ಜುಲೈ 5 ಕ್ಕೆ ಬಜೆಟ್ ಮಂಡನೆ, ಯಾವುದೇ ಅನುಮಾನವಿಲ್ಲ: ದೇವೇಗೌಡ
Recommended Video
ಕಾರವಾರ, ಜೂನ್ 25 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜುಲೈ 5 ರಂದು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಎರಡು ಪಕ್ಷದವರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.
ಬಜೆಟ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?, ವಿಡಿಯೋ ವೈರಲ್
ಚುನಾವಣೆ ಪೂರ್ವದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದಲ್ಲಿ ಮೂರು ತಿಂಗಳಲ್ಲಿ ಸನ್ನಿಧಾನಕ್ಕೆ ಬಂದು ಪೂಜೆ ಸಲ್ಲಿಸುವುದಾಗಿ ಇಡಗುಂಜಿ ಮಹಾಗಣಪತಿಗೆ ದೇವೇಗೌಡರು ಹರಕೆ ಹೊತ್ತಿದ್ದರಂತೆ.
ಅದರಂತೆ ಹಾಗೂ ಮುಂದಿನ ಲೋಕಸಭಾ ಚುನಾವಣೆಯ ಗೆಲುವಿಗಾಗಿ ಸೋಮವಾರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇಷ್ಟಾರ್ಥ ಸಿದ್ಧಿಗಾಗಿ ದೇವಸ್ಥಾನದಲ್ಲಿ ಗಣಹವನ, ಅಭಿಷೇಕ ಮತ್ತು ಪಂಚಕಜ್ಜಾಯ ಸೇವೆ ಮಾಡಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಹೊಂದಾಣಿಕೆಯೊಂದಿಗೆ ಕೆಲಸ ಮಾಡುತ್ತಿವೆ. ಈ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಇಡಗುಂಜಿ ವಿನಾಯಕ ದೇವಸ್ಥಾನವು ಒಂದು ಶಕ್ತಿ ಕೇಂದ್ರ. ಇಲ್ಲಿಗೆ ಬಹಳ ದಿನದ ಮೇಲೆ ಭೇಟಿ ನೀಡಿದ್ದೇನೆ. ಮನಸ್ಸಿನಲ್ಲಿರುವ ಸಂಕಲ್ಪದಂತೆ ಪೂಜೆ ಸಲ್ಲಿಸಿದ್ದೇನೆ. ಅಭಿಮಾನಿಗಳು ಗಣಹೋಮ ಮಾಡಿಸಿದ್ದಾರೆ.
ಅಲ್ಲದೆ, ಹಳೆಯ ಸ್ನೇಹಿತರಾದ ಗಣಪಯ್ಯ ಗೌಡರ ಮಗನ ಮದುವೆಗೆ ತೆರಳಿ, ನವ ವಿವಾಹಿತರಿಗೆ ಆಶೀರ್ವದಿಸಿ ಬೆಂಗಳೂರಿಗೆ ತೆರಳುತ್ತೇನೆ. ಈ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದರು.
ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಕುಮಟಾ ಜೆಡಿಎಸ್ ಮುಖಂಡ ಪ್ರದೀಪ ನಾಯ್ಕ, ಸೇರಿದಂತೆ ಜೆಡಿಎಸ್ ಬೆಂಬಲಿಗರು ಇದ್ದರು.