ಉತ್ತರ ಕನ್ನಡದಲ್ಲಿ ಮಳೆಗೆ ಕೊಚ್ಚಿ ಹೋದ ಸೇತುವೆ, ಸಂಚಾರ ಅಸ್ತವ್ಯಸ್ತ
ಕಾರವಾರ, ಆಗಸ್ಟ್.14: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಸಣ್ಣಪುಟ್ಟ ಅವಘಡಗಳು ನಡೆದ ಕುರಿತು ವರದಿಯಾಗಿದೆ. ತಾಲೂಕಿನ ಹೊಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಯಾರ್ ಸೇತುವೆಯು ಮಳೆಯ ನೀರಿಗೆ ಕೊಚ್ಚಿ ಹೋಗಿದೆ.
ಗೋಯಾರ್ ಹಾಗೂ ಬಾರಗದ್ದೆಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಇದಾಗಿದ್ದು, ಮಳೆಯಿಂದಾಗಿ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಸೇತುವೆ ಅಕ್ಕಪಕ್ಕದ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದಾಗಿ ಸೇತುವೆ ಮೇಲೆ ಸಂಚರಿಸಲಾಗದಂತಾಗಿದೆ ಎಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತ
ಮಳೆಯಿಂದಾಗಿ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಸೋಮವಾರ ರಾತ್ರಿ ರಸ್ತೆಯ ಮೇಲೆ ಚಲಿಸುತ್ತಿದ್ದ ಶ್ರೀದುರ್ಗಾಂಬಾ ಬಸ್ ಮೇಲೆ ಮಣ್ಣು ಕುಸಿದಿದ್ದು, ಪ್ರಯಾಣಿಕರೆಲ್ಲರೂ ಅದೃಷ್ಟವಶಾತ್ ಪಾರಾಗಿದ್ದಾರೆ.
ಮಣ್ಣು ಕುಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಹುಬ್ಬಳ್ಳಿ- ಅಂಕೋಲಾ ನಡುವಿನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಬೆಳಗ್ಗೆ 7.30ರ ವರೆಗೆ ನಡೆದ ತೆರವು ಕಾರ್ಯಾಚರಣೆಯ ಬಳಿಕ ವಾಹನ ಸಂಚಾರಕ್ಕೆ ರಸ್ತೆ ಮುಕ್ತವಾಗಿದೆ.
ಉಡುಪಿಯಲ್ಲೂ ಅನಾಹುತ ಸೃಷ್ಟಿಸಿದ ಮಳೆ, ರೆಡ್ ಅಲರ್ಟ್ ಘೋಷಣೆ
6 ಎಕರೆ ಗದ್ದೆ ನಾಶ
ಶಿರಸಿ ತಾಲೂಕಿನ ಹುಲ್ಲೂರು ಮನೆ ಪಕ್ಕದ ಗದ್ದೆಗೆ ಏಕಾಏಕಿ ನೀರು ನುಗ್ಗಿದ ಪರಿಣಾಮ ನಾಟಿ ಮಾಡಲಾಗಿದ್ದ 6 ಎಕರೆಯಷ್ಟು ಗದ್ದೆ ಸಂಪೂರ್ಣ ನಾಶವಾಗಿದೆ.
ಮಂಗಳವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ನೀರು ಗದ್ದೆಗೆ ನುಗ್ಗಿದ್ದರಿಂದ ಮಾಲೀಕರು ಕಂಗಾಲಾಗಿದ್ದಾರೆ. ನೀರು ಹರಿಯಲು ಮಾಡಿದ್ದ ಕಾಲುವೆ ಬೇಸಿಗೆ ಕಾಲದಲ್ಲಿ ಮುಚ್ಚಿ ಹೋಗಿದ್ದರಿಂದ ಹೀಗೆ ಗದ್ದೆಗೆ ನೀರು ನುಗ್ಗಿದೆ.
ಗೇರುಸೊಪ್ಪ ಡ್ಯಾಂನಿಂದ ನೀರು ಬಿಡುವ ಸಾಧ್ಯತೆ
ಈಗಾಗಲೇ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಟ್ಟಿರುವುದರಿಂದ, ಅದು ಹೊನ್ನಾವರ ತಾಲೂಕಿನ ಗೇರುಸೊಪ್ಪ ಬ್ಯಾಲೆನ್ಸಿಂಗ್ ಡ್ಯಾಂಗೆ ಹರಿದು ಬರಲಿದೆ. ಇಲ್ಲಿ ನೀರನ್ನು ಸಂಗ್ರಹಿಸುವ ಅವಕಾಶ ಇಲ್ಲದ ಕಾರಣ ಇಲ್ಲಿನ ಅಣೆಕಟ್ಟಿನಿಂದ ಹೊರ ಬಿಡಲಾಗುತ್ತದೆ.
ಮುನ್ನೆಚ್ಚರಿಕಾ ಕ್ರಮವಾಗಿ ಅಣೆಕಟ್ಟಿನ ಕೆಳದಂಡೆಯಲ್ಲಿರುವವರು ತಮ್ಮ ಸರಂಜಾಮುಗಳೊಂದಿಗೆ ಸುರಕ್ಷತಾ ಸ್ಥಳಕ್ಕೆ ತೆರಳುವಂತೆ ತಿಳಿಸಲಾಗಿದೆ.