ಗೆ ನಗರಸಭೆ ಪೌರಾಯುಕ್ತ ಹೇಳಿದ್ದೇನು?
ಇನ್ನು ಈ ಬಗ್ಗೆ ನಗರಸಭೆ ಪೌರಾಯುಕ್ತ ಆರ್.ಪಿ ನಾಯ್ಕ ಅವರನ್ನು ಕೇಳಿದಾಗ ನಗರಸಭೆಯಿಂದ ಸ್ಮಾರಕಕ್ಕೆ ಯಾವುದೇ ತೊಂದರೆ ಮಾಡಿಲ್ಲ. ನಮಗೂ ಯೋಧರ ಬಗ್ಗೆ ಗೌರವ ಇದೆ. ಆದರೆ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಬೇಲಿ ಹಾಕಿದ್ದಾರೆ ಎನ್ನುವ ಕಾರಣಕ್ಕೆ ನಮ್ಮ ಅಧಿಕಾರಿಗಳು ತೆರವು ಮಾಡಿದ್ದಾರೆ. ಮನೆಯವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನ ಕುಟುಂಬಸ್ಥರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದು, ಸ್ಮಾರಕಕ್ಕೆ ಹಾನಿಮಾಡುವಂತೆ ನಡೆದುಕೊಳ್ಳುತ್ತಿರುವುದು ನಿಜಕ್ಕೂ ದುರಂತವೇ ಸರಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮದ್ಯಪ್ರವೇಶಿಸಿ ಹುತಾತ್ಮ ಯೋಧನ ಕುಟುಂಬಸ್ಥರಿಗೆ ನೆರವು ನೀಡಬೇಕಿದೆ.