ಹೃದಯ ಚಿಕಿತ್ಸೆಗೊಳಗಾದ ತಂದೆ ಬಿಟ್ಟು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಂದ ವೈದ್ಯ!
ಕಾರವಾರ, ಏಪ್ರಿಲ್ 28: ಕೊರೊನಾ ವೈರಸ್ ಎರಡನೇ ಅಲೆ ಹೆಚ್ಚುತ್ತಿರುವುದರ ನಡುವೆ ತಮ್ಮ ತಂದೆಗೆ ಹೃದಯ ಚಿಕಿತ್ಸೆಯಾಗಿದ್ದರೂ, ಕೊರೊನಾ ಸೋಂಕಿತರ ಸೇವೆಯೇ ಮುಖ್ಯ ಎಂದು ನೂರಾರು ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡುವಲ್ಲಿ ಮಗ್ನರಾಗುವ ಮೂಲಕ ಕಾರವಾರದ ವೈದ್ಯರೊಬ್ಬರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಕೊರೊನಾ ಎರಡನೇ ಅಲೆಯ ಅಬ್ಬರದಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಕೊರೊನಾ ಸೋಂಕು ಕಡಿವಾಣಕ್ಕೆ ಒಂದೆಡೆ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದೆಡೆ ಸೋಂಕಿತರ ರಕ್ಷಣೆಗೆ ವೈದ್ಯರ ತಂಡ ಎಲ್ಲೆಡೆ ಹಗಲಿರಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತ ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶ್ವಾಸಕೋಶ ತಜ್ಞ ಡಾ.ಶ್ರೀನಿವಾಸ್ ತಮ್ಮ ತಂದೆಯ ಹೃದಯ ಚಿಕಿತ್ಸೆಯಾಗಿದ್ದರೂ, ಕೊರೊನಾ ಸೋಂಕಿತರ ರಕ್ಷಣೆ ಮಾಡುವ ಕಾಯಕದಲ್ಲಿ ತೊಡಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೂಲತಃ ಶಿವಮೊಗ್ಗ ನಗರದ ಡಾ.ಶ್ರೀನಿವಾಸ್, ಈ ಹಿಂದೆ ಮಂಗಳೂರಿನ ಪ್ರಸಿದ್ಧ ಎಜೆ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡಿದ್ದರು. ಕಳೆದ ಆರು ತಿಂಗಳಿನಿಂದ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಶ್ವಾಸಕೋಶ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಹಲವರಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡಿದ್ದ ಶ್ರೀನಿವಾಸ್, ಸದ್ಯ ಎರಡನೇ ಅಲೆಯಲ್ಲಿ ಸುಮಾರು 250ಕ್ಕೂ ಅಧಿಕ ಸೋಂಕಿತರಿಗೆ ಚಿಕಿತ್ಸೆ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾರೆ.
ಆದರೆ, ವೈದ್ಯ ಶ್ರೀನಿವಾಸ್ ತಂದೆಗೆ ವಾರದ ಹಿಂದೆ ಹೃದಯಾಘಾತ ಆಗಿದ್ದು, ತಕ್ಷಣ ಬೆಳಿಗ್ಗೆ ಕಾರವಾರದಿಂದ ಶಿವಮೊಗ್ಗಕ್ಕೆ ತೆರಳಿ ತಂದೆಯ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಅಲ್ಲೇ ಖಾಸಗಿ ಆಸ್ಪತ್ರೆಯೊಂದಲ್ಲಿ ದಾಖಲಿಸಿದ್ದಾರೆ. ಮನೆಯವರಿಗೆ ತಂದೆಯನ್ನು ಆರೈಕೆ ಮಾಡುವಂತೆ ತಿಳಿಸಿ ಸಂಜೆಯೇ ಕಾರವಾರಕ್ಕೆ ವಾಪಸ್ ಆಗಿ ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದು, ವೈದ್ಯ ಶ್ರೀನಿವಾಸ್ ಸೇವೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕಿತರ ಚಿಕಿತ್ಸೆ ಕೊಡುವಲ್ಲಿ ಶ್ವಾಸಕೋಶ ತಜ್ಞರ ಪಾತ್ರ ಪ್ರಮುಖವಾಗಿರುತ್ತದೆ. ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಇಬ್ಬರೇ ಶ್ವಾಸಕೋಶ ತಜ್ಞರಿದ್ದು, ಅದರಲ್ಲೂ ಡಾ.ಶ್ರೀನಿವಾಸ್ ಕಾರ್ಯ ಪ್ರಮುಖವಾಗಿದೆ. ತಾವು ತಂದೆಯ ಆರೈಕೆ ಎಂದು ಊರಲ್ಲಿ ಉಳಿದರೆ ಕಾರವಾರದಲ್ಲಿ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಯಾರು ಚಿಕಿತ್ಸೆ ಕೊಡುತ್ತಾರೆ ಎಂದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ತಂದೆಯನ್ನು ಬಿಟ್ಟು ಒಂದೇ ದಿನಕ್ಕೆ ವಾಪಸ್ ಕಾರವಾರಕ್ಕೆ ಬಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರರಿಂದ ಹಿಡಿದು ಕಾರವಾರದಲ್ಲಿ ಸೋಂಕು ದೃಢಪಟ್ಟ ಬಹುತೇಕರಿಗೆ ಶ್ರೀನಿವಾಸ್ರವರೇ ಚಿಕಿತ್ಸೆ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾರೆ. ತಂದೆಯ ಅನಾರೋಗ್ಯದ ನಡುವೆ ಜನರ ರಕ್ಷಣೆಯಲ್ಲಿ ನಿರತರಾಗಿರುವುದರ ಬಗ್ಗೆ ಕೇಳಿದರೆ ವೈದ್ಯ ಶ್ರೀನಿವಾಸ್ ಭಾವುಕರಾದರು.
Recommended Video
ಡಾ.ಶ್ರೀನಿವಾಸ್ ಸೇವೆಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ ಸೇರಿ ಎಲ್ಲಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಕಾರವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಪ್ರತಿದಿನ ಸೋಂಕಿತರಿಗೆ ಚಿಕಿತ್ಸೆ ಕೊಡುವಲ್ಲಿಯೇ ನಿರತರಾಗಿರುವುದರಿಂದ ವೈದ್ಯ ಶ್ರೀನಿವಾಸ್ಗೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ತಂದೆಯನ್ನು ನೋಡಿಕೊಂಡು ಬರಲು ಆಗುತ್ತಿಲ್ಲ ಎನ್ನುವ ಬೇಸರ ಕಾಡುತ್ತಿದೆಯಂತೆ.