ಎಲ್ಲರಿಗೂ ನನ್ನ ರಕ್ಷಣೆ ಇದೆ, ಕೇವಲ ಮಿರಾಶಿಗೆ ಮಾತ್ರವಲ್ಲ: ಸಚಿವ ಹೆಬ್ಬಾರ್
ಕಾರವಾರ, ಫೆಬ್ರವರಿ 16: ಎಲ್ಲರಿಗೂ ನನ್ನ ರಕ್ಷಣೆ ಇದೆ, ಕೇವಲ ವಿಜಯ್ ಮಿರಾಶಿ ಅಂತಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಕಾರವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದರು.
ಯಲ್ಲಾಪುರದ ತಮ್ಮ ಸ್ವಕ್ಷೇತ್ರದಲ್ಲಿ ಗೌಳಿ ಸಮುದಾಯದವರಿಂದ ಪ್ರತಿಭಟನೆ ನಡೆಯುತ್ತಿದ್ದು, ಹಲ್ಲೆ ಆರೋಪ ಎದುರಿಸುತ್ತಿರುವ ವಿಜಯ್ ಮಿರಾಶಿಗೆ ಸಚಿವ ಹೆಬ್ಬಾರ್ ರಕ್ಷಣೆ ಇದೆಯೆಂಬ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸಚಿವ ಶಿವರಾಮ್ ಹೆಬ್ಬಾರ್ ಸ್ವಕ್ಷೇತ್ರದಲ್ಲಿಯೇ ಬಿಜೆಪಿ ಒಡಕು...?
ಎರಡು ದಿನಗಳ ಹಿಂದೆ ವಿಜಯ್ ಮಿರಾಶಿ ತಂಡದವರು ಪ್ರತಿಭಟನೆ ನಡೆಸಿದರು. ನಿನ್ನೆ ಅವರ ವಿರುದ್ಧವೂ ಗುಂಪು ಪ್ರತಿಭಟನೆ ನಡೆಸಿದೆ. ಇದೆಲ್ಲ ಅವರ ವೈಯಕ್ತಿಕ ವಿಚಾರ. ತೊಂದರೆಗಳಿದ್ದರೆ, ಎರಡೂ ಸಂಘಟನೆಯವರನ್ನೂ ಕೂರಿಸಿಕೊಂಡು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.
ಎಲ್ಲರೂ ನಮ್ಮದೇ ಪಕ್ಷದವರು, ಎಲ್ಲರೂ ನಮ್ಮದೇ ಪಕ್ಷದ ಮುಖಂಡರು. ಸಣ್ಣ ವಿಚಾರಗಳನ್ನು ದೊಡ್ಡದು ಮಾಡುವುದರಿಂದ ನಮ್ಮ ಪಕ್ಷಕ್ಕೆ ಇದು ಶೋಭೆ ತರುವುದಿಲ್ಲ ಎಂದರು.
ಗ್ರಾಮ ಪಂಚಾಯತಿ ಗದ್ದುಗೆ ಏರಲು ಹಲ್ಲೆ- ಗಲಾಟೆಗಳು ನಡೆದು ಬಿಜೆಪಿಯಲ್ಲೇ ಒಡಕು ಮೂಡಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಗೇನೂ ಇಲ್ಲ. ಯಲ್ಲಾಪುರದಲ್ಲಿ 15ಕ್ಕೆ 15 ಪಂಚಾಯತಿ ಗೆದ್ದಿದ್ದೇವೆ. ಒಡಕು ಇದ್ದಿದ್ದರೆ ಇಷ್ಟು ಪಂಚಾಯತಿಗಳನ್ನು ಗೆಲ್ಲುತ್ತಿರಲಿಲ್ಲ. ಎಲ್ಲರಿಗೂ ಅಧ್ಯಕ್ಷರಾಗಬೇಕೆಂಬ ಅಪೇಕ್ಷೆ ಇರುತ್ತದೆ. ಅಪೇಕ್ಷೆಯ ಕಾರಣದಿಂದ ಇಂಥದ್ದೆಲ್ಲ ಸಣ್ಣಪುಟ್ಟ ಘಟನೆಗಳು ನಡೆಯುತ್ತವೆ. ಪಕ್ಷಕ್ಕೆ ಮತ್ತು ನಮಗೆ ಇದನ್ನೆಲ್ಲ ದಕ್ಕಿಸಿಕೊಂಡು ಹೋಗುವ ಶಕ್ತಿ ಇದೆ. ಎಲ್ಲರನ್ನೂ ಕರೆದು ಕೂರಿಸಿ ಮಾತಾಡಿಸಿ ಸರಿ ಮಾಡುತ್ತೇವೆ ಎಂದು ಹೇಳಿದರು.
Recommended Video
ಪದಾಧಿಕಾರಿಯಾದ ದನಗರ ಗೌಳಿ ಸಮುದಾಯದ ವಿಠು ಶಿಳ್ಕೆ ಹಾಗೂ ಆತನ ಜೊತೆ ಇದ್ದ ಕೆಲವರ ಮೇಲೆ ಧಾರವಾಡ ಜಿಲ್ಲೆಯ ಕಲಘಟಗಿ ಹೋಟೆಲೋಂದರಲ್ಲಿ ಇತ್ತೀಚೆಗೆ ಹಲ್ಲೆ ನಡೆದಿತ್ತು. ಪಂಚಾಯತಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಸಚಿವರ ಆಪ್ತರಾಗಿರುವ ಕಿರುವತ್ತಿಯ ವಿಜಯ್ ಮಿರಾಶಿ ತನ್ನ ಬೆಂಬಲಿಗರನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆಂದು ನೇರವಾಗಿ ಆರೋಪಿಸಲಾಗಿತ್ತು.