ನೌಕಾಪಡೆಗಳ ಶಕ್ತಿ ಸಾಮರ್ಥ್ಯ ಹೆಚ್ಚಳ ಕಾರಣ ಬಿಚ್ಚಿಟ್ಟ ರಾಜನಾಥ್ ಸಿಂಗ್
ಕಾರವಾರ, ಮೇ 27: ಭಾರತೀಯ ನೌಕಾಪಡೆಯನ್ನು ಈಗ ಜಗತ್ತಿನ ಪ್ರಮುಖ ನೌಕಾಪಡೆಗಳ ಸಾಲಿನಲ್ಲಿ ನೋಡಲಾಗುತ್ತಿದೆ. ವಿಶ್ವದ ದೊಡ್ಡ ದೊಡ್ಡ ಪಡೆಗಳು ಕೂಡ ಈಗ ಭಾರತದ ಸಹಯೋಗಕ್ಕೆ ಕೈಚಾಚುತ್ತಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.
''ತಾಲ್ಲೂಕಿನ ಅರಗಾದಲ್ಲಿರುವ ಐಎನ್ಎಸ್ ಕದಂಬ ನೌಕಾನೆಲೆಗೆ ಎರಡು ದಿನ ಭೇಟಿಗೆ ಆಗಮಿಸಿದ ಅವರು ಸ್ವದೇಶಿ ನಿರ್ಮಿತ ಐಎನ್ಎಸ್ ಖಂಡೇರಿ ಜಲಾಂತರ್ಗಾಮಿಯಲ್ಲಿ ಸಮುದ್ರಯಾನ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ನೌಕಾಪಡೆಗಳ ಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿರುವುದು ಯಾರ ವಿರುದ್ಧದ ಹೋರಾಟಕ್ಕಲ್ಲ. ರಾಷ್ಟ್ರದ ಹಿತಾಸಕ್ತಿಗಾಗಿ ಭಾರತೀಯ ನೌಕಾಪಡೆ ಸೇರಿದಂತೆ ರಕ್ಷಣಾ ಪಡೆಗಳ ಬಲ ವೃದ್ಧಿಸಲಾಗುತ್ತಿದೆ. ಇದರ ಮೂಲಕ ಭಾರತೀಯ ಕರಾವಳಿ ನಿವಾಸಿಗಳಿಗೆ ಶಾಂತಿ ಒದಗಿಸಲು ಮತ್ತು ಸೌಹಾರ್ದತೆಗಾಗಿ,'' ಎಂದು ಹೇಳಿದರು.
ವಿಡಿಯೋ; ಕಾರವಾರದಲ್ಲಿ ಯೋಗ ಮಾಡಿದ ರಾಜನಾಥ್ ಸಿಂಗ್
ಈ ವರ್ಷ ಆಚರಣೆಗೊಳ್ಳುತ್ತಿರುವ ಆಜಾ ದಿ ಕಾ ಅಮೃತ್ ಮಹೋತ್ಸವಕ್ಕಾಗಿ ಐಎನ್ಎಸ್ ವಿಕ್ರಾಂತ್ ಸಿದ್ಧಗೊಳ್ಳುತ್ತಿದೆ. ಐಎನ್ಎಸ್ ವಿಕ್ರಾಂತ್ ಮತ್ತು ಐಎನ್ಎಸ್ ವಿಕ್ರಮಾದಿತ್ಯ ಎರಡೂ ಸೇರಿ ಭಾರತೀಯ ಸಾಗರ ರಕ್ಷಣೆಗೆ ಹೆಚ್ಚಿನ ಶಕ್ತಿ ನೀಡುತ್ತಿದೆ ಎಂಬ ವಿಶ್ವಾಸವಿದೆ.
ಹಿಂದೂ ಮಹಾ ಸಾಗರದಲ್ಲಿರುವ ರಾಷ್ಟ್ರಗಳ ನಡುವೆ ಶಾಂತಿ ಸಮೃದ್ಧಿಯನ್ನು ಸ್ಥಾಪಿಸುವದಕ್ಕಾಗಿ ಭಾರತೀಯ ರಕ್ಷಣಾ ಪಡೆಗಳ ಶಕ್ತಿ ವೃದ್ಧಿಸಲಾಗುತ್ತಿದೆ ಹೊರತು ಯಾವುದೇ ದೇಶವನ್ನು ಕೆರಳಿಸುವುದಕ್ಕಾಗಲಿ ಅಥವಾ ಅವರ ವಿರುದ್ಧದ ಹೋರಾಟಕ್ಕಲ್ಲ ಎಂದರು. ಈ ಸಂದರ್ಭದಲ್ಲಿ ನೌಕಾಪಡೆಯ ಮುಖ್ಯಸ್ಥ ಆರ್.ಹರಿಕುಮಾರ್, ಪಶ್ಚಿಮ ವಲಯ ಮುಖ್ಯಸ್ಥ ವೈಸ್ ಅಡ್ಮಿರಲ್ ಅಜೇಂದ್ರ ಬಹಾದೂರ್ ಸಿಂಗ್ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಇದ್ದರು.
