ಕಾರವಾರ ಕ್ಷೇತ್ರಕ್ಕೆ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ?
ಕಾರವಾರ, ಜನವರಿ 18: ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಸತೀಶ್ ಸೈಲ್ ಮುಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕೆ ಇಳಿಯಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಬಹಿರಂಗವಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಸತೀಶ್ ಸೈಲ್ ಬಿಜೆಪಿ ಸೇರುತ್ತಾರೆ ಎನ್ನುವ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡಲು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸತೀಶ್ ಸೈಲ್ ಉತ್ತರ ಕೊಡಲು ಮುಂದಾಗಿಲ್ಲ.
ಕಾರವಾರ ಮೀನುಗಾರರಿಂದ ಸಂಸದ, ಶಾಸಕಿ ಫೋಟೋಗೆ ಚಪ್ಪಲಿ ಏಟು
""ಮುಂದಿನ ದಿನದಲ್ಲಿ ಸಮಯ ಬಂದಾಗ ಉತ್ತರ ಕೊಡಲಾಗುವುದು. ಬಿಜೆಪಿ ಸೇರುತ್ತೇನೆ ಎನ್ನುವುದಕ್ಕಿಂತ ಪಕ್ಷೇತರವಾಗಿ ನಾನು ನಿಲ್ಲುತ್ತೇನೆ'' ಎಂದು ಸತೀಶ್ ಸೈಲ್ ಹೇಳಿದ್ದಾರೆ.
ನನ್ನ ಹಾಗೂ ಸಿದ್ದರಾಮಯ್ಯನವರ ಟೈಮ್ ಸರಿ ಇರಲಿಲ್ಲ
ನಾನು ಸಿದ್ದರಾಮಯ್ಯನ ಭಕ್ತ. ಅವರು ತಂದಂತಹ ಕೆಲಸ, ಅವರು ಕಾರವಾರಕ್ಕೆ ಕೊಟ್ಟಂಥಹ ಕೆಲಸದಿಂದ ಇನ್ನು ಎರಡು ಬಾರಿ ಅವರಿಗೆ ಅವಕಾಶ ಸಿಗಬೇಕಿತ್ತು, ಸಿಕ್ಕಿದ್ದರೆ ಕಾರವಾರವನ್ನೇ ಬದಲಿಸುತ್ತಿದ್ದೆ. ಆದರೆ, ಅವರ ಸಮಯವೂ ಸರಿ ಇರಲಿಲ್ಲ, ನನ್ನ ಸಮಯವೂ ಸರಿ ಇರಲಿಲ್ಲ ಎಂದು ಸೈಲ್ ಹೇಳಿದ್ದಾರೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸತೀಶ್ ಸೈಲ್, ಭರ್ಜರಿ ಗೆಲುವು ಸಾಧಿಸಿದ್ದರು. ಇದಾದ ನಂತರ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದು, ಸೈಲ್ ಸಿದ್ದರಾಮಯ್ಯನವರ ಜೊತೆ ಗುರುತಿಸಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದಿದ್ದ ಸೈಲ್ ಚುನಾವಣೆಯಲ್ಲಿ ಸೋಲುಂಡರು.
ಕಾರವಾರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ
ಕರಾವಳಿಯಲ್ಲಿ ಬಿಜೆಪಿ ಬಲಿಷ್ಠವಾಗುತ್ತಿದ್ದು, ಚುನಾವಣೆ ನಂತರವೂ ಸೈಲ್ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಪ್ರಯತ್ನ ನಡೆಸಿದ್ದು, ಅದರಲ್ಲಿ ಅಷ್ಟಾಗಿ ಯಶಸ್ಸು ಕಾಣಲು ಸಾಧ್ಯವಾಗುತ್ತಿಲ್ಲ ಅನ್ನುವ ಅಸಮಾಧಾನ ಕೆಲವರ ಬಳಿ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯಾಗುವ ಚಿಂತನೆಯನ್ನ ಸಹ ಸೈಲ್ ತೆರೆಮರೆಯ ಪ್ರಯತ್ನವನ್ನು ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ನಡುವೆ ಕಾರವಾರದಲ್ಲಿ ಪಕ್ಷಾಧಾರಿತ ಚುನಾವಣೆಗಿಂತ ವ್ಯಕ್ತಿ ಆಧಾರಿತ ಚುನಾವಣೆ ನಡೆಯುತ್ತದೆ ಎಂದು ಸೈಲ್ ಮತ್ತೆ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಚಿಂತನೆ ಪ್ರಾರಂಭಿಸಿದ್ದಾರೆ.
ಕಾರವಾರ ಬಂದರು ವಿಸ್ತರಣೆ ಯೋಜನೆ ಮರುಪರಿಶೀಲನೆ; ಬೆಂಗಳೂರಿನಲ್ಲಿ ಸಚಿವ, ಶಾಸಕರ ಸಭೆ
ಚುನಾವಣಾ ಸಮಯದಲ್ಲಿ ಪಕ್ಷೇತರನಾಗಿ ಸ್ಪರ್ಧೆ
ತನ್ನ ಆಪ್ತ ವಲಯದಲ್ಲಿ ಈ ಬಗ್ಗೆ ಸೈಲ್ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೆ ತನಗೆ ಹಿನ್ನಡೆಯಾಗಲಿದ್ದು, ಪಕ್ಷೇತರವಾಗಿ ಸ್ಪರ್ಧಿಸಿದರೆ ಕೆಲ ಬಿಜೆಪಿ ಮತಗಳು ತನ್ನ ಪರ ಬರುವುದರಿಂದ ಪಕ್ಷೇತರವಾಗಿಯೇ ಸ್ಪರ್ಧಿಸುವುದು ಉತ್ತಮ ಎನ್ನುವುದು ಸೈಲ್ ಅಭಿಪ್ರಾಯವಾಗಿದೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದು ಅಂತಿಮವಾಗಿ ಚುನಾವಣೆ ಸಂದರ್ಭದಲ್ಲಿ ಪಕ್ಷೇತರವಾಗಿ ಕಣಕ್ಕೆ ಇಳಿಯುವ ಚಿಂತನೆಯನ್ನ ಸೈಲ್ ಮಾಡಿದ್ದಾರೆನ್ನಲಾಗಿದೆ. ಈ ನಿಟ್ಟಿನಲ್ಲಿ ಆನಂದ್ ರಾಜಕೀಯ ನಿಲುವನ್ನ ತೆಗೆದುಕೊಂಡ ನಂತರ ಅಂತಿಮವಾಗಿ ಚುನಾವಣೆ ವೇಳೆ ಪಕ್ಷೇತರರಾಗಿ ಕಣಕ್ಕೆ ಇಳಿದು ಕಾಂಗ್ರೆಸ್ ಪಕ್ಷಕ್ಕೆ ಆನಂದ್ ಸೇರ್ಪಡೆಯಾಗದಂತೆ ತಡೆಯುವ ಚಿಂತನೆಯನ್ನ ಸಹ ಸೈಲ್ ಮಾಡಿದ್ದಾರೆನ್ನಲಾಗಿದೆ.
ಜೆಡಿಎಸ್ ನಿಂದ ಆನಂದ್ ಅಸ್ನೋಟಿಕರ್ ಗೆಲ್ಲಲು ಸಾಧ್ಯವಿಲ್ಲ
ಒಂದೊಮ್ಮೆ ಸತೀಶ್ ಸೈಲ್ ಈಗಲೇ ಕಾಂಗ್ರೆಸ್ ಬಿಟ್ಟು ಪಕ್ಷೇತರನಾಗಿ ಚುನಾವಣೆ ನಿಲ್ಲುತ್ತೇನೆ ಎಂದು ಓಡಾಡಲು ಪ್ರಾರಂಭಿಸಿದರೆ, ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸೇರ್ಪಡೆಯಾಗುತ್ತಾರೆ ಎನ್ನುವ ಭಯವಿದೆ ಎನ್ನಲಾಗಿದೆ. ಸದ್ಯ ಜೆಡಿಎಸ್ ಪಕ್ಷದಲ್ಲಿರುವ ಆನಂದ್ ಅದೇ ಪಕ್ಷದಿಂದ ಚುನಾವಣೆಗೆ ನಿಂತು ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತು ಬೇರೆ ಪಕ್ಷದತ್ತ ಮುಖ ಮಾಡಿದ್ದಾರೆನ್ನಲಾಗಿದೆ.
ಇದೇ ವೇಳೆ ಸತೀಶ್ ಸೈಲ್ ಕಾಂಗ್ರೆಸ್ ಬಿಟ್ಟು ಆನಂದ್ ಅಸ್ನೋಟಿಕರ್ ಕಾಂಗ್ರೆಸ್ ಸೇರ್ಪಡೆಯಾದರೆ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳು ಆನಂದ್ ಸೆಳೆಯುತ್ತಾರೆನ್ನುವ ವಿಚಾರ ಸೈಲ್ ಅವರದ್ದು.
ರಾಜಕೀಯದಲ್ಲಿ ಏನು ಬೇಕಾದರು ಆಗಬಹುದಾಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ರಾಜಕೀಯ ಹೈಡ್ರಾಮಾ ನಡೆಯುವುದರಲ್ಲಿ ಅನುಮಾನವೇ ಇಲ್ಲ.