ಉತ್ತರ ಕನ್ನಡದಲ್ಲಿ ಆಸ್ಪತ್ರೆಗೆ #WeWantEmergencyHospitalInUK ಅಭಿಯಾನ
ಕಾರವಾರ, ಜೂನ್ 6: ಜಿಲ್ಲೆಯಲ್ಲಿ ದಿನೇದಿನೇ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಅಪಘಾತಗಳಲ್ಲಿ ಸ್ಥಳದಲ್ಲೇ ಸಾವನ್ನಪ್ಪುವವರಿಗಿಂತಲೂ, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಾಯುವವರ ಸಂಖ್ಯೆಯೇ ಅಧಿಕವಿದೆ. ಇದಕ್ಕೆಲ್ಲ ಜಿಲ್ಲೆಯಲ್ಲಿ ತುರ್ತು ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆಗಳು ಇಲ್ಲದಿರುವುದೇ ಕಾರಣ ಎಂದು ದೂರಿರುವ ನೆಟ್ಟಿಗರು, ಆಸ್ಪತ್ರೆಗಾಗಿ ಇದೀಗ ಅಭಿಯಾನ ಆರಂಭಿಸಿದ್ದಾರೆ.
#WeWantEmergencyHospitalInUK ಎಂಬ ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಹೆಚ್ಚಿನ ಬೆಂಬಲವೂ ವ್ಯಕ್ತವಾಗಿದೆ. ಯುಕೆ ಎಕ್ಸ್ಪ್ರೆಸ್, ನಮ್ಮ ಯುಕೆ, ಉತ್ತರ ಕನ್ನಡ ಟ್ರೋಲರ್ಸ್, ನಮ್ಮ ಉತ್ತರ ಕನ್ನಡ ಮೀಮ್ಸ್ ಈ ಅಭಿಯಾನದ ಹೊಣೆ ಹೊತ್ತುಕೊಂಡಿವೆ. ಅಭಿಯಾನಕ್ಕೆ ಈಗಾಗಲೇ ಹಲವು ಪ್ರಮುಖರ ಬೆಂಬಲವೂ ದೊರೆತಿದೆ.
ವರ್ಷದಲ್ಲಿ 1,103 ಅಪಘಾತ 239 ಮಂದಿ ಸಾವು
2018ರ ಮೇ ತಿಂಗಳಿನಿಂದ 2019ರ ಏಪ್ರಿಲ್ವರೆಗೆ ಜಿಲ್ಲೆಯ ವಿವಿಧೆಡೆ ನಡೆದಿರುವ 1,103 ಅಪಘಾತಗಳ ಪೈಕಿ 239 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 522 ಮಂದಿ ಗಂಭೀರವಾಗಿ ಗಾಯಗೊಂಡರೆ, 1,331 ಮಂದಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇದು ಜಿಲ್ಲೆಯ ಜನರ ಮನ ಕಲಕಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಅರೆಬರೆ ಕಾಮಗಾರಿ, ಹೆದ್ದಾರಿಗಳಲ್ಲಿ ಲೈಟ್ ಗಳು ಇಲ್ಲದಿರುವುದು, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು, ಬೇಕಾಬಿಟ್ಟಿಯಾಗಿ ಭಾರಿ ಗಾತ್ರದ ವಾಹನಗಳನ್ನು ಚಲಾಯಿಸುವುದು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ.
ಆಸ್ಪತ್ರೆ ತಲುಪುವ ಮುನ್ನ ಸಾವು
ಜಿಲ್ಲಾ ಕೇಂದ್ರ ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆ ಇದ್ದರೂ ಯಾವುದೇ ಮೂಲ ಸೌಕರ್ಯಗಳು ಇಲ್ಲಿಲ್ಲ. ಹೀಗಾಗಿ, ಈ ಭಾಗದಲ್ಲಿ ಅಪಘಾತಗಳು ನಡೆದರೆ 100 ಕಿ.ಮೀ. ದೂರದ ಗೋವಾ ರಾಜ್ಯದ ಬಾಂಬೋಲಿಮ್ ಆಸ್ಪತ್ರೆಗೆ ಗಾಯಗೊಂಡವರನ್ನು ಕೊಂಡೊಯ್ಯಬೇಕಿದೆ. ಇತ್ತ ಭಟ್ಕಳ, ಹೊನ್ನಾವರ, ಕುಮಟಾದಲ್ಲಿ ಅಪಘಾತ ನಡೆದರೆ ಮಣಿಪಾಲ, ಮಂಗಳೂರಿಗೆ, ಘಟ್ಟದ ಮೇಲ್ಭಾಗದ ತಾಲೂಕುಗಳಾದ ಶಿರಸಿ, ಸಿದ್ದಾಪುರ ಭಾಗದಲ್ಲಿ ಅಪಘಾತವಾದರೆ ಹುಬ್ಬಳ್ಳಿ, ಹಾವೇರಿಗೆ ಕೊಂಡೊಯ್ಯಬೇಕಿದೆ. ಹೀಗಾಗಿ, ಬಹುತೇಕ ಅಪಘಾತ ಪ್ರಕರಣಗಳಲ್ಲಿ ಗಾಯಗೊಂಡವರು ಆಸ್ಪತ್ರೆಗೆ ತಲುಪುವ ಮುನ್ನವೇ ದಾರಿ ಮಧ್ಯೆ ಪ್ರಾಣ ಬಿಡುತ್ತಿದ್ದಾರೆ. ಇನ್ನು, ಜಿಲ್ಲೆಯಲ್ಲಿ ಎರಡೇ ಎರಡು ವೆಂಟಿಲೇಟೆಡ್ ಆಂಬುಲೆನ್ಸ್ ಇದ್ದು, ಎರಡೂ ಖಾಸಗಿ ಸಂಸ್ಥೆಗಳದ್ದಾಗಿವೆ.
ಮೊಬೈಲ್ ಟವರ್ ಶಾಲೆ, ಆಸ್ಪತ್ರೆಗಳಿಂದ 50 ಮೀಟರ್ ಒಳಗಿರುವಂತಿಲ್ಲ
ಇನ್ನೂ ಶುರುವಾಗದ ಟ್ರೌಮಾ ಸೆಂಟರ್
ಜಿಲ್ಲೆಯ ವೈದ್ಯಕೀಯ ಕಾಲೇಜಿನ ಬಳಿ ಟ್ರೌಮಾ ಸೆಂಟರ್ ನಿರ್ಮಿಸುವ ಪ್ರಸ್ತಾವ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ಕುರಿತು ಜಾಗ ಪರಿಶೀಲನೆಯೂ ನಡೆದಿದೆ. ಆದರೆ, ಈವರೆಗೂ ಟ್ರೌಮಾ ಸೆಂಟರ್ ನಿರ್ಮಾಣಕ್ಕೆ ಕೇಂದ್ರದಿಂದ ಪರವಾನಗಿ ದೊರೆತಿಲ್ಲ. 'ಕೇಂದ್ರ ಸರ್ಕಾರದಿಂದ ಟ್ರೌಮಾ ಸೆಂಟರ್ ಸ್ಥಾಪಿಸಲು ಈವರೆಗೆ ಪರವಾನಗಿ ದೊರೆತಿಲ್ಲ. ಮತ್ತೂ ವಿಳಂಬವಾದರೆ ರಾಜ್ಯ ಸರ್ಕಾರದಿಂದ ನಿರ್ಮಿಸಲಾಗುತ್ತಿರುವ ನೂತನ ಆಸ್ಪತ್ರೆಯಲ್ಲಿ ಟ್ರೌಮಾ ಸೆಂಟರ್ ಗಾಗಿ ಒಂದು ವಿಭಾಗವನ್ನು ಮೀಸಲಿಡಲಾಗುವುದು. ಇಲ್ಲಿ ತುರ್ತು ನಿಗಾ ಘಟಕ, ಆಪರೇಷನ್ ಥಿಯೇಟರ್ ಗಳ ವ್ಯವಸ್ಥೆ ಮಾಡಲಾಗುವುದು' ಎನ್ನುತ್ತಾರೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಶಿವಾನಂದ ದೊಡ್ಡಮನಿ.
ಬೆಂಗಳೂರಲ್ಲಿ 5 ಮಂದಿ ಅಮಾಯಕರ ಪ್ರಾಣ ತೆಗೆದ ಆಂಬುಲೆನ್ಸ್
ಅಭಿಯಾನಕ್ಕೆ ಶಾಸಕ ಸಾಥ್
ಈ ಅಭಿಯಾನಕ್ಕೆ ಭಟ್ಕಳ ಶಾಸಕ ಸುನೀಲ್ ನಾಯ್ಕ ಕೂಡ ಸಾಥ್ ನೀಡಿದ್ದಾರೆ. ಅಭಿಯಾನದ ಭಾಗವಾಗಿ ಅವರು ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಸಮಸ್ಯೆಯ ಬಗ್ಗೆ ಹಂಚಿಕೊಂಡಿದ್ದಾರೆ. ಆಸ್ಪತ್ರೆಯ ಅಗತ್ಯತೆಯ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.