ಆತ್ಮನಿರ್ಭರ್ ಭಾರತ ಅಭಿಯಾನಕ್ಕೆ ಶಕ್ತಿ ನೀಡಿದೆ
ಭಾರತೀಯ ನೌಕಾಪಡೆ ಲೋಕಾರ್ಪಣೆಗೊಳಿಸಿರುವ ವಿವಿಧ ದೇಶೀಯ ನೌಕೆಗಳು ಹಾಗೂ ಶಸ್ತ್ರಾಸ್ತ್ರಗಳು ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಭಾರತ ಅಭಿಯಾನಕ್ಕೆ ಶಕ್ತಿ ನೀಡಿದೆ. ಐ.ಎನ್.ಎಸ್ ಖಂಡೇರಿ ಮೇಕ್ ಇನ್ ಇಂಡಿಯಾ ಅಡಿ ನಿರ್ಮಿಸಲಾದ ಅತ್ಯಾಧುನಿಕ ಸಬ್ ಮರಿನ್ಗಳಲ್ಲೊಂದಾಗಿದೆ. ಈಗಾಗಲೇ ಬೇಡಿಕೆ ಸಲ್ಲಿಸಲಾಗಿರುವ 41 ಸಬ್ ಮರಿನ್ಗಳಲ್ಲಿ 39 ಸಬ್ ಮರಿನ್ಗಳು ಭಾರತೀಯ ಶಿಪ್ಯಾರ್ಡ್ನಲ್ಲಿ ತಯಾರಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಸಂಪೂರ್ಣ ಭಾರತೀಯ ನಿರ್ಮಿತ ಅತ್ಯಾಧುನಿಕ ಏರ್ಕ್ರಾಫ್ಟ್ ಕ್ಯಾರಿಯರ್ ಐ.ಎನ್.ಎಸ್ ವಿಕ್ರಾಂತ್ ನೌಕಾಪಡೆಗೆ ಸದ್ಯದಲ್ಲಿಯೇ ಸೇರ್ಪಡೆಗೊಳ್ಳಲಿದೆ ಎಂದರು.
ಭಾರತೀಯ ನೌಕಾದಳದ ಹೆಸರನ್ನು ವಿಶ್ವದ ಪ್ರಮುಖ ನೌಕಾಪಡೆಯೊಂದಿಗೆ ತೆಗೆದುಕೊಳ್ಳಲಾಗುತ್ತಿದೆ. ಭಾರತೀಯ ನೌಕಾಪಡೆಯು ವಿಶ್ವದಲ್ಲಿ ಅತ್ಯುತ್ತಮವಾದ ಗೌರವ ಹೊಂದಿದ್ದು, ಅಮೆರಿಕ ಸೇರಿದಂತೆ ಪ್ರಮುಖ ದೇಶಗಳ ನೌಕಾಪಡೆಯು ಭಾರತೀಯ ನೌಕಾಪಡೆಯೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ ಎಂದರು.
ಕದಂಬ ನೌಕಾನೆಲೆ ಸಿಬ್ಬಂದಿ ಜೊತೆ ರಕ್ಷಣಾ ಸಚಿವ ರಾಜನಾಥ್ ಆತ್ಮೀಯ ಮಾತುಕತೆ
ಐಎನ್ಎಸ್ ಕದಂಬ ನೌಕಾನೆಲೆಗೆ ಭೇಟಿ
ಐಎನ್ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಿರುವ ಕೇಂದ್ರ ಸಚಿವ ರಾಜನಾಥ ಸಿಂಗ್ ಐಎನ್ಎಸ್ ಖಂಡೇರಿ ಸಬ್ ಮೇರಿಯನ್ ಮೂಲಕ ಶುಕ್ರವಾರ ಸಮುದ್ರಯಾನ ನಡೆಸಿದರು. ಅರಗಾದ ಕದಂಬ ನೌಕಾನೆಲೆಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಬೆಳಿಗ್ಗೆ ಯೋಗಾಭ್ಯಾಸದ ಬಳಿಕ ಭಾರತೀಯ ತಂತ್ರಜ್ಞಾನದಿಂದ ನಿರ್ಮಾಣವಾದ ಐಎನ್ಎಸ್ ಖಂಡೇರಿ ಸಬ್ ಮೇರಿಯನ್ ಮೂಲಕ ಸಮುದ್ರಯಾನ ಕೈಗೊಂಡಿದ್ದರು. ಸಮುದ್ರ ವಿಹಾರದ ಸಮಯದಲ್ಲಿ ನೀರೊಳಗಿನ ಡೊಮೇನ್ನಲ್ಲಿ ನಡೆಸಿದ ವಿವಿಧ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಮುಂಬೈನ ಮಜಗಾನ ಡಾಕ್ಸ್ ನಲ್ಲಿ ನಿರ್ಮಿಸಲಾದ ಈ ಸಬ್ ಮರಿಯನ್ ಪ್ರಾಜೆಕ್ಟ್ 75 ಜಲಾಂತರ್ಗಾಮಿ ನೌಕೆಗಳಲ್ಲಿ ಎರಡನೇಯದಾಗಿದೆ. 2019 ರಲ್ಲಿ ರಕ್ಷಣಾ ಸಚಿವರಿಂದ ಸೇವೆಗೆ ಐಎನ್ಎಸ್ ಖಂಡೇರಿ ನಿಯುಕ್ತಿಗೊಂಡಿತ್ತು.
ಖಂಡೇರಿಯಲ್ಲಿ ರಾಜನಾಥ್ ಸಿಂಗ್ ಸಮುದ್ರಯಾನ
ಐಎನ್ಎಸ್ ಕದಂಬ ನೌಕಾನೆಲೆಗೆ ಎರಡು ದಿನ ಭೇಟಿಗೆ ಆಗಮಿಸಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ಸ್ವದೇಶಿ ನಿರ್ಮಿತ ಐಎನ್ಎಸ್ ಖಂಡೇರಿ ಜಲಾಂತರ್ಗಾಮಿ ನೌಕೆಯಲ್ಲಿ ಸಮುದ್ರಯಾನ ನಡೆಸಿದರು. ಬೆಳಗ್ಗೆ ಸೀಬರ್ಡ್ ನೌಕಾನೆಲೆಯಿಂದ ಸ್ವದೇಶಿ ನಿರ್ಮಿತ ಕಲ್ವಾರಿ ಕ್ಲಾಸ್ನ ಸಬ್ ಮೆರಿನ್ ಐಎನ್ಎಸ್ ಖಂಡೇರಿಯಲ್ಲಿ ಸಮುದ್ರಯಾನ ನಡೆಸಿದ ಸಚಿವರು ನಾಲ್ಕು ಗಂಟೆಗೂ ಹೆಚ್ಚು ಕಾಲ ಕಳೆದರು. ಈ ವೇಳೆ ನೌಕಾಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು.
ಖಂಡೇರಿ ನೌಕೆ ಹೇಗಿದೆ
ಖಂಡೇರಿಯೂ ಮೇಕ್ ಇನ್ ಇಂಡಿಯಾ ಉಪಕ್ರಮದ ಪ್ರಾಜೆಕ್ಟ್ 75 ಜಲಾಂತರ್ಗಾಮಿ ನೌಕೆಗಳಲ್ಲಿ ಎರಡನೇಯದ್ದಾಗಿದೆ. ಫ್ರಾನ್ಸ್ ಸಹಕಾರದಲ್ಲಿ ಮುಂಬೈನ ಮಜಗಾಂವ್ ಶಿಪ್ ಯಾರ್ಡ್ನಲ್ಲಿ ಈ ಸಬ್ ಮೆರಿನ್ ನಿರ್ಮಿಸಲಾಗಿದೆ. 350 ಮೀಟರ್ ಆಳದಲ್ಲಿ 50 ದಿನಗಳ ಕಾಲ ಗಸ್ತು ತಿರುಗುವ ಸಾಮರ್ಥ್ಯ ಹೊಂದಿರುವ ಈ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಯು ನೀರಿನ ಮೇಲ್ಮೈನಲ್ಲಿ 1,615 ಟನ್ ಮತ್ತು ನೀರಿನಾಳದಲ್ಲಿ 1,775 ಟನ್ ಭಾರವಿರಲಿದೆ. 221 ಫೀಟ್ ಉದ್ದದ, 40 ಫೀಟ್ ಎತ್ತರದ ಇದ್ದು, 2019ರಲ್ಲಿ ರಾಜನಾಥ್ ಸಿಂಗ್ ಅವರೇ ರಕ್ಷಣಾ ಸಚಿವರಿದ್ದಾಗ ಲೋಕಾರ್ಪಣೆಗೊಳಿಸಿದ್ದರು.