‘ಕನಸಿನ ಅರಮನೆ ಉತ್ತರ ಕನ್ನಡ’: ಜಿಲ್ಲೆಯ ಕೊಂಡಾಡಿದ ಉಸ್ತುವಾರಿ ಸಚಿವೆ
ಕಾರವಾರ, ನವೆಂಬರ್ 2: 'ನನ್ನ ಉಸ್ತುವಾರಿ ಜಿಲ್ಲೆಯಾದ ಉತ್ತರ ಕನ್ನಡ ಕರ್ನಾಟಕದಲ್ಲೇ ಅತಿ ಹೆಚ್ಚು ಕಾಡನ್ನು ಹೊಂದಿರುವ, ಸರ್ವಋತುಗಳಲ್ಲೂ ಹಸಿರನ್ನೇ ಹೊದ್ದಿರುವ ಮಲೆನಾಡೂ ಹೌದು, ಕರಾವಳಿಯೂ ಹೌದು! ಒಂದೆಡೆ ಕರಾವಳಿಯ ಸುಂದರ ಸಮುದ್ರ ತೀರಗಳು, ಇನ್ನೊಂದೆಡೆ ಮಲೆನಾಡಿನ ಸಸ್ಯಶ್ಯಾಮಲೆ ಸೇರಿ ಪ್ರಕೃತಿ ಪ್ರಿಯರ, ಪ್ರವಾಸಿಗರ ಸ್ವರ್ಗವಾಗಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಟ್ವಿಟರ್ ನಲ್ಲಿ ಜಿಲ್ಲೆಯನ್ನು ಕೊಂಡಾಡಿದ್ದಾರೆ.
ಸಿಎಂ 'ತಂತಿಯ ಮೇಲಿನ ನಡಿಗೆ'ಗೆ ಸಚಿವೆ ಜೊಲ್ಲೆ ಹೀಗಂದ್ರು!
'ಪ್ರಕೃತಿಯ ಎಲ್ಲಾ ಸೌಂದರ್ಯವನ್ನು ಮನದಣಿಯೆ ಉಣಬಡಿಸುವ ತಾಣಗಳಿಗೆ ಇಲ್ಲಿ ಬರವಿಲ್ಲ. ಪ್ರಕೃತಿಯ ನಡುವೆ ಕರಗಿ ಹೋಗಬೇಕೆನ್ನುವವರ ಕನಸಿನ ಅರಮನೆ ನಮ್ಮ ಉತ್ತರ ಕನ್ನಡ, ಅರಸಿಕ ಮನಸ್ಸೂ ಇಲ್ಲಿ ಕವಿಯಾಗಬಹುದು. ಭಾವುಕ ಮನಸ್ಸು ಮೌನವಾಗಬಹುದು. ಹೊತ್ತು ತಾನಾಗಿಯೇ ಕರಗುತ್ತದೆ. ಕಾಲವೆಂಬುದನ್ನು ಸ್ಥಗಿತಗೊಳಿಸಿ, ಇಲ್ಲೇ ಉಳಿಯುವ ಮನ ನಿಮ್ಮದಾಗುತ್ತದೆ' ಎಂದು ಜಿಲ್ಲೆಯನ್ನು ವರ್ಣಿಸಿದ್ದಾರೆ.
ನಿನ್ನೆ ರಾಜ್ಯೋತ್ಸವದ ಭಾಷಣದಲ್ಲಿ ಕೂಡ ಜಿಲ್ಲೆಯ ಬಗ್ಗೆ ಅಭಿಮಾನದ ಮಾತುಗಳನ್ನು ಅವರು ಆಡಿದ್ದರು. 'ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯನ್ನು ಹೊಂದಿರುವ ಉತ್ತರ ಕನ್ನಡ ಅಪಾರ ವೈವಿಧ್ಯವನ್ನು ಮೇಳೈಸಿಕೊಂಡಿರುವ ಜಿಲ್ಲೆ. ಇಲ್ಲಿನ ವಿವಿಧ ಜನಸಮುದಾಯಗಳ ಸಂಪ್ರದಾಯ, ಜಾನಪದ ಕಲೆ, ಸಾಹಿತ್ಯ ಸಮೃದ್ಧಿಯಾಗಿದೆ. ವಿಶೇಷವಾಗಿ ಸಿದ್ದಿ, ಟಿಬೆಟಿಯನ್, ಗೊಂಡ, ಹಾಲಕ್ಕಿ, ಗೌಳಿ ಹೀಗೆ ವಿವಿಧ ಸಮುದಾಯಗಳ ಜಾನಪದ ಕಲೆಗಳನ್ನು ಪೋಷಿಸಲಾಗಿದೆ. ಈ ಹಿಂದೆ ಏಕೀಕರಣದ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆ ಕನ್ನಡದ ಹಲವಾರು ಸೊಬಗನ್ನು ಹೊಂದಿರುವ ಕರ್ನಾಟಕದ ವೈವಿಧ್ಯಮಯ ಜಿಲ್ಲೆಯೆಂದು ಪ್ರತಿಪಾದಿಸಲಾಗಿದೆ. ಪ್ರವಾಸೋದ್ಯಮ ಜಿಲ್ಲೆಯ ಜೀವನಾಡಿ. ಇಡೀ ವಿಶಾಲ ಜಿಲ್ಲೆಯ ಎಲ್ಲ ತಾಲೂಕುಗಳೂ ವಿಭಿನ್ನ, ವಿಶಿಷ್ಟ ಪ್ರವಾಸೋದ್ಯಮ ತಾಣಗಳನ್ನು ಪಡೆದು ಜಗತ್ತಿನ ಜನರನ್ನು ಆಕರ್ಷಿಸುತ್ತಿವೆ. ದಟ್ಟಾರಣ್ಯಗಳು, ನೈಸರ್ಗಿಕ ಜಲಪಾತಗಳು ನಯನ ಮನೋಹರ. ಒಂದು ಕಡೆ ಪಶ್ಚಿಮ ಘಟ್ಟಗಳ ಸಾಲು, ಮತ್ತೊಂದೆಡೆ ಕಡಲತೀರ... ಹೀಗೆ ವಿಸ್ಮಯಗಳು, ಐತಿಹಾಸಿಕ ತಾಣಗಳು, ವೈವಿಧ್ಯಮಯ ಪರಂಪರೆಯ ನೆಲೆವೀಡು ನಮ್ಮಜಿಲ್ಲೆ. ಇದು ನಮ್ಮ ಹೆಮ್ಮೆ' ಎಂದರು.
ಸಬಾ ನಖ್ವಿ, ಸಾಂಬಾರ್ ಪುಡಿ, ಅನಂತ ಕುಮಾರ್; ಟ್ವಿಟ್ಟರ್ ನಲ್ಲಿ ಏನಿದು ರಗಳೆ?
'ಉತ್ತರ ಕನ್ನಡ ಜಿಲ್ಲೆಯ ಜನತೆ ಅತ್ಯಂತ ಪ್ರಜ್ಞಾವಂತರು. ಈ ನೆಲದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಆರಾಧಿಸುವವರು. ಕನ್ನಡದ ಮೊದಲ ದೊರೆ ಕದಂಬರ ರಾಜಧಾನಿ, ಐತಿಹಾಸಿಕ ಬನವಾಸಿ ಇರುವ ಜಿಲ್ಲೆ ಹಾಗೂ ಕನ್ನಡನಾಡು, ನುಡಿ, ಭಾಷೆ, ನೆಲ, ಜಲ ವಿಷಯಗಳಿಗೆ ಹೆಚ್ಚು ಸ್ಪಂದನೆ ನೀಡುವ ಈ ಜಿಲ್ಲೆಯಲ್ಲಿ ಕನ್ನಡ ಬಾವುಟವನ್ನು ಏರಿಸುವ ಸದಾವಕಾಶ ದೊರೆತಿರುವುದು ನನ್ನ ಪುಣ್ಯ' ಎಂದೂ ಅವರು ಹೇಳಿದರು.