ಕಾರವಾರ: ಕುದಿಯುವ ಎಣ್ಣೆಯಲ್ಲಿ ಬರಿಗೈಯಿಂದ ವಡೆ ತೆಗೆದ ಭಕ್ತರು
ಕಾರವಾರ, ಅಕ್ಟೋಬರ್ 26: ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯ ಧಾರೇಶ್ವರ ಗುಡಬಳ್ಳಿಯಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಮಹಾಗಣಪತಿ ಮಹಾಮ್ಮಾಯಿ ಮಹಿಷಾಸುರ ಮರ್ಧಿನಿ ದೇವಸ್ಥಾನದಲ್ಲಿ ಭಕ್ತರು ಕುದಿಯುತ್ತಿರುವ ಬಿಸಿ ಎಣ್ಣೆ ಬಂಡಿಯಲ್ಲಿ ವಡೆಯನ್ನು ಬರಿಗೈಯಿಂದಲೇ ತೆಗೆದರು.
ಗುಡಬಳ್ಳಿಯ ಮಹಿಷಾಸುರ ಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಭಕ್ತರು ನೀಡಿದ ಹೂವಿನಿಂದ ಶ್ರೀದೇವಿಯನ್ನು ಅಲಂಕೃತಗೊಳಿಸಿ, ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬೆಳಗ್ಗೆಯಿಂದ ಸಂಜೆವರೆಗೂ ಭಕ್ತರು ಆಗಮಿಸಿ, ಶ್ರೀದೇವಿಯ ದರ್ಶನ ಪಡೆದು ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು.
ರೈತರ ವರ್ಷದ ಕೂಳು ಕಸಿದುಕೊಂಡ ಎರಡು ದಿನದ ಧಾರಾಕಾರ ಮಳೆ
ದೇವಿಯು ಭಕ್ತರ ಇಷ್ಟಾರ್ಥಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿರುವುದರಿಂದ ಭಕ್ತರು ತಮ್ಮ ಕೈಲಾದ ಸೇವೆಗಳನ್ನು ದೇವಿಗೆ ಸಲ್ಲಿಸಿದರು. ಅಲ್ಲದೆ ತಾಲೂಕು ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಆಗಮಿಸುವ ಭಕ್ತರು, ದೇವಿಗೆ ವಿವಿಧ ಪೂಜಾ ಸೇವೆ ಸಮರ್ಪಿಸುತ್ತಾರೆ. ದೇವಿಯ ಅಲಂಕಾರವನ್ನು ಕಣ್ತುಂಬಿಕೊಂಡ ಭಕ್ತರು ಹಣ್ಣು, ಕಾಯಿ ಪೂಜಾ ಸೇವೆ ಸಲ್ಲಿಸಿ, ತೀರ್ಥ ಪ್ರಸಾದ ಸ್ವೀಕರಿಸಿ ಧನ್ಯರಾದರು.
ವಿಜಯದಶಮಿ ದಿನ ಪ್ರತಿ ವರ್ಷದಂತೆ ಈ ವರ್ಷವೂ ಕುದಿಯುವ ಎಣ್ಣೆಯಲ್ಲಿ ವಡೆಯನ್ನು ಬರಿಗೈಯಿಂದಲೇ ತೆಗೆಯುವ ಕಾರ್ಯಕ್ರಮ ಭಕ್ತರಲ್ಲಿ ಭಕ್ತಿಯ ಸಂಚಲನ ಮೂಡಿಸಿತು. ಭಕ್ತ ಅಶೋಕ ರಾಯ್ಕರ ಅವರು ದೇವಿಯ ನಾಮಸ್ಮರಣೆ ಮಾಡುತ್ತ ಕುದಿಯುತ್ತಿರುವ ಎಣ್ಣೆಯಲ್ಲಿ ಕೈಹಾಕಿ ವಡೆ ತೆಗೆಯುವ ದೃಶ್ಯ ರೋಮಾಂಚನ ಮೂಡಿಸಿತ್ತು. ಮಹಾ ಮಂಗಳಾರತಿ ನಂತರ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ದೇವರ ಪಲ್ಲಕಿ ಉತ್ಸವ, ಭಜನಾ ಕಾರ್ಯಕ್ರಮ ನಡೆಯಿತು. ತಾಲೂಕು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ರಾಜ್ಯದಿಂದ ಆಗಮಿಸಿದ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
Recommended Video
ಆಡಳಿತ ಮಂಡಳಿಯ ಅಧ್ಯಕ್ಷ ರಾಮದಾಸ ರಾಯ್ಕರ್ ಮಾತನಾಡಿ, ಈ ದೇವರು ಗೋವಾ ಮೂಲದ್ದು, ಅಲ್ಲಿಂದ ಈ ದೇವರನ್ನು ಗುಡಬಳ್ಳಿಗೆ ತಂದು ಪ್ರತಿಷ್ಠಾಪಿಸಲಾಯಿತು. ವಿವಿಧ ಹಬ್ಬಗಳಲ್ಲೂ ವಿಶೇಷ ಪೂಜೆ ಮತ್ತು ಆಚರಣೆ ನಡೆಸಲಾಗುತ್ತದೆ. ವಿಜಯದಶಮಿ ನಿಮಿತ್ತ ಒಡೆ ತೆಗೆಯುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತದೆ.