ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಫೆ.24ಕ್ಕೆ ಶಿರಸಿ ಬಂದ್ಗೆ ಕರೆ
ಕಾರವಾರ, ಫೆಬ್ರವರಿ 9: ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಘೋಷಣೆಯಾದ ಬೆನ್ನಲ್ಲೇ, ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಿ, ಶಿರಸಿ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಕೂಗು ಹೆಚ್ಚಾಗಿದೆ.
ಇನ್ನು ಶಿರಸಿ ಜಿಲ್ಲೆಗೆ ಆಗ್ರಹಿಸಿ ಫೆ.24ರಂದು ಶಿರಸಿ ಬಂದ್ ಮಾಡಲು ಹೋರಾಟಗಾರರು ಒಂದೆಡೆ ತೀರ್ಮಾನಿಸಿದರೆ, ಇನ್ನೊಂದೆಡೆ ಯಲ್ಲಾಪುರ ಕೇಂದ್ರವಾಗಿಟ್ಟುಕೊಂಡು ಜಿಲ್ಲೆಯನ್ನಾಗಿ ಮಾಡಿ ಎನ್ನುವ ಕೂಗು ಕೇಳಿಬರುತ್ತಿದೆ.
ಜಿಲ್ಲೆಯ ರಚನೆ ಸಂಬಂಧ ಸೋಮವಾರ ಶಿರಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ, ಫೆ.24ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿರಸಿಯಲ್ಲಿ ಸ್ವಯಂಪ್ರೇರಿತ ಬಂದ್ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸಂಘಟನೆಗಳ ಸಹಕಾರದಿಂದ ಬೃಹತ್ ಮೆರವಣಿಗೆ
ಶಿರಸಿ ಜಿಲ್ಲೆಯ ರಚನೆ ಹೋರಾಟ ಸಂಪೂರ್ಣವಾಗಿ ಯಶಸ್ವಿಗೊಂಡು ಸರಕಾರದ ಗಮನ ಸೆಳೆಯಲು ನಗರದ ಜನರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡಿರುವ ಹೋರಾಟ ಸಮಿತಿ, ನಗರದ ಎಲ್ಲಾ ಸಂಘಟನೆಗಳ ಸಹಕಾರದಿಂದ ಬೃಹತ್ ಮೆರವಣಿಗೆ ನಡೆಸುತ್ತ ಜನಾಂದೋಲನ ಮಾಡಲಾಗುವುದು ಎಂದಿದ್ದಾರೆ.
ಕಾರವಾರ-ಬೆಂಗಳೂರು ರೈಲು ಪ್ರಯಾಣ ಅವಧಿ ಕಡಿತ?
ಬಂದ್ ಮಾಡುವ ಮೂಲಕ ಜನಾಂದೋಲನ
ಈಗಾಗಲೇ ಸರಕಾರದ ಗಮನ ಸೆಳೆಯಲು ಪತ್ರ ಚಳುವಳಿ, ಪಂಜಿನ ಮೆರವಣಿಗೆ, ತಮಟೆ ಮೆರವಣಿಗೆ ಮಾಡಲಾಗಿದ್ದು, ಹೋರಾಟ ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಬಂದ್ ಮಾಡುವ ಮೂಲಕ ಜನಾಂದೋಲನ ಮಾಡಲಾಗುತ್ತಿದೆ. ಸಮಿತಿಯ ಪದಾಧಿಕಾರಿಗಳು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ, ಕಂದಾಯ ಸಚಿವರು, ಉಸ್ತುವಾರಿ ಸಚಿವರು ಹಾಗೂ ವಿಧಾನಸಭಾಧ್ಯಕ್ಷರುಗಳಿಗೆ ಶಿರಸಿ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಮನವಿ ಮಾಡಿಕೊಂಡು ಬಂದಿದ್ದು, ಜಿಲ್ಲೆ ರಚನೆ ಆಗುವ ವರೆಗೂ ನಮ್ಮ ಹೋರಾಟ ನಿರಂತರ ಎಂದು ಹೇಳಿದ್ದಾರೆ.
ಯಲ್ಲಾಪುರ ಜಿಲ್ಲೆಯನ್ನಾಗಿ ಮಾಡಿ
ಶಿರಸಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಹೋರಾಟ ಚುರುಕುಗೊಂಡಿರುವುದರ ನಡುವೆ ಯಲ್ಲಾಪುರ ಕೇಂದ್ರವನ್ನಾಗಿಟ್ಟುಕೊಂಡು ಜಿಲ್ಲೆಯನ್ನಾಗಿ ಮಾಡಿ ಎನ್ನುವ ಕೂಗು ಪ್ರಾರಂಭವಾಗಿದ್ದು, ಯಲ್ಲಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯವರು ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
Recommended Video
ಯಲ್ಲಾಪುರ ಎಲ್ಲಾ ತಾಲ್ಲೂಕಿಗೂ ಮಧ್ಯದಲ್ಲಿದೆ
ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಿ ಶಿರಸಿ ಕೇಂದ್ರವಾಗಿಟ್ಟುಕೊಂಡು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಚರ್ಚೆ ನಡೆಯುತ್ತಿದೆ. ಇದಕ್ಕೆ ನಮ್ಮ ಸಹಮತವಿಲ್ಲ. ಒಂದೊಮ್ಮೆ ಘಟ್ಟದ ಮೇಲಿನ ತಾಲ್ಲೂಕುಗಳನ್ನು ಒಳಗೊಂಡು ಜಿಲ್ಲೆಯನ್ನಾಗಿ ಮಾಡಲೇಬೇಕು ಎಂದಾದರೆ, ಯಲ್ಲಾಪುರ ಕೇಂದ್ರವನ್ನಾಗಿಟ್ಟುಕೊಂಡು ಜಿಲ್ಲೆಯನ್ನು ಮಾಡಿ ಎಂದು ಆಗ್ರಹಿಸಿದ್ದಾರೆ.
ಘಟ್ಟದ ಮೇಲಿನ ತಾಲೂಕುಗಳಲ್ಲಿ ಯಲ್ಲಾಪುರ ಮಧ್ಯ ಸ್ಥಾನದಲ್ಲಿ ಬರುತ್ತದೆ. ಶಿರಸಿಗೆ ತೆರಳಬೇಕಾದರೆ ಹಳಿಯಾಳ, ಜೋಯಿಡಾ, ದಾಂಡೇಲಿ ಭಾಗದಿಂದ ದೂರವಾಗುತ್ತದೆ. ಆದರೆ ಯಲ್ಲಾಪುರ ಎಲ್ಲಾ ತಾಲ್ಲೂಕಿಗೂ ಮಧ್ಯ ಸ್ಥಾನದಲ್ಲಿದ್ದು, ಯಲ್ಲಾಪುರ ಜಿಲ್ಲೆಯನ್ನಾಗಿ ಮಾಡುವುದೇ ಸೂಕ್ತವಾಗಿದ್ದು, ಜಿಲ್ಲಾ ಕೇಂದ್ರಕ್ಕೆ ಬೇಕಾದ ಪೂರಕ ಅಂಶಗಳುಳ್ಳ ಮನವಿಯನ್ನು ಸಚಿವರಿಗೆ ಸಲ್ಲಿಸಿದ್ದಾರೆ.