ಅನಂತ್ಕುಮಾರ್ ಹೆಗಡೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆನಂದ್ ಅಸ್ನೋಟಿಕರ್
ಕಾರವಾರ, ಜೂನ್ 30: ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಅವರನ್ನು ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದರು.
ಅನಂತ್ಕುಮಾರ್ ಹೆಗಡೆ ಒಬ್ಬ ನೀಚ ಎಂದು ಜರಿದ ಆನಂದ್ ಅಸ್ನೋಟಿಕರ್, ಆತನಿಗೆ ಮಂತ್ರಿ ಪದವಿ ಸಿಕ್ಕಿದ್ದು ಅದೃಷ್ಟದಿಂದಷ್ಟೇ, ಆತನಿಗೆ ಮಂತ್ರಿ ಪದವಿ ಕೊಟ್ಟು ಈಗ ಬಿಜೆಪಿಯೇ ಪರಿತಪಿಸುತ್ತಿದೆ ಎಂದು ಏಕವಚನದಲ್ಲಿಯೇ ಟೀಕಿಸಿದರು. ಬಿಜೆಪಿಯಿಂದ ಸಚಿವರಾಗಿದ್ದ ಆನಂದ್ ಅಸ್ನೋಟಿಕರ್ ನಂತರ ಪಕ್ಷ ತೊರೆದು ಜೆಡಿಎಸ್ ಸೇರಿದರು.
ಕ್ರೂರ ಹುಲಿಯನ್ನು ಕಾಡಿಗಟ್ಟಿ: ಹೆಗಡೆಗೆ ಮೊಯ್ಲಿ ಟಾಂಗ್!
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಯಾರೋ ಹಾರಿಸಿದ ಭಗವಾಧ್ವಜವನ್ನು ತಾನೇ ಹಾರಿಸಿದೆನೆಂದು ಹೇಳಿ, ಆರ್ಎಸ್ಎಸ್ನ ಪ್ರಭಾವ ಬಳಸಿ ಐದು ಬಾರಿ ಗೆದ್ದು ಬಂದಿದ್ದಾನೆ ಎಂದು ಅವರು ಆರೋಪ ಮಾಡಿದರು.
ಬಿಜೆಪಿಯ ವಿಶ್ವೇಶ್ವರ ಕಾಗೇರಿ ಅವರಿಗೆ ಈ ಚುನಾವಣೆಯಲ್ಲಿಯೂ ವಿರೋಧವಾಗಿ ಕೆಲಸ ಮಾಡಿದ ಅನಂತ್ಕುಮಾರ್ ಹೆಗಡೆ ಬಿಜೆಪಿಯ ಕಚೇರಿಯಲ್ಲಿಯೇ ವಿಶ್ವೇಶ್ವರ ಕಾಗೇರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂದರು.
ಅನಂತ್ಕುಮಾರ್ ಹೆಗಡೆಯಂತ ನೀಚ ದೇಶದಲ್ಲೇ ಇಲ್ಲ ಎಂದ ಆನಂದ್ ಅಸ್ನೋಟಿಕರ್ ಆತ ಅತ್ಯಂತ ಕೆಟ್ಟ ಸಂಪ್ರದಾಯದಿಂದ ಬಂದಿದ್ದಾನೆ ಎಂದು ಜರಿದರು.