"ಈ ಸಲನಾದ್ರೂ ಮದುವೆ ಮಾಡ್ಸು ದೇವ್ರೆ" ಬಾಳೆಹಣ್ಣಲ್ಲಿ ಹೀಗೊಂದು ಕೋರಿಕೆ
ಕಾರವಾರ, ಫೆಬ್ರವರಿ 26: ದೇವರ ಬಳಿ ತಮ್ಮ ಕೋರಿಕೆಗಳನ್ನು ಈಡೇರಿಸುವಂತೆ ಭಕ್ತರು ಯಾವ್ಯಾವ ಪರಿಯಲ್ಲಿ ಬೇಡಿಕೊಳ್ಳಬಹುದು? ಯಾವ್ಯಾವ ಹರಕೆಗಳನ್ನು ಕಟ್ಟಿಕೊಳ್ಳಬಹುದು? ಕೆಲವರು ಮನಸ್ಸಿನಲ್ಲಿ ಬೇಡಿಕೊಂಡು, ನನ್ನ ಈ ಕೋರಿಕೆ ಈಡೇರಿದರೆ ಇಂಥದ್ದನ್ನು ಕೊಡುತ್ತೇನೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಇನ್ನೂ ಕೆಲವರು ಚೀಟಿಯಲ್ಲಿ ಬರೆದು, ದೇವರಿಗೆ ಅದನ್ನು ಅರ್ಪಿಸಿ, ಆ ಕೋರಿಕೆ ಈಡೇರುವಂತೆ ಬೇಡಿಕೊಳ್ಳುತ್ತಾರೆ.
ಆದರೆ ಗೋಕರ್ಣದಲ್ಲಿ ಬಾಳೆಹಣ್ಣಿನ ಮೂಲಕ ಭಕ್ತರು ಇಂಥ ಕೆಲವು ಕೋರಿಕೆಗಳನ್ನು ದೇವರಿಗೆ ತಲುಪಿಸಿದ್ದಾರೆ. ಬಾಳೆಹಣ್ಣಿನ ಮೂಲಕ ತಮ್ಮ ಮನದ ಈ ಇಂಗಿತಗಳನ್ನು ಈಡೇರಿಸುವಂತೆ ಕೇಳಿಕೊಂಡಿದ್ದಾರೆ.
'ನೋಟಿನ ಮೇಲೆ ಲಕ್ಷ್ಮಿ ಚಿತ್ರ ಮುದ್ರಿಸಿ ರೂಪಾಯಿ ಮೌಲ್ಯ ಹೆಚ್ಚಿಸಬಹುದು'
"ಈ ಸಲನಾದ್ರು ಮದುವೆ ಮಾಡಿಸು ದೇವರೇ" ಎಂದು ಗೋಕರ್ಣದ ಮಹಾಬಲೇಶ್ವರ ಬಳಿ ಕೇಳಿಕೊಂಡಿದ್ದಾರೆ ಒಬ್ಬರು. ಇದೇ ಸೋಮವಾರ ಗೋಕರ್ಣದಲ್ಲಿ ಮಹಾಬಲೇಶ್ವರ ದೇವಸ್ಥಾನದಲ್ಲಿ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ರಥಬೀದಿಯಲ್ಲಿ ತೇರು ಕೂಡ ಸಾಗಿತ್ತು. ಈ ವೇಳೆ ತಮ್ಮ ಕೋರಿಕೆಗಳನ್ನು ಬಾಳೆ ಹಣ್ಣಿನ ಮೇಲೆ ಬರೆದು ಭಕ್ತರು ತೇರಿಗೆ ಎಸೆದಿದ್ದಾರೆ. ಈ ಸಂದೇಶವಿರುವ ಬಾಳೆಹಣ್ಣುಗಳು ನಂತರ ಸಿಕ್ಕಿವೆ.
ಈ ಸಲನಾದ್ರು ಮದುವೆ ಮಾಡಿಸು ದೇವರೇ ಎಂದು, ನನ್ನ ಹುಡುಗಿ ನನಗೆ ಸಿಗಲಿ ಎಂದು, ಒಂದು ದಿನನಾದ್ರು ಒಳ್ಳೆದಾಗಲಿ, ದುಡ್ಡು ಇಲ್ಲ ದೇವರೇ ಎಂದು ಸಂದೇಶಗಳನ್ನು ಬರೆದು ಹಾಕಿದ್ದಾರೆ.