ಕೊರೊನಾ ಕರಿನೆರಳಲ್ಲಿ ಭಟ್ಕಳದ ಪ್ರಸಿದ್ಧ ಮಾರಿ ಜಾತ್ರೆ ಆರಂಭ
ಕಾರವಾರ, ಜುಲೈ 15: ಭಟ್ಕಳದ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಮಾರಿಜಾತ್ರೆಯು ಇಂದು ಮತ್ತು ನಾಳೆ ಜರುಗಲಿದ್ದು, ಕೊರೊನಾ ಕರಿನೆರಳಿನಲ್ಲೇ ನಿಗದಿತ ಸಂಖ್ಯೆಯ ಭಕ್ತರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳ ನಡುವೆ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ಚೆನ್ನಪಟ್ಟಣ ಹನುಮಂತದೇವರ ರಥೋತ್ಸವ ಬಿಟ್ಟರೆ ಆಷಾಢದಲ್ಲಿ ಜರುಗುವ ಈ ಮಾರಿ ಜಾತ್ರೆಯೇ ಇಲ್ಲಿನ ಬಹುದೊಡ್ಡ ಜಾತ್ರೆ. ಈ ಜಾತ್ರೆಗೆ ತಾಲೂಕಿನಿಂದಷ್ಟೇ ಅಲ್ಲದೇ, ಹೊರ ಜಿಲ್ಲೆಗಳಿಂದಲೂ ಭಕ್ತಾದಿಗಳು ಬರುತ್ತಾರೆ. ಆದರೆ, ಈ ಬಾರಿ ಕೊರೊನಾದಿಂದಾಗಿ ಹನುಮಂತದೇವರ ರಥೋತ್ಸವ ನಡೆದಿಲ್ಲ. ಮಾರಿ ಜಾತ್ರೆ ಕೂಡ ತಾಲೂಕಾಡಳಿತ ಹಾಗೂ ಪೊಲೀಸರ ನಿಗಾ ನಡುವೆ, ಮುಂಜಾಗ್ರತಾ ಕ್ರಮಗಳೊಂದಿಗೆ ಸಂಪ್ರದಾಯದಂತೆ ಸರಳವಾಗಿ ನಡೆಯುತ್ತಿದೆ.
ಕೊರೊನಾ ಭೀತಿಗೆ ದೇವರ ಮೊರೆ: ಕನಕಪುರದಲ್ಲಿ ಸಾಮಾಜಿಕ ಅಂತರವಿಲ್ಲ
ನಾಳೆ ಮಾರಿ ಮೂರ್ತಿಯನ್ನು ವಾಹನದಲ್ಲಿ ಕೊಂಡೊಯ್ದು ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಈ ಮಾರಿ ದೇವಿ ಊರಿಗೆ ಬರುವ ರೋಗ- ರುಜಿನಗಳಿಂದ ಗ್ರಾಮವನ್ನು ರಕ್ಷಿಸುತ್ತಾಳೆಂಬ ನಂಬಿಕೆಯಿದ್ದು, ಜಾತ್ರಾ ಸಂಭ್ರಮಕ್ಕಿಂತ ಸಂಪ್ರದಾಯದಂತೆ ವಿಧಿವಿಧಾನಗಳು ನಡೆಸಲೇಬೇಕೆಂಬ ವಾಡಿಕೆಯಿದ್ದ ಹಿನ್ನೆಲೆ ಜಾತ್ರಾ ಕಾರ್ಯಕ್ರಮಗಳು ಮುಂದುವರಿದಿದೆ.
ಮಂಗಳವಾರ ರಾತ್ರಿ ಮಾರಿ ಮುಖ್ಯಸ್ಥರ ಮನೆಯವರು ಹಾಗೂ ನಿಗದಿತ ಸಂಖ್ಯೆಯ ಊರಿನವರಿಂದ ಪ್ರಥಮ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾರಿ ಗಂಡನ ಕಡೆಯವರು ಎಂದು ಕರೆಯಿಸಿಕೊಳ್ಳುವ ಕೊರಾರ ಜನಾಂಗದವರು ತಮ್ಮ ತಾಳ ತಬಲದೊಂದಿಗೆ ಆಗಮಿಸಿ ಮಾರಿಯನ್ನು ಮೆರವಣಿಗೆ ಮೂಲಕ ಕರೆದ್ಯೊಯಲು ಉತ್ಸುಕರಾಗಿದ್ದರು. ಬುಧವಾರ ಬೆಳಿಗ್ಗೆ ಐದು ಗಂಟೆ ಸುಮಾರಿಗೆ ಮಣ್ಕುಳಿ ಗ್ರಾಮಸ್ಥರು ಹಾಗೂ ಊರಿನವರು ಮಾರಿಯನ್ನು ಹೊತ್ತುಕೊಂಡು ಹೋಗಿ ಮಾರಿಗುಡಿಯಲ್ಲಿ ಪ್ರತಿಷ್ಠಾಪಿಸಿದರು.
ಎರಡು ದಿವಸ ನಡೆಯುವ ಈ ಜಾತ್ರೆಯಲ್ಲಿ ಮೊದಲನೇ ದಿವಸ ಪರ ಊರಿನವರು ಸೇವೆ ಸಲ್ಲಿಸಿ ಹಬ್ಬ ಆಚರಿಸಿದರೆ, ಎರಡನೇ ದಿವಸವಾದ ಗುರುವಾರ ಸ್ಥಳೀಯರು ಸೇವೆ ಸಲ್ಲಿಸಿ ಹಬ್ಬ ಆಚರಿಸುತ್ತಾರೆ.
ಮಾರಿ ರೂಪದಲ್ಲಿ ಕುಳಿತಿರುವ ಈ ದೇವಿಗೆ ಭಕ್ತರು ಊರಿಗೆ ಬರಬಹುದಾದ ಕಣ್ಣು ಬೇನೆ, ಸಿಡುಬು ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳನ್ನು ಬರದಂತೆ ತಡೆಗಟ್ಟುವಂತೆ ಭಕ್ತಿಯಿಂದ ಹೂವಿನ ಟೋಪಿ, ಎಲೆಯಿಂದ ಮಾಡಿದ ಹೂ ಕಟ್ಟು, ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿ ಕಾಪಾಡುವಂತೆ ಮೊರೆ ಇಡುತ್ತಾರೆ. ಗುರುವಾರ ಸಂಜೆ ಮಾರಿ ಮೂರ್ತಿ ವಿಸರ್ಜನೆಗೆ ಸುಮಾರು ಆರು ಕಿ.ಮೀ. ದೂರದ ಜಾಲಿ ಸಮುದ್ರತೀರಕ್ಕೆ ಹೊತ್ತೊಯ್ದು ಧಾರ್ಮಿಕ ವಿಧಿವಿಧಾನದನ್ವಯ ಪೂಜೆ ಸಲ್ಲಿಸಿ ಕೊನೆಯಲ್ಲಿ ವಿಗ್ರಹವನ್ನು ಛಿದ್ರಗೊಳಿಸಿ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಮಾರಿಜಾತ್ರೆಗೆ ತೆರೆ ಬೀಳುತ್ತದೆ